ಪುತ್ತೂರು.
ಹಿಜಾಬ್ ಹೆಸರಿನಲ್ಲಿ ಮತೀಯ ಸಂಘಟನೆಗಳು ವಿದ್ಯಾರ್ಥಿಗಳಿಗೆ ಕುಮ್ಮಕ್ಕು ನೀಡುವ ಕೆಲಸವನ್ನು ಮಾಡುತ್ತಿದೆ ಎಂದು ಉಪ್ಪಿನಂಗಡಿ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಹಾಗು ಪುತ್ತೂರು ಶಾಸಕ ಸಂಜೀವ ಮಠಂದೂರು ಆರೋಪಿಸಿದ್ದಾರೆ.
ಪುತ್ತೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಹೈಕೋರ್ಟ್ ಮತ್ತು ಕಾಲೇಜು ಅಭಿವೃದ್ಧಿ ಸಮಿತಿಯ ಆದೇಶ ಉಲ್ಲಂಘಿಸಿದವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದ ಅವರು ಹೇಳಿದರು.
ಹಿಜಾಬ್ ಪರ ಪ್ರತಿಭಟನೆ ನಡೆಸಿದ 24 ವಿದ್ಯಾರ್ಥಿನಿಯರನ್ನು ನಿನ್ನೆ ಸಸ್ಪೆಂಡ್ ಮಾಡಲಾಗಿದೆ. ಇವತ್ತು ಪ್ರತಿಭಟನೆ ಮಾಡಿದಲ್ಲಿ ಅದೇ ರೀತಿಯ ಕ್ರಮ ಜರುಗಿಸಲಾಗುವುದು.ವಿದ್ಯಾರ್ಥಿನಿಯರಿಗೆ ಪಾಠ ಮುಖ್ಯವೋ, ಧಾರ್ಮಿಕತೆ ಮುಖ್ಯವೋ ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದ ಅವರು ಧಾರ್ಮಿಕತೆ ಮುಖ್ಯವೇ ಆದಲ್ಲಿ ಅಂತವರು ಕಾಲೇಜಿನಿಂದ ಹೊರ ನಡೆಯೋದು ಉತ್ತಮ. ಧಾರ್ಮಿಕತೆಗೆ ಅವಕಾಶ ಇರುವಲ್ಲಿ ಶಿಕ್ಷಣ ಪಡೆಯಲಿ. ವಿದ್ಯಾರ್ಥಿಗಳು ಮೊದಲು ಶಿಕ್ಷಣ ಪಡೆಯಲಿ ಎಂದ ಕಾಂಗ್ರೆಸ್ ಮುಖಂಡ ಯು.ಟಿ.ಖಾದರ್ ಹಿಜಾಬ್ ಕುರಿತ ವಾಸ್ತವಿಕತೆಯನ್ನು ಹೇಳಿದ್ದಾರೆ. ಓರ್ವ ಮುಸ್ಲಿಂ ಮುಖಂಡನಾಗಿ ಅವರ ಮಾತನ್ನು ವಿದ್ಯಾರ್ಥಿಗಳು ಒಪ್ಪಿಕೊಳ್ಳಬೇಕು. ವಿದ್ಯಾರ್ಥಿಗಳ ಬೇಜಾವಬ್ದಾರಿಯ ನಡೆಯನ್ನು ಇನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಸರಕಾರಿ ಕಾಲೇಜು ಸರ್ವ ಧರ್ಮೀಯರಿಗೆ ಪಾಠ,ಪ್ರವಚನ ನೀಡುವ ಕೇಂದ್ರವಾಗಿದೆ. ಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲು ಎಲ್ಲಾ ಪ್ರಯತ್ನಗಳನ್ನು ನಡೆಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಹಿಜಾಬ್ ಪ್ರತಿಭಟನೆಯಿಂದಾಗಿ ಇತರ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದ ಅವರು ಜಿಲ್ಲಾಧಿಕಾರಿಗಳು ರಜೆ ಘೋಷಿಸಬೇಕೆ ಎಂದಾಗಲೂ ಬೇಡ ಎಂದಿದ್ದೇವೆ. ಕಾಲೇಜಿಗೆ ರಜೆ ನೀಡಿದಲ್ಲಿ ವಿದ್ಯಾರ್ಥಿಗಳು ಪಾಠ, ಪ್ರವಚನಗಳಿಗಿಂತ ದೂರ ಉಳಿಯುವಂತಾಗುತ್ತದೆ. ವಿದ್ಯಾರ್ಥಿಗಳಿಗೆ ಮುಂದಿನ ತಿಂಗಳಲ್ಲಿ ಸೆಮಿಸ್ಟರ್ ಪರೀಕ್ಷೆಯೂ ಬರಲಿದೆ. ಈ ಕಾರಣಕ್ಕಾಗಿ ಕಾಲೇಜಿಗೆ ರಜೆ ಘೋಷಿಸಿಲ್ಲ. ವಿದ್ಯಾರ್ಥಿಗಳ ತರಗತಿಗೆ ತೊಂದರೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದ ಅವರು ಕಾಲೇಜಿಗೆ ವರದಿಗೆ ತೆರಳಿದ ಪತ್ರಕರ್ತರ ಮೇಲೆ ಹಲ್ಲೆ ಪ್ರಕರಣ ಸಂಬಂಧಿಸಿದಂತೆ ಈಗಾಗಲೇ ಎಫ್.ಐ.ಆರ್ ದಾಖಲಾಗಿದೆ. ಆರೋಪಿಗಳ ಮೇಲೆ ಸೂಕ್ತ ಕ್ರಮಕೈಗೊಳ್ಳಲು ಎಸ್.ಪಿ ಮತ್ತು ಡಿವೈಎಸ್ಪಿ ಗೆ ಸೂಚಿಸಿದ್ದೇನೆ. ಪತ್ರಕರ್ತರು ಈಗಾಗಲೇ ಮನವಿ ಮತ್ತು ಪ್ರತಿಭಟನೆಯನ್ನೂ ಮಾಡಿದ್ದಾರೆ. ಗೃಹಸಚಿವರು ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮದ ಭರವಸೆಯನ್ನೂ ನೀಡಿದ್ದಾರೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.