
ಮಂಗಳೂರು ಗೋಡೆ ಬರಹದಲ್ಲಿ ಉಗ್ರರ ಪರ ಬರೆದಿದ್ದ ಆರೋಪಿಗಳು ಶಿವಮೊಗ್ಗದಲ್ಲಿ ಶಂಕಿತ ಉಗ್ರರೆಂದು ಅರೆಸ್ಟ್
Tuesday, September 20, 2022
ಮಂಗಳೂರು: 2020ರಲ್ಲಿ ಮಂಗಳೂರು ನಗರದಲ್ಲಿ ಎರಡು ಕಡೆಗಳಲ್ಲಿ ಉಗ್ರ ಸಂಘಟನೆಯ ಪರ ಗೋಡೆ ಬರಹವನ್ನು ಬರೆದಿರುವ ಪ್ರಕರಣದ ಆರೋಪಿಗಳೇ ಇದೀಗ ಶಿವಮೊಗ್ಗದಲ್ಲಿ ಶಂಕಿತ ಉಗ್ರರೆಂದು ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ. ಅಂದು ಜಾಮೀನು ಪಡೆದು ಹೊರ ಬಂದಿದ್ದ ಈ ಆರೋಪಿಗಳು ಇದೀಗ ಶಂಕಿತ ಉಗ್ರರೆಂದು ಅಂದರ್ ಆಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ಆರೋಪಿಗಳು ಮಹಮ್ಮದ್ ಶಾರೀಕ್ ಹಾಗೂ ಮಹಮ್ಮದ್ ಮುನಿರ್ ಅಹ್ಮದ್ ಬಂಧಿತರಾಗಿದ್ದ ಆರೋಪಿಗಳು.
ದುಷ್ಕರ್ಮಿಗಳು ಮಂಗಳೂರಿನ ನಗರದ ಬಿಜೈ ಹಾಗೂ ಕೋರ್ಟ್ ರಸ್ತೆಯ ಗೋಡೆಗಳಲ್ಲಿ ಉಗ್ರರ ಪರ ಬರಹಗಳನ್ನು ಬರೆದು ದುಷ್ಕೃತ್ಯ ಮೆರೆದಿದ್ದರು. ಇವರು 'ಲಷ್ಕರ್ ಇ ತೋಯ್ಬಾ' ಉಗ್ರ ಸಂಘಟನೆಯ ಪರ ಜಿಂದಾಬಾದ್ ಎಂದು ಬರಹವನ್ನು ಬರೆದಿದ್ದರು. ಬಳಿಕ ಪೊಲೀಸರು ಆ ಗೋಡೆ ಬರಹವನ್ನು ಅಳಿಸಿ ಹಾಕಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು.
2020 ನ.27ರಂದು ಕದ್ರಿ ಠಾಣೆಯ ಬಳಿ ಬಿಜೈ ಅಪಾರ್ಟ್ಮೆಂಟ್ನ ಗೋಡೆಯ ಬರಹದಲ್ಲಿ 'ಇಲ್ಲಿನ ಸಂಘಿಗಳು ಮತ್ತು ಮನುವಾದಿಗಳ ಜೊತೆ ವ್ಯವಹರಿಸಲು ಲಷ್ಕರ್ ಮತ್ತು ತಾಲಿಬಾನಿಗಳನ್ನು ಬರುವಂತೆ ಮಾಡಬೇಡಿ. ಲಷ್ಕರ್ ಝಿಂದಾಬಾದ್, ತಾಲಿಬಾನ್ ಝಿಂದಾಬಾದ್’ ಎಂದು ಇಂಗ್ಲಿಷ್ನಲ್ಲಿ ಬರೆಯಲಾಗಿತ್ತು. ಈ ಗೋಡೆ ಬರಹ ಪ್ರಕರಣವು ಇಡೀ ದೇಶದಲ್ಲಿಯೇ ತಲ್ಲಣ ಸೃಷ್ಟಿಸಿತ್ತಿದ್ದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಆದರೆ, ಇವರಿಗೆ ಉಗ್ರರೊಂದಿಗೆ ಯಾವುದೇ ರೀತಿಯ ನಂಟು ಇಲ್ಲ ಎಂದು ವಿಚಾರಣೆಯಿಂದ ತಿಳಿದು ಜಾಮೀನು ದೊರಕಿತ್ತು. ಆದರೆ ಇದೀಗ ಉಗ್ರ ಸಂಘಟನೆಯ ನಂಟು ಹೊಂದಿರುವ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.