ಮಂಗಳೂರು: ನಗರದ ಸುರತ್ಕಲ್ ಬಳಿಯ ಮುಂಚೂರು ಸಮೀಪದ ರೈಲ್ವೇ ಹಳಿ ಬಳಿಯ ಬಾಡಿಗೆ ಮನೆಯಲ್ಲಿ ನಗದು ಸಹಿತ ಚಿನ್ನ, ಬೆಳ್ಳಿ ಸೊತ್ತುಗಳನ್ನು ಕಳವುಗೈದಿದ್ದ ಕಳ್ಳನನ್ನು 24 ಗಂಟೆಯಲ್ಲೇ ಪೊಲೀಸರು ಬಂಧಿಸಿದ್ದಾರೆ.
ಹೊಸಕೋಟೆ ನಿವಾಸಿ ಜಂಬಯ್ಯ (24) ಬಂಧಿತ ಆರೋಪಿ. ಕಳವು ಆರೋಪಿ ಕೃತ್ಯಕ್ಕೆ ಬಳಸಿದ್ದ ಕಾರು ಹಾಗೂ ಮೊಬೈಲ್ ಅನ್ನು ವಶಕ್ಕೆ ಪಡೆಯಲಾಗಿದೆ.
ಕಾರ್ಮಿಕ ದಂಪತಿಗಳಾದ ಕಲ್ಲೇಶ್ವರ ಶೇಖಪ್ಪ ನೆಲವಡಿ ಕಳೆದ 13 ವರ್ಷಗಳಿಂದ ಮಂಗಳೂರು ವಾಸಿಗಳಾಗಿದ್ದಾರೆ. ದಂಪತಿ ಕೆಲಸಕ್ಕೆ ಹೋಗಿ, ವಾಪಸು ಬಂದಾಗ ಮನೆಯ ಮುಂಬಾಗಿಲಿನ ಬೀಗವನ್ನು ಯಾರೋ ಕಳ್ಳರು ಒಡೆದು ಮನೆಯ ಹಾಲ್ನಲ್ಲಿ ಇಟ್ಟಿದ್ದ ಕಪಾಟಿನ ಬಾಗಿಲನ್ನು ತೆರೆದು ಅದರ ಒಳಗಿದ್ದ 2.50 ಲಕ್ಷ ರೂ ಮೌಲ್ಯದ ಚಿನ್ನ, ಬೆಳ್ಳಿಯ ಆಭರಣ ಮತ್ತು ನಗದು ಸುಮಾರು 50 ಸಾವಿರ ರೂ. ಕಳವು ಮಾಡಿದ್ದರು.
ಈ ಬಗ್ಗೆ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪಡುಬಿದ್ರೆಯ ನಂದಿಕೂರು ಬಳಿ ಆರೋಪಿಯನ್ನು ಬಂಧಿಸಿದ್ದಾರೆ. ಕಳವಾದ ನಗದು, ಸೊತ್ತುಗಳನ್ನೂ ವಶಕ್ಕೆ ಪಡೆದಿರುವ ಪೊಲೀಸರು ಕೃತ್ಯಕ್ಕೆ ಬಳಸಿರುವ ಕಾರು, ಮೊಬೈಲ್ ಅನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.