ಸರಸಕ್ಕೆ ಅಡ್ಡಿಯಾಗುತ್ತಿದೆಯೆಂದು ಮೂರು ವರ್ಷದ ಕಂದಮ್ಮನನ್ನೇ ಕೊಲೆಗೈದ ಮಲತಂದೆ


ತಮಿಳುನಾಡು: ಸರಸಕ್ಕೆ ಅಡ್ಡಿಯಾಗುತ್ತಿದೆ ಎಂದು ಮಲತಂದೆ ಮೂರು ವರ್ಷದ ಮಗುವಿನ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದು ಹತ್ಯೆಗೈದ ಅಮಾನುಷ ಘಟನೆಯೊಂದು ಕರ್ನಾಟಕ-ತಮಿಳುನಾಡು ಗಡಿಭಾಗ ಹೊಸೂರಿನಲ್ಲಿ ನಡೆದಿದೆ. 

ಜಗನ್ನಾಥನ್(3) ಮೃತಪಟ್ಟ ದುರ್ದೈವಿ ಮಗು. ಆರೋಪಿಗಳಾದ ಹೊಸೂರಿನ ಪಾರ್ವತಿ ನಗರ ನಿವಾಸಿ ರಂಜಿತ್(35) ಹಾಗೂ ನಂದಿನಿ(25)ಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

ಆರೋಪಿತೆಯಾಗಿರುವ ನಂದಿನಿಯು ಶಕ್ತಿ ಎಂಬುವವರೊಂದಿಗೆ ವಿವಾಹವಾಗಿದ್ದಳು. ಈ ದಂಪತಿಗೆ ಪ್ರವೀಣ್ ಮತ್ತು ಜಗನ್ನಾಥನ್ ಎಂಬ ಇಬ್ಬರು ಮಕ್ಕಳಿದ್ದರು. ಆದರೆ ಕಳೆದ ಏಳು ತಿಂಗಳ ಹಿಂದೆ ಅನಾರೋಗ್ಯದ ಕಾರಣದಿಂದ ಪತಿ ಶಕ್ತಿ ಮೃತಪಟ್ಟಿದ್ದರು. ಪತಿ ಮೃತಪಟ್ಟ ನಂದಿನಿ, ರಂಜಿತ್ ಎಂಬಾತನೊಂದಿಗೆ ಸಂಸಾರ ನಡೆಸುತ್ತಿದ್ದಳು.

ಕಳೆದ ಡಿಸೆಂಬರ್ 6ರಂದು ರಂಜಿತ್ ಹಾಗೂ ನಂದಿನಿ ಸರಸಕ್ಕೆ 3 ವರ್ಷದ ಮಗು ಅಡ್ಡಿಪಡಿಸಿದೆ. ಇದರಿಂದ ಸಿಟ್ಟಿಗೆದ್ದ ರಂಜಿತ್ ಮಗು ಜಗನ್ನಾಥ್ ನ ತಲೆಗೆ ಬಿಯರ್ ಬಾಟಲಿಯಿಂದ ಹಲ್ಲೆ ಮಾಡಿದ್ದಾನೆ. ಹಲ್ಲೆಯಿಂದ ಮಗು ತೀವ್ರವಾಗಿ ಗಾಯಗೊಂಡಿತ್ತು. ನೆಪಕ್ಕೆ ಎಂಬಂತೆ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ, ಡಿಸೆಂಬರ್ 22ರಂದು ಚಿಕಿತ್ಸೆ ನಿಲ್ಲಿಸಿ ಮನೆಗೆ ಕರೆತಂದಿದ್ದಾರೆ. ಆದರೆ ಡಿಸೆಂಬರ್ 25 ರಂದು ಮನೆಯಲ್ಲಿ ಮಗು ಮೃತಪಟ್ಟಿದೆ. ಬಳಿಕ ಅಕ್ಕಪಕ್ಕದವರಿಗೆ ಅನುಮಾನ ಬಾರದಂತೆ ಮಗುವಿನ ಅಂತ್ಯಕ್ರಿಯೆ ಮಾಡಿದ್ದಾರೆ.

ಕೆಲ ದಿನಗಳ ಬಳಿಕ ನಂದಿನಿ ತಾಯಿ ಮನೆಗೆ ಬಂದಿದ್ದಾರೆ. ಈ ವೇಳೆ ಮಗು ಇಲ್ಲದಿರುವುದನ್ನು ಕಂಡು ಪ್ರಶ್ನಿಸಿದ್ದಾರೆ. ಈ ವೇಳೆ ನಂದಿನ ಸಮರ್ಪಕ ಉತ್ತರ ನೀಡುವಲ್ಲಿ ಎಡವಿದ್ದಾಳೆ. ಅನುಮಾನಗೊಂಡ ನಂದಿನಿ ತಾಯಿ ಹೊಸೂರಿನ ಆಟೊ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾಳೆ.

ಪೊಲೀಸರ ತನಿಖೆ ವೇಳೆ ಮಗುವಿನ ಹತ್ಯೆ ವಿಚಾರ ಬಯಲಾಗಿದ್ದು, ಮಗುವಿನ ತಾಯಿ ತಪ್ಪೊಪ್ಪಿಕೊಂಡಿದ್ದಾಳೆ. ಈ ಹಿನ್ನೆಲೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಗುವಿನ ಮೃತದೇಹವನ್ನು ಹೊಸೂರಿನ ಗೋಕುಲ್ ನಗರದ ಸ್ಮಶಾನದಲ್ಲಿ ಆರೋಪಿಗಳು ಹೂತಿಟ್ಟಿದ್ದರು. ಸದ್ಯ ಜಿಲ್ಲಾಧಿಕಾರಿಗಳು ಹಾಗೂ ಪೋಲೀಸರ ಸಮ್ಮುಖದಲ್ಲಿ ಮೃದದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu