ಜೊತೆಯಾಗಿ ಸ್ನಾನಕ್ಕಿಳಿದ ಜೋಡಿ ಗ್ಯಾಸ್ ಗೀಸರ್ ಅನಿಲ ಸೋರಿಕೆಯಾಗಿ ದಾರುಣ ಸಾವು



ಬೆಂಗಳೂರು: ಜೊತೆಯಾಗಿ ಸ್ನಾನಕ್ಕೆಂದು ಬಾತ್‌ರೂಮ್‌ಗೆ ಹೋದ ಜೋಡಿ ಗ್ಯಾಸ್ ಗೀಸರ್ ವಿಷ అనిల ಸೋರಿಕೆಯಾಗಿ ಉಸಿರುಗಟ್ಟಿ ದಾರುಣವಾಗಿ ಮೃತಪಟ್ಟ ಘಟನೆ ಬೆಂಗಳೂರಿನ ಚಿಕ್ಕಜಾಲದ ತರಬನಹಳ್ಳಿಯಲ್ಲಿ ನಡೆದಿದೆ. ಜೂನ್ 10ರಂದು ಈ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಗುಂಡ್ಲುಪೇಟೆ ಮೂಲದ ಚಂದ್ರಶೇಖರ್ ಹಾಗೂ ಗೋಕಾಕ್‌ನ ಸುಧಾರಾಣಿ ಮೃತಪಟ್ಟ ದುರ್ದೈವಿ ಜೋಡಿ.‌ ಈ ಜೋಡಿ ಇನ್ನೇನು ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಿತ್ತು. ಆದರೆ ಅದಕ್ಕಿಂತ ಮುನ್ನವೇ ದುರಂತ ಅಂತ್ಯ ಕಂಡಿದೆ. 

ತರಬನಹಳ್ಳಿಯಲ್ಲಿ ವಾಸವಿದ್ದ ಚಂದ್ರಶೇಖರ್ ನ ಬಾಡಿಗೆ ಕೊಠಡಿಗೆ ಜೂನ್ 10ರ ಸಂಜೆ ವೇಳೆಗೆ ಸುಧಾರಾಣಿ ಬಂದಿದ್ದಳು. ರಾತ್ರಿ ಇಬ್ಬರೂ ಜೊತೆಯಾಗಿ ಸ್ನಾನಕ್ಕೆಂದು ಗ್ಯಾಸ್‌ ಗೀಸರ್ ಆನ್ ಮಾಡಿ ಬಾತ್‌ರೂಮ್‌ಗೆ ಹೋಗಿದ್ದಾರೆ. ಆದರೆ ದುರದೃಷ್ಟವಶಾತ್ ಆ ವೇಳೆ ಗ್ಯಾಸ್ ಗೀಸರ್ ನಿಂದ ವಿಷಾನಿಲ ಸೋರಿಕೆಯಾಗಿದೆ. ಪರಿಣಾಮ ಸ್ನಾನ ಮಾಡುತ್ತಿರುವಾಗಲೇ ಉಸಿರುಗಟ್ಟಿ ಪ್ರಜ್ಞೆ ತಪ್ಪಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಮರುದಿನ ಬೆಳಗ್ಗೆ ಮನೆಯಿಂದ ಹೊರಗೆ ಬಾರದಿರುವುದನ್ನು ಕಂಡು ಮನೆ ಮಾಲಕ ಅನುಮಾನಗೊಂಡು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮೃತದೇಹಗಳನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿದ್ದು, ಈ ಬಗ್ಗೆ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಇಬ್ಬರೂ ನಂದಿಹಿಲ್ಸ್ ಬಳಿಯ ಗಾಲ್ಫ್ ಹೋಟೆಲ್ ನಲ್ಲಿ ಒಟ್ಟಿಗೆ ಕೆಲಸ ಮಾಡಿಕೊಂಡಿದ್ದರು. ಅಲ್ಲದೇ ಇಬ್ಬರು ಮದುವೆಯಾಗಲು ತಯಾರಿಯಾಗಿದ್ದರು. ಆದರೆ ಮದುವೆಗೆ ಮೊದಲೇ ಜೋಡಿ ಮಸಣ ಸೇರಿದೆ.