10 ಸಾವಿರ ಕೋಟಿ ರೂ. ಪರಿಹಾರಕ್ಕೆ ಆಗ್ರಹಿಸಿ ದಾವೆ ಹೂಡಿದ ಅತ್ಯಾಚಾರ ಪ್ರಕರಣದಲ್ಲಿ ಖುಲಾಸೆಗೊಂಡ ವ್ಯಕ್ತಿ


ಇಂದೋರ್: “ತನಗೆ ಅನ್ಯಾಯವಾಗಿದೆ. ಯಾವುದೇ ತಪ್ಪು ಮಾಡದಿದ್ದರೂ ತನ್ನನ್ನು 2 ವರ್ಷಗಳ ಕಾಲ ಜೈಲಿನಲ್ಲಿ ಇಡಲಾಗಿದೆ. ಆದ್ದರಿಂದ 10 ಸಾವಿರ ಕೋಟಿ ರೂ. ಪರಿಹಾರ ಕೊಡಬೇಕು" ಎಂದು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿ ಪ್ರಕರಣದಿಂದ ಖುಲಾಸೆಗೊಂಡ ಬಳಿಕ ವ್ಯಕ್ತಿಯೊಬ್ಬರು ಮಧ್ಯಪ್ರದೇಶ ಸರ್ಕಾರದ ವಿರುದ್ಧ ದಾವೆ ಹೂಡಿದ್ದಾರೆ.

ಮಧ್ಯಪ್ರದೇಶದ ರತ್ಲಾಂ ಜಿಲ್ಲೆಯ ಬುಡಕಟ್ಟು ಜನಾಂಗದ ಕಾಂತಿಲಾಲ್‌ ಭೀಲ್‌(35) ಎಂಬುವವರು ದಾವೆ ಹೂಡಿದವರು.

“666 ದಿನಗಳ ಕಾಲ ಯಾವುದೇ ತಪ್ಪು ಮಾಡದೆ ಜೈಲಿನಲ್ಲಿದ್ದ ಕಾರಣ ದೈವದತ್ತವಾಗಿ ಮಾನವರಿಗೆ ದೊರಕಿರುವ ಲೈಂಗಿಕ ಸುಖವನ್ನು ಅನುಭವಿಸುವ ದಿನಗಳು ತನಗೆ ಇಲ್ಲದಂತಾಗಿತ್ತು. ಜೈಲಿನಲ್ಲಿ ತಾನು ಕಠಿಣ ದಿನಗಳನ್ನು ಅನುವಿಸಿದ್ದೇನೆ. ಹೀಗಾಗಿ 10,006.2 ಕೋಟಿ ರೂ. ಪರಿಕಾರ ನೀಡಬೇಕು’ ಎಂದು ಕಾಂತಿಲಾಲ್‌ ಭೀಲ್‌ ದಾವೆ ಹೂಡಿದ್ದಾರೆ.

“6 ಜನರಿರುವ ನಮ್ಮ ಕುಟುಂಬವು ನನ್ನ ಆದಾಯವನ್ನೇ ನಂಬಿತ್ತು. ನಾನು ಜೈಲಿಗೆ ಹೋಗಿರುವ ಕಾರಣ ಕುಟುಂಬ ತೀವ್ರ ಸಂಕಷ್ಟ ಅನುಭವಿಸಿತ್ತು. ಜೈಲಿನಲ್ಲಿ ನನಗೆ ಒಳ ಉಡುಪುಗಳನ್ನು ಒದಗಿಸಲು ಕೂಡಾ ನಮ್ಮ ಕುಟುಂಬವು ತೊಂದರೆ ಅನುಭವಿಸಿತ್ತು. ಸರಿಯಾದ ಬಟ್ಟೆಗಳಿಲ್ಲದೆ ಚಳಿ-ಗಾಳಿಯಲ್ಲಿ ಜೈಲಿನಲ್ಲಿ ಕಠಿಣ ದಿನಗಳನ್ನು ಕಳೆದಿದ್ದೇನೆ' ಎಂದು ಕಾಂತಿಲಾಲ್‌ ವಿವರಿಸಿದ್ದಾರೆ.

“ವಕೀಲರು ಯಾವುದೇ ಹಣವನ್ನು ಪಡೆಯದೇ ಇದುವರೆಗೂ ನನ್ನ ಪರ ವಾದಿಸಿದ್ದಾರೆ. ಈಗ ಅವರಿಗೆ ಶುಲ್ಕ ನೀಡಬೇಕಿದೆ. ನನ್ನ ವಿರುದ್ಧ ಸುಳ್ಳು ಮತ್ತು ಮಾನಹಾನಕಾರಿ ಆರೋಪಗಳನ್ನು ಹೊರಿಸಲಾಗಿತ್ತು. ಇದರಿಂದ ನನ್ನ ಮತ್ತು ಕುಟುಂಬದ ಬದುಕು ಹಾಗೂ ವೃತ್ತಿಜೀವನ ಹಾಳಾಗಿದೆ. ನಿರಪರಾಧಿಯಾದ ನನ್ನನ್ನು ಜೈಲಿನಲ್ಲಿ ಇರಿಸಿದ್ದಕ್ಕಾಗಿ ಪರಿಹಾರ ನೀಡಬೇಕಿದೆ’ ಎಂದು ಕೋರಿದ್ದಾರೆ.


BREAKING NEWS
Loading latest news...
Join our WhatsApp Channel Powered By : Online Pudu