"ವಿಧಾನಸಭೆಯೊಳಗೆ ಮಾತ್ರ ಗಲಾಟೆ ನಡೆಯುತ್ತೆ, ಹೊರಗಡೆ ಎಲ್ಲರೂ ಸ್ನೇಹಿತರೇ ಆಗಿರುತ್ತಾರೆ"-ಬಂಟರ ಮಾತೃಸಂಘದ ಗಣೇಶೋತ್ಸವ ಧಾರ್ಮಿಕ ಸಭೆಯಲ್ಲಿ ಸ್ಪೀಕರ್ ಯು.ಟಿ. ಖಾದರ್

ಮಂಗಳೂರು: "ಬಂಟರ ಯಾನೆ ನಾಡವರ ಮಾತೃಸಂಘದ ಎಲ್ಲಾ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯುತ್ತವೆ. ಬಂಟರು ಮಾತ್ರವಲ್ಲದೆ ಸಮಾಜದ ಎಲ್ಲಾ ವರ್ಗಗಳ ಜನರನ್ನು ಒಗ್ಗೂಡಿಸಿ ನಡೆಯುವ ಗಣೇಶೋತ್ಸವದಂತಹ ಕಾರ್ಯಕ್ರಮಗಳು ಸಮಾಜಕ್ಕೆ ಮಾದರಿಯಾಗಲಿ. ಈ ಮೂಲಕ ಎಲ್ಲಾ ಜಾತಿ ಧರ್ಮಗಳ ಜನರ ಮಧ್ಯೆ ಪ್ರೀತಿ, ಸೋದರತೆ ಬೆಳೆದು ಸ್ವಸ್ಥ ಸಾಮರಸ್ಯದ ಸಮಾಜ ನಿರ್ಮಾಣವಾಗಲಿ. ನಾನು ಸ್ಪೀಕರ್ ಆದ ಬಳಿಕ ಪ್ರತಿಪಕ್ಷಗಳಿಗೆ ಹೆಚ್ಚಿನ ಅವಕಾಶ ಕೊಟ್ಟು ಸರಕಾರವನ್ನು ಸೂಕ್ತ ರೀತಿಯಲ್ಲಿ ನಡೆಯಲು ನನ್ನಿಂದಾದ ಸಹಕಾರ ನೀಡುತ್ತಿದ್ದೇನೆ. ಆದರೆ ಇದೇ ಕಾರಣಕ್ಕೆ ಸ್ಪೀಕರ್ ಸರಿಯಿಲ್ಲ ಎನ್ನುವವರೂ ಇದ್ದಾರೆ. ವಿಧಾನಸಭೆಯಲ್ಲಿ ನಡೆಯುವ ಗಲಾಟೆಗಳು ಕೇವಲ ಅಲ್ಲಿಗೆ ಮಾತ್ರ ಸೀಮಿತವಾಗಿರುತ್ತೆ ಹೊರಗಡೆ ಎಲ್ಲಾ ಪಕ್ಷಗಳ ನಾಯಕರು ಹೆಗಲ ಮೇಲೆ ಕೈಹಾಕಿಕೊಂಡು ಸ್ನೇಹಿತರಂತೆ ಇರುತ್ತಾರೆ. ಹೀಗಾಗಿ ಕೇವಲ ಗಲಾಟೆಯನ್ನು ಮಾತ್ರ ಟಿವಿಯಲ್ಲಿ ನೋಡಿ ಇಲ್ಲಿ ಗಲಾಟೆ ಮಾಡಿಕೊಳ್ಳಬೇಡಿ" ಎಂದು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಕಿವಿಮಾತು ಹೇಳಿದರು.


ಅವರು ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ದ.ಕ., ಉಡುಪಿ ಹಾಗೂ ಕಾಸರಗೋಡಿನ ವಿವಿಧ ಬಂಟರ ಸಂಘಗಳ ಸಹಭಾಗಿತ್ವದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಅಂಗವಾಗಿ ಬಂಟ್ಸ್ ಹಾಸ್ಟೆಲ್ ನ ಓಂಕಾರ‌ ನಗರದಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತಾಡಿದರು.



"ಬಂಟ್ಸ್ ಹಾಸ್ಟೆಲ್ ನಲ್ಲಿ ಕೇವಲ ಬಂಟರು ಮಾತ್ರವಲ್ಲದೆ ಹಿಂದೂ ಮುಸ್ಲಿಂ ಕ್ರೈಸ್ತರು ಎಲ್ಲರೂ ವಾಸ್ತವ್ಯವಿದ್ದು ಕಲಿಯುತ್ತಿದ್ದಾರೆ. ಇದು ಇಡೀ ಸಮಾಜಕ್ಕೆ ಮಾದರಿ. ಎಲ್ಲರನ್ನು ಒಗ್ಗೂಡಿಸುವ ಶಕ್ತಿ ಬಂಟ ಸಮಾಜಕ್ಕೆ ಇದ್ದು ಆ ಜವಾಬ್ದಾರಿಯನ್ನು ಬಂಟ ಸಮುದಾಯದ ಹಿರಿಯರು ತೆಗೆದುಕೊಳ್ಳಬೇಕು. ಗಣೇಶೋತ್ಸವ ಅನ್ನುವ ಧಾರ್ಮಿಕ ಕಾರ್ಯಕ್ರಮದ ಮೂಲಕ ಸಮಾಜದಲ್ಲಿ ಶಾಂತಿ ನೆಲೆಸಲಿ, ಗಣೇಶನ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ" ಎಂದು ಶುಭ ಹಾರೈಸಿದರು.


ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ, ಸಿದ್ದಿವಿನಾಯಕ ಪ್ರತಿಷ್ಠಾನದ ಟ್ರಸ್ಟಿ ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷತೆ ವಹಿಸಿದ್ದರು.


ಬಂಟರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕೆ.ಎಮ್ ಶೆಟ್ಟಿ, ಕೋಶಾಧಿಕಾರಿ ರಾಮಮೋಹನ್ ರೈ, ಶ್ರೀ ಸಿದ್ದಿ ವಿನಾಯಕ ಪ್ರತಿಷ್ಠಾನದ ಟ್ರಸ್ಟಿಗಳಾದ ಕೃಷ್ಣ ಪ್ರಸಾದ್ ರೈ, ನಿಟ್ಟೆಗುತ್ತು ರವಿರಾಜ ಶೆಟ್ಟಿ, ಜಿಲ್ಲಾ ಸಂಚಾಲಕ ಬಿ.ನಾಗರಾಜ ಶೆಟ್ಟಿ,  ಎಮ್ ಸಂಜೀವ ಶೆಟ್ಟಿ ಕಾಸರಗೋಡು ಉಪಸ್ಥಿತರಿದ್ದರು.
BREAKING NEWS
Loading latest news...
Join our WhatsApp Channel Powered By : Online Pudu