ಡಿಕೆಶಿ ಸಿಎಂ ಆಗೋಲ್ಲವೆಂದು ನಾನು ಹೇಳಿಲ್ಲ : ನನ್ನ ಮಾತನ್ನು ತಿರುಚಲಾಗಿದೆ - ಸಿದ್ದರಾಮಯ್ಯ



ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯರವರು 'ಕೆಪಿಸಿಸಿ ಅಧ್ಯಕ್ಷ ಡಿಕೆಶಿಯವರು ಸಿಎಂ ಆಗೋಲ್ಲ' ಎಂದು ಹೇಳಿದ್ದಾರೆ ಎನ್ನಲಾದ ಸುದ್ದಿಯೊಂದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಇದೀಗ ಸಿದ್ದರಾಮಯ್ಯ ತಮ್ಮ ಮಾತಿನ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಸಿದ್ದರಾಮಯ್ಯ ತಮ್ಮ ಹೇಳಿಕೆಯಲ್ಲಿ 'ಕೆಪಿಸಿಸಿ ಅಧ್ಯಕ್ಷ‌ ಡಿಕೆ ಶಿವಕುಮಾರ್ ಅವರು ಸಿಎಂ ಆಗುವುದಿಲ್ಲ ಎಂದು ನಾನು ಹೇಳಿಲ್ಲ. ನಾವಿಬ್ಬರೂ ಸಿಎಂ ಆಕಾಂಕ್ಷಿಗಳಾಗಿದ್ದೇವೆ ಎಂದು ಹೇಳಿದ್ದೆ. ಉಳಿದೆಲ್ಲವನ್ನು ತಿರುಚಲಾಗಿದೆ. ಇದು ಸಂಪೂರ್ಣ ಸುಳ್ಳು ಸುದ್ದಿ" ಎಂದು ಸ್ಪಷ್ಟಪಡಿಸಿದ್ದಾರೆ.

ಹೈಕಮಾಂಡ್ ಡಿ.ಕೆ.ಶಿವಕುಮಾರ್ ಅವರನ್ನು ಸಿಎಂ ಆಗಿ ಮಾಡುವುದಿಲ್ಲ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆನ್ನಲಾದ ಸುದ್ದಿಯೊಂದನ್ನು ಖಾಸಗಿ ಮಾಧ್ಯಮವೊಂದು ಬಿತ್ತರಿಸಿತ್ತು. ಈ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಈ ರೀತಿ ಉತ್ತರ ನೀಡಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ದೆಹಲಿಯ ಎಐಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಸಭೆಗೆ ಹಾಜರಾಗುವುದಕ್ಕೂ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿದ ವಿಪಕ್ಷ ನಾಯಕರು, 'ಪ್ರಜಾಪ್ರಭುತ್ವದ ಮಾದರಿಯಲ್ಲಿ ಎಲ್ಲರೂ ಆಯ್ಕೆಯಾಗಲಿದ್ದಾರೆ. ನನ್ನ ಹೇಳಿಕೆಯನ್ನು ಬದಲಿಸಲಾಗಿದೆ. ಡಿಕೆಶಿ ಮತ್ತು ನಾನು ಇಬ್ಬರೂ ಸಿಎಂ ಅಭ್ಯರ್ಥಿಗಳು ಹೌದು ಎಂದಿದ್ದೆ. ಉಳಿದೆಲ್ಲವೂ ಸುಳ್ಳು ಸುದ್ದಿ' ಎಂದರು.
BREAKING NEWS
Loading latest news...
Join our WhatsApp Channel Powered By : Online Pudu