ಮಳಲಿ ಮಸೀದಿ ವಿವಾದ ಪ್ರಕರಣ: ವಿಎಚ್ ಪಿ ಅರ್ಜಿ ವಜಾಕ್ಕೆ ಸಲ್ಲಿಸಿರುವ ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

ಮಂಗಳೂರು: ಮಳಲಿ ಮಸೀದಿ ವಿವಾದದ ಹಿನ್ನೆಲೆಯಲ್ಲಿ ವಿಹೆಚ್​ಪಿ ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸುವಂತೆ ಮಸೀದಿ ಆಡಳಿತ ಮಂಡಳಿ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಮಂಗಳೂರಿನ ಮೂರನೇ ಹೆಚ್ಚುವರಿ ನ್ಯಾಯಾಲಯ ನಾಳೆಗೆ ಮುಂದೂಡಿದೆ.

ಎಪ್ರಿಲ್ 21ರಂದು ಮಂಗಳೂರು ನಗರದ ಹೊರವಲಯದಲ್ಲಿರುವ ಗಂಜಿಮಠ ಬಳಿಯ ಮಳಲಿಯ ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ಮಸೀದಿ ನವೀಕರಣದ ಕಾಮಗಾರಿ ವೇಳೆ ಹಿಂದೂ ದೇವಾಲಯ ಶೈಲಿಯ ಕಟ್ಟಡವೊಂದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಇದು ದೇವಾಲಯವೆಂದು ಆರೋಪಿಸಿ ನ್ಯಾಯಾಲಯದ ಮೆಟ್ಟಿಲೇರಿತ್ತು. ನ್ಯಾಯಾಲಯವು ಕಾಮಗಾರಿಗೆ ತಡೆಯಾಜ್ಞೆ ನೀಡಿ ಮುಂದಿನ ವಿಚಾರಣೆಯನ್ನು ಜೂನ್ 3ಕ್ಕೆ ನಿಗದಿಪಡಿಸಿತ್ತು.

ಇದರ ಮಧ್ಯೆ ಮಳಲಿಯ ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ಮಸೀದಿ ಆಡಳಿತ ಮಂಡಳಿಯು ವಿಶ್ವ ಹಿಂದೂ ಪರಿಷತ್ ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸುವಂತೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಾಲಯ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.

ಮಳಲಿ ಮಸೀದಿಯ ವಿವಾದವನ್ನು ಗ್ಯಾನವಾಪಿ ಮಾದರಿಯಲ್ಲಿ ಸರ್ವೆ ಮಾಡಬೇಕು. ಅದೇ ರೀತಿ ತನಿಖಾ ಆಯೋಗ ನೇಮಕಕ್ಕೆ ವಿಹೆಚ್​ಪಿ ಪರ ವಕೀಲರು ಒತ್ತಾಯಿಸಿದ್ದರು‌. ಮಸೀದಿ ಕಮಿಟಿ ಪರ ವಕೀಲ ಎಂ.ಪಿ. ಶೆಣೈ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಗ್ಯಾನವಾಪಿಯ ಪ್ರಕರಣವೇ ಬೇರೆ, ಇದ್ದೇ ಬೇರೆ. ಗ್ಯಾನವಾಪಿಯಲ್ಲಿ ಪಬ್ಲಿಕ್ ರೆಪ್ರೆಸೆಂಟೇಟಿವ್ ಆಗಿ ಅರ್ಜಿ ಸಲ್ಲಿಕೆಯಾಗಿತ್ತು. ಮಳಲಿ ಪ್ರಕರಣದಲ್ಲಿ ಇಬ್ಬರು ಖಾಸಗಿ ವ್ಯಕ್ತಿಗಳು ಅರ್ಜಿ ಸಲ್ಲಿಸಿದ್ದಾರೆ ಎಂದು ವಾದಿಸಿದ್ದಾರೆ. ಮಸೀದಿ ಕಮಿಟಿಯಿಂದ ಕೋರ್ಟ್​ಗೆ ಭೂಮಿಯ ದಾಖಲೆ ಸಲ್ಲಿಕೆ ಮಾಡಲಾಗಿದ್ದು, ವಿಚಾರಣೆ ನಾಳೆಗೆ ಮುಂದೂಡಿಕೆ ಮಾಡಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu