-->

ಆಮ್ಲೇಟ್ ಮಾಡಿಕೊಡಲಿಲ್ಲವೆಂದು ಪತ್ನಿಯನ್ನೇ ಹತ್ಯೆ ಮಾಡಿದ ಕಿರಾತಕ ಪತಿ!

ಆಮ್ಲೇಟ್ ಮಾಡಿಕೊಡಲಿಲ್ಲವೆಂದು ಪತ್ನಿಯನ್ನೇ ಹತ್ಯೆ ಮಾಡಿದ ಕಿರಾತಕ ಪತಿ!

ಪಟನಾ: ಆಮ್ಲೆಟ್ ಮಾಡಿಕೊಡದ ಪತ್ನಿಯನ್ನು ಪತಿಯೇ ಬರ್ಬರವಾಗಿ ಕೊಂದು ಹಾಕಿರುವ ಆತಂಕಕಾರಿ, ಅಮಾನವೀಯ ಘಟನೆಯೊಂದು ಬಿಹಾರದ ಸೀತಾಮರ್ಹಿ ಜಿಲ್ಲೆಯಲ್ಲಿ ನಡೆದಿದೆ. ಪತ್ನಿಯನ್ನು ಉಸಿರುಗಟ್ಟಿಸಿ ಹತ್ಯೆಗೈದ ಪತಿ ಬಳಿಕ ಆಕೆಯ ಮೃತದೇಹವನ್ನು ಸೀಲಿಂಗ್​ ಫ್ಯಾನ್​ಗೆ ನೇತುಹಾಕಿ ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿ ಪೊಲೀಸ್ ಬಲೆಗೆ ಬಿದ್ದಿದ್ದಾನೆ ಈ ಹಂತಕ ಪತಿರಾಯ. 

ಅಜಿತ್​ ಸಿಂಗ್ ಪತ್ನಿಯನ್ನೇ ಹತ್ಯೆಗೈದ ಆರೋಪಿ. ಈತ ನಿವೃತ್ತ ಸಬ್​ ಇನ್ಸ್​ಪೆಕ್ಟರ್​ ಪುತ್ರ ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿಯ ತಂದೆ ನಿವೃತ್ತ ಸಬ್​ ಇನ್ಸ್​ಪೆಕ್ಟರ್​ ರಾಮ್​ ವಿನಯ್​ಸಿಂಗ್ ದೂರಿನನ್ವಯ ಅಜಿತ್​ ಸಿಂಗ್​ ವಿರುದ್ಧ ಸೀತಾಮರ್ಹಿ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ಜಿಲ್ಲೆಯ ಬೆಲ್ಹಿ ಜೈರಾಮ್​ ಗ್ರಾಮದಲ್ಲಿ ಗುರುವಾರ ರಾತ್ರಿ ಈ ಪ್ರಕರಣ ನಡೆದಿತ್ತು. ಪತ್ನಿಯನ್ನು ಹತ್ಯೆ ಮಾಡಿದ ಬಳಿಕ ಆರೋಪಿ ಪರಾರಿಯಾಗಿದ್ದಾನೆ. ಆತನ ಪತ್ತೆಗೆ ಇದೀಗ ಪೊಲೀಸರು ಬಲೆ ಬೀಸಿದ್ದಾರೆ. 

ಘಟನೆಯ ಬಗ್ಗೆ ಮಾತನಾಡಿರುವ ರಾಮ್​ ವಿನಯ್​ ಸಿಂಗ್, ನನ್ನ ಮಗ ಮದ್ಯ ವ್ಯಸನಿಯಾಗಿದ್ದು, ಗುರುವಾರ ಸಂಜೆ ಪಾನಮತ್ತನಾಗಿ ಮನೆಗೆ ಬಂದಿದ್ದಾನೆ. ಬರುವಾಗ ಜತೆಯಲ್ಲಿ ಮೊಟ್ಟೆಗಳನ್ನು ತಂದಿದ್ದ. ಆಮ್ಲೆಟ್​ ಮಾಡಿಕೊಡುವಂತೆ ಪತ್ನಿ ನೀತು ಸಿಂಗ್​ (30)ಗೆ ಹೇಳಿದ್ದಾನೆ. ಆದರೆ, ಆಕೆ ಆಮ್ಲೇಟ್ ಮಾಡಲು ನಿರಾಕರಿಸಿದ್ದಾಳೆ. ಇಂದು ಗುರುವಾರ ಮೊಟ್ಟೆ ಮಾಡುವಂತಿಲ್ಲ ಎಂದು ಹೇಳಿದ್ದಾಳೆ. 

ಈ ವಿಚಾರವಾಗಿ ಇಬ್ಬರ ಮಧ್ಯೆ ಜಗಳ ಆರಂಭವಾಗಿದೆ. ಪತಿಯ ಮದ್ಯ ವ್ಯಸನದಿಂದ ನೀತು ಬೇಸತ್ತು ಹೋಗಿದ್ದಳು. ಈ ಹಿಂದೆಯು ಆತನ ಚಟದ ವಿರುದ್ಧ ಪ್ರತಿಭಟಿಸಿದ್ದಳು. ಗುರುವಾರವೂ ಅದನ್ನೇ ಮಾಡಿದ್ದಾಳೆ. ಇದರಿಂದ ಕೋಪಗೊಂಡ ಅಜಿತ್​ ಮೊದಲು ಆಕೆಯನ್ನು ಬೆಡ್​ರೂಮ್​ನಲ್ಲಿ ಮೃಗೀಯವಾಗಿ ಹಲ್ಲೆ ಮಾಡಿದ್ದಾನೆ. 

ಇದಾದ ಬಳಿಕ ಆಕೆಯನ್ನು ಉಸಿರುಗಟ್ಟಿಸಿ ಕೊಂದು ಸೀಲಿಂಗ್​ ಫ್ಯಾನ್​ಗೆ ನೇತು ಹಾಕಿದ್ದಾನೆ. ಕೆಲವೇ ಸಮಯದಲ್ಲಿ ನೀತು ಕಿರುಚಾಡುವುದು ನಿಂತು ಹೋಗಿತ್ತು. ನಾವು ಇಬ್ಬರೂ ಸಮಾಧಾನಗೊಂಡಿರಬಹುದೆಂದು ಭಾವಿಸಿದ್ದೆವು. ಆದರೆ, ಕೆಲವೇ ಕ್ಷಣದಲ್ಲಿ ಅಜಿತ್​ ಮನೆಯಿಂದ ಆಚೆ ಓಡಿ ಹೋಗಿದ್ದಾನೆ. ಇದಾದ ಬಳಿಕ ಕೋಣೆ ಒಳಗೆ ಹೋಗಿ ನೋಡಿದಾಗ ನೀತು ಮೃತದೇಹ ಫ್ಯಾನಿನಲ್ಲಿ ನೇತಾಡುತ್ತಿತ್ತು. ಅದನ್ನು ನೋಡಿ ನಮಗೆ ಆಘಾತವಾಯಿತು ಎಂದು ರಾಮ್​ ವಿನಯ್​ ಸಿಂಗ್ ಹೇಳಿದ್ದಾರೆ. ಎಫ್​ಐಆರ್​ ನಲ್ಲಿ ವಿನಯ್​ ಸಿಂಗ್​ ಹೇಳಿಕೆಯನ್ನು ದಾಖಲಿಸಲಾಗಿದೆ. ಠಾಣಾಧಿಕಾರಿ ಎಚ್​.ಎಸ್​. ಕುಮಾರ್​ ಎಂಬುವರು ತನಿಖೆ ನಡೆಸುತ್ತಿದ್ದಾರೆ. ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದು ಆತನ ಪತ್ತೆಗೆ ಬಲೆ ಬೀಸಲಾಗಿದೆ.

Ads on article

Advertise in articles 1

advertising articles 2

Advertise under the article