-->

ವಿದ್ಯಾರ್ಥಿಯನ್ನು ಅಪಹರಣಗೈದು ದರೋಡೆ ನಡೆಸಿ, ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ: ಆರೋಪಿಗಳೀರ್ವರಿಗೆ ಪೊಲೀಸ್ ಪೈರಿಂಗ್, ಬಂಧನ

ವಿದ್ಯಾರ್ಥಿಯನ್ನು ಅಪಹರಣಗೈದು ದರೋಡೆ ನಡೆಸಿ, ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ: ಆರೋಪಿಗಳೀರ್ವರಿಗೆ ಪೊಲೀಸ್ ಪೈರಿಂಗ್, ಬಂಧನ

ಬೆಂಗಳೂರು: ವಿದ್ಯಾರ್ಥಿಯೋರ್ವನನ್ನು ತಡೆದು ಅಪಹರಣಗೈದು, ಹಣ ದರೋಡೆ ಮಾಡಿ ಆತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಉಡುಪಿ ಮೂಲದ ಇಬ್ಬರು ನಟೋರಿಯಸ್ ದರೋಡೆಕೋರರನ್ನು ಬೆಂಗಳೂರು ಕೊತ್ತನೂರು ಠಾಣೆ ಪೊಲೀಸರು ಗುಂಡಿಕ್ಕಿ ವಶಕ್ಕೆ ಪಡೆದಿದ್ದಾರೆ.

ಉಡುಪಿಯ ಕಾಪು ತಾಲೂಕಿನ ಮೊಹಮ್ಮದ್ ಆಶಿಕ್ ಹಾಗೂ ಕುಂದಾಪುರ ತಾಲೂಕಿನ ಐಸಾಕ್ ಎಂಬುವರಿಗೆ ಗುಂಡೇಟು ತಗುಲಿದೆ. ಇಬ್ಬರನ್ನೂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳಿಂದ ಹತ್ತು ಮೊಬೈಲ್‌ಗಳು, ಒಂದು ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇದೇ ವೇಳೆ ಆರೋಪಿಗಳು ಪಿಎಸ್‌ಐ ಉಮೇಶ್‌ ಅವರಿಗೆ ಹಲ್ಲೆ ಮಾಡಿದ್ದಾರೆ. ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಮಾರ್ಚ್​​ 26ರಂದು ಮುಂಜಾನೆ 5 ಗಂಟೆ ಸುಮಾರಿಗೆ ನಂಬರ್ ಪ್ಲೇಟ್ ಇಲ್ಲದ ಮಾರುತಿ ರಿಟ್ಜ್​  ಬಂದಿದ್ದ ನಾಲ್ವರು ಆರೋಪಿಗಳು ಮತ್ತೊಂದು ಕಾರಿನಲ್ಲಿ ಹೋಗುತ್ತಿದ್ದ ಯುವಕನನ್ನು ಹಿಂಬಾಲಿಸಿದ್ದಾರೆ. ಅಲ್ಲದೆ ಆತನ ಕಾರನ್ನು ಅಡ್ಡಗಟ್ಟಿದ್ದಾರೆ. ಬಳಿಕ ಮಾರಕಾಸ್ತ್ರ ತೋರಿಸಿ ಆತನ ಕಾರಿನಲ್ಲೇ ಯುವಕನನ್ನು ಅಪಹರಿಸಿದ್ದಾರೆ. ಬಳಿಕ ಯುವಕನ ಬಳಿಯಿದ್ದ ಚಿನ್ನದ ಉಂಗುರ ಕಸಿದುಕೊಂಡಿದ್ದಾರೆ ಎಂದು ಈಶಾನ್ಯ ವಿಭಾಗ ಡಿಸಿಪಿ ಡಾ ಅನೂಪ್ ಶೆಟ್ಟಿ ಮಾಹಿತಿ ನೀಡಿದರು.

ಅಷ್ಟಲ್ಲದೆ 50 ಸಾವಿರ ರೂ‌. ನಗದು ಕೊಡಬೇಕು ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಬಳಿಕ ಬಲವಂತವಾಗಿ ಎಟಿಎಂ ಕಾರ್ಡ್ ಪಡೆದುಕೊಂಡು, ಎಟಿಎಂ ಕೇಂದ್ರಗಳಲ್ಲಿ ಹಣ ಡ್ರಾ ಮಾಡಿಕೊಂಡಿದ್ದಾರೆ. ಬಳಿಕ ಬೆಳ್ಳಂದೂರು, ವೈಟ್‌ಫೀಲ್ಡ್​ ಕಡೆಗೆ ಕರೆದೊಯ್ದು ತಾವು ಕೇಳಿದಷ್ಟು ಹಣ ಕೊಡಬೇಕೆಂದು ಬೆದರಿಕೆ ಒಡ್ಡಿದ್ದಾರೆ.

ಅಲ್ಲದೆ ಲೈಂಗಿಕವಾಗಿ ಸಹಕರಿಸಬೇಕೆಂದು ಎಂದು ತಿಳಿಸಿದ್ದಾರೆ. ಬಳಿಕ ಯುವಕನಿಂದ ಒಂದಿಷ್ಟು ಹಣ ಕಸಿದುಕೊಂಡು, ಆತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಮಾರ್ಗ ಮಧ್ಯೆ ಬಿಟ್ಟು ಹೋಗಿದ್ದಾರೆ. ಈ ಬಗ್ಗೆ ಆರೋಪಿಗಳ ಪತ್ತೆಗಾಗಿ ಸಂಪಿಗೆಹಳ್ಳಿ ಎಸಿಪಿ ಟಿ.ರಂಗಪ್ಪ, ಕೊತ್ತನೂರು ಠಾಣೆ ಇನ್ಸ್‌‌ಪೆಕ್ಟರ್ ಚನ್ನೇಶ್ ಹಾಗೂ ಪಿಎಸ್‌ಐ ಉಮೇಶ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ಸಿಸಿ ಕ್ಯಾಮೆರಾ ದೃಶ್ಯಾವಳಿಗಳು ಹಾಗೂ ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಮಂಗಳೂರು, ಉಡುಪಿ ಮತ್ತಿತರರ ಕಡೆ ಶೋಧ ನಡೆಸುತ್ತಿದ್ದರು.

 ಆರೋಪಿಗಳು ನಗರದಲ್ಲಿ ಕೃತ್ಯ ಎಸಗಿದ ಬಳಿಕ ದಾವಣಗೆರೆಯಲ್ಲಿ ಸುಲಿಗೆ ಮಾಡಿದ್ದರು. ಮಂಗಳವಾರ ಮುಂಜಾನೆ ರಿಟ್ಜ್‌ ಕಾರಿನಲ್ಲಿ ಜಕ್ಕೂರು ಬಳಿ ಓಡಾಡುತ್ತಿದ್ದಾರೆ ಎಂಬ ಬಗ್ಗೆ ಖಚಿತ  ಮಾಹಿತಿ ಪೊಲೀಸರಿಗೆ ದೊರಕಿತ್ತು. ತಕ್ಷಣ ಪೊಲೀಸರು ಆರೋಪಿಗಳನ್ನು ಹಿಡಿಯಲು ಹೋಗಿದ್ದಾರೆ. ಆಗ ಕಾರಿನಲ್ಲಿದ್ದ ಇಬ್ಬರು ಆರೋಪಿಗಳು ಡ್ರ್ಯಾಗರ್​ನಿಂದ ಪಿಎಸ್‌ಐ ಉಮೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಆಗ ಪಿಐ ಚನ್ನೇಶ್ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಆರೋಪಿಗಳಿಗೆ ಶರಣಾಗುವಂತೆ ಸೂಚನೆ ನೀಡಿದ್ದಾರೆ. ಆದರೆ ಮಣಿಯದ ಅವರು ಮತ್ತೊಮ್ಮೆ ಹಲ್ಲೆಗೆ ಮುಂದಾಗಿದ್ದಾರೆ‌. ಆಗ ಆರೋಪಿಗಳ ಕಾಲುಗಳಿಗೆ ಗುಂಡು ಹಾರಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಸಣ್ಣ ವಯಸ್ಸಿನಿಂದಲೇ ಆರೋಪಿಗಳು ಸುಲಿಗೆ, ದರೋಡೆ, ಕಳವು, ಮನೆಗಳ್ಳತನ, ಜಾನುವಾರು ಕಳವು ಕೃತ್ಯದಲ್ಲಿ ತೊಡಗಿದ್ದಾರೆ. ಮಂಗಳೂರು, ಉಡುಪಿ ಮತ್ತು ಕುಂದಾಪುರ ಕಡೆಗಳಲ್ಲಿ ‘ಟೀಂ ಗರುಡಾ - 900’ ಹೆಸರಿನಲ್ಲಿ ಗುಂಪು ಮಾಡಿಕೊಂಡು ರಾತ್ರಿ ವೇಳೆ ಓಡಾಡುವ ಸಾರ್ವಜನಿಕರನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಾ, ಬಂದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರು. ಈ ಆರೋಪಿಗಳು ಈಗಾಗಲೇ ಉಡುಪಿ, ಮಣಿಪಾಲ್, ಕಾಪು, ಬೈಂದೂರು, ಬ್ರಹ್ಮಾವರ ಸೇರಿ ಮಂಗಳೂರು ಸುತ್ತ-ಮುತ್ತ 16 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕೃತ್ಯ ಎಸಗಿದ್ದರು. ಅಲ್ಲಿನ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಜಾಮೀನು ಪಡೆದು ಹೊರಬಂದಿರುವ ಆರೋಪಿಗಳು ಕೋರ್ಟ್‌ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದರು‌‌‌. ಪರಿಣಾಮ ಆರೊಪಿಗಳ ಬಂಧನಕ್ಕೆ ನಾನಾ ಠಾಣೆಗಳಲ್ಲಿ 10 ವಾರೆಂಟ್ ನೀಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article