ಮುಲ್ಕಿ: ಜಲಾವೃತಗೊಂಡ ಬಪ್ಪನಾಡು ಕ್ಷೇತ್ರ - ಶ್ರೀದೇವಿ ಇಂದು ಜಲದುರ್ಗೆಯೆನಿಸಿ ಪೂಜೆ ಸ್ವೀಕಾರ, ಮಧೂರು ಸಿದ್ಧಿವಿನಾಯಕನ ಆಲಯಕ್ಕೆ ಜಲದಿಗ್ಬಂಧನ


ಮುಲ್ಕಿ: ಕಳೆದ ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಮುಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವು ನೀರು ನುಗ್ಗಿ‌ ಜಲಾವೃತಗೊಂಡಿದೆ. 


ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಶಾಂಭವಿ ನದಿ ಉಕ್ಕಿ ಹರಿಯುತ್ತಿದೆ. ಪರಿಣಾಮ ಬಪ್ಪನಾಡು ದೇವಸ್ಥಾನದೊಳಗೆ ನೀರು ನುಗ್ಗಿದೆ. ಬಪ್ಪನಾಡು ಶ್ರೀದೇವಿಯು ಇಲ್ಲಿ ಜಲದುರ್ಗೆಯಾಗಿ ನೆಲೆಯಾಗಿದ್ದಾಳೆ. ಇಂದು ದೇವಸ್ಥಾನಕ್ಕೆ ನೀರು ನುಗ್ಗಿದ ಪರಿಣಾಮ ನಿಜವಾಗಿಯೂ ಜಲದುರ್ಗೆಯಾಗಿ ಪೂಜೆ ಸ್ವೀಕರಿಸಿದ್ದಾಳೆ. ಭಕ್ತರು ಒಳನುಗ್ಗಿದ ನೀರಿನಲ್ಲಿಯೇ ಪ್ರದಕ್ಷಿಣೆ ಬಂದು ಜಲದುರ್ಗೆಯ ದರ್ಶನ ಪಡೆದಿದ್ದಾರೆ.


*ಮಧೂರು ದೇವಸ್ಥಾನಕ್ಕೆ ನುಗ್ಗಿದ ಮಧುವಾಹಿನಿ: ನೀರಲ್ಲೇ ನಿಂತು ಭಕ್ತರಿಂದ ಗಣಪನ ದರ್ಶನ*


ಕಾಸರಗೋಡಿನ ಪ್ರಸಿದ್ಧ ಮಧೂರು ಶ್ರೀ ಸಿದ್ಧಿವಿನಾಯಕ ಕ್ಷೇತ್ರವು ಮಳೆಗೆ ಸಂಪೂರ್ಣ ಜಲಾವೃತಗೊಂಡಿದೆ. ನೆರೆನೀರು ಗರ್ಭಗುಡಿಯವರೆಗೆ ಬಂದು ನಿಂತಿದೆ.

ಮಧೂರು ಕ್ಷೇತ್ರದ ಬದಿಯಲ್ಲಿಯೇ ಮಧುವಾಹಿನಿ ನದಿ ಹರಿಯುತ್ತದೆ. ಮಳೆಗಾಲದಲ್ಲಿ ಅತಿಯಾಗಿ ಮಳೆ ಬಂದರೆ ಈ ನದಿ ಉಕ್ಕಿಹರಿದು ಮಧೂರು ಕ್ಷೇತ್ರವನ್ನೇ ಜಲದಿಗ್ಭಂಧನ ಮಾಡುತ್ತದೆ. ಕಳೆದ ಮೂರು ದಿನಗಳಿಂದ ಸುರಿದ ಮಹಾಮಳೆಗೆ ಮಧುವಾಹಿನಿ ನದಿಯ ನೀರು ಉಕ್ಕಿದೆ. ದೇವಲಯದ ಪ್ರಾಂಗಣದೊಳಗಡೆ ನುಗ್ಗಿ ಗಣಪನಾಲಯವನ್ನು ಸಂಪೂರ್ಣ ನೀರುಮಯವಾಗಿಸಿದೆ.


ಮಧೂರು ಶ್ರೀಕ್ಷೇತ್ರದಲ್ಲಿ ಪ್ರತಿನಿತ್ಯವೂ ಹೋಮ ಹವನಾದಿಗಳು, ಅಪ್ಪಸೇವೆ ನಡೆಯುತ್ತಿರುತ್ತದೆ. ಆದರೂ ಭಾರಿಮಳೆಯ ನಡುವೆಯೂ ಕ್ಷೇತ್ರಕ್ಕೆ ಆಗಮಿಸಿದ ಭಕ್ತರು ಮಕ್ಕಳು ಹಿರಿಯರೆನ್ನದೆ ಕಾಲು ಮುಳುಗುವಷ್ಟು ಇರುವ ಪ್ರಾಂಗಣದಲ್ಲಿ ನೀರಿನ ನಡುವೆಯೇ ಪ್ರದಕ್ಷಿಣೆ ಬಂದು ದೇವರ ದರ್ಶನ ಮಾಡುತ್ತಿದ್ದಾರೆ. ಅಲ್ಲದೆ ನೀರು ನಿಂತಿದ್ದರೂ, ಅನತಿ ದೂರದಲ್ಲಿ ಎತ್ತರದ ಪ್ರದೇಶದಲ್ಲಿ ಹೋಮ ನಡೆಯುತ್ತಿರುವುದು ಕಂಡು ಬರುತ್ತಿದೆ.



BREAKING NEWS
Loading latest news...
Join our WhatsApp Channel Powered By : Online Pudu