ಮಂಗಳೂರು: ಕಡಲ್ಕೊರೆತ ತಡೆಗೆ 1 ಕಿ.ಮೀ. ವ್ಯಾಪ್ತಿಯಲ್ಲಿ ಸೀ ವೇವ್ ಬ್ರೇಕರ್ಸ್ ತಂತ್ರಜ್ಞಾನ ಅಳವಡಿಕೆ: ಸಿಎಂ ಬೊಮ್ಮಾಯಿ

ಮಂಗಳೂರು: ಕಡಲ್ಕೊರೆತ ತಡೆಗೆ ಬಟ್ಟಪಾಡಿಯಲ್ಲಿ ಸೀ ವೇವ್ ಬ್ರೇಕರ್ಸ್ ತಂತ್ರಜ್ಞಾನವನ್ನು ಅಳವಡಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ನಗರದ ಉಳ್ಳಾಲದಲ್ಲಿರುವ ಬಟ್ಟಂಪಾಡಿ ಕಡಲ ತೀರದ  ಕಡಲ್ಕೊರೆತದ ಸ್ಥಿತಿಗತಿಗಳನ್ನು ನಿನ್ನೆ ರಾತ್ರಿ ಪರಿಶೀಲಿಸಿ, ಮಾತನಾಡಿದ ಅವರು, ಉಳ್ಳಾಲದಲ್ಲಿ ಈ ಬಾರಿ ದೊಡ್ಡ ಪ್ರಮಾಣದಲ್ಲಿ ಅಂದರೆ ಸರಿಸುಮಾರು 600 ಮೀ.ವರೆಗೆ ಕಡಲ್ಕೊರೆತ ಸಂಭವಿಸಿದೆ. ಆದ್ದರಿಂದ ಬಟ್ಟಂಪಾಡಿಯಲ್ಲಿ ಕಡಲ್ಕೊರೆತ ತಡೆಗೆ ಹೊಸ ತಂತ್ರಜ್ಞಾನ ಸೀ ವೇವ್ ಬ್ರೇಕರ್ಸ್ ಅನ್ನು ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಅಳವಡಿಸಲಾಗುತ್ತದೆ‌. ಕಡಲ ಅಲೆಗಳನ್ನು ಬ್ರೆಕ್ ಮಾಡುವ ವ್ಯವಸ್ಥೆಯನ್ನು ಅದು ಒಳಗೊಂಡಿರುತ್ತದೆ ಎಂದರು.


ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಡಲ್ಕೊರೆತ ಸಮಸ್ಯೆಯಿದ್ದು, ಈ ಸಂದರ್ಭ ರಸ್ತೆ ಸಂಪರ್ಕ ಕಡಿತ ಆದಲ್ಲಿ ತಾತ್ಕಾಲಿಕವಾಗಿ ಜನರ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಮುಂದಿನ ತಿಂಗಳ ಭಾರಿ ಮಳೆಯಾದಲ್ಲಿ ಇನ್ನಷ್ಟು ಹಾನಿಯಾಗಬಹುದು. ಆದ್ದರಿಂದ ಕಡಲ ತೀರದಲ್ಲಿನ ಅಪಾಯದಲ್ಲಿರುವ ಮನೆಗಳಲ್ಲಿ ವಾಸಿಸುವವರನ್ನು ಸ್ಥಳಾಂತರ ಮಾಡಲು ಜಿಲ್ಲಾಧಿಕಾರಿಯವರಿಗೆ ಸೂಚನೆ ನೀಡಲಾಗಿದೆ ಎಂದರು.

ಈ ಸಂದರ್ಭ ಕಂದಾಯ ಸಚಿವ ಆರ್‌. ಅಶೋಕ್, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ, ಶಾಸಕ ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯ  ಪ್ರತಾಪ್ ಸಿಂಹ ನಾಯಕ್, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ಸೇರಿದಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯರಿದ್ದರು.
BREAKING NEWS
Loading latest news...
Join our WhatsApp Channel Powered By : Online Pudu