MBBS Student arrested in Drug supply case- ಅಂತಿಮ ವರ್ಷದ ವೈದ್ಯ ವಿದ್ಯಾರ್ಥಿನಿ ಡ್ರಗ್ ಡೀಲರ್: ಕೋಟಿ ಮೌಲ್ಯದ ಡ್ರಗ್ ದಂಧೆ ಭೇದಿಸಿದ ಮಂಗಳೂರು ಪೊಲೀಸರು









ಮಂಗಳೂರಲ್ಲಿ ಪತ್ತೆಯಾಯಿತು ಕೋಟಿ ಮೌಲ್ಯದ ಹೈಡ್ರೋವೀಡ್

ಟಾರ್ಗೆಟ್ ಮಂಗಳೂರು!- ಹೈ ಸೊಸೈಟಿ ವಿದ್ಯಾರ್ಥಿಗಳೇ ಗ್ರಾಹಕರು

ಕನ್ಯಾಕುಮಾರಿ ಮೂಲದ ಮೆಡಿಕಲ್ ವಿದ್ಯಾರ್ಥಿನಿಯೇ ಡ್ರಗ್ ಪೆಡ್ಲರ್

ಮೆಡಿಕಲ್ ವಿದ್ಯಾರ್ಥಿನಿ ಸಹಿತ ಇಬ್ಬರ ಸೆರೆ


ಅತ್ಯಂತ ದುಬಾರಿ ಮಾದಕ ವಸ್ತು ಎನ್ನಲಾದ ಹೈಡ್ರೋ ವೀಡ್ ಗಾಂಜಾ ಮಾರಾಟ ದಂಧೆಯನ್ನು ಮಂಗಳೂರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.





ಮಾದಕ ದ್ರವ್ಯ ಎನಿಸಿದ ಗಾಂಜಾ ಬೆಳೆಯಲ್ಲೇ ಅತ್ಯಂತ ಹೆಚ್ಚು ಬೆಲೆಬಾಳುವ ಹೈಡ್ರೋ ವೀಡ್ ಗಾಂಜಾವನ್ನು ಮಾರಾಟ ಮಾಡಲು ಆರೋಪಿಗಳು ಯತ್ನಿಸುತ್ತಿದ್ದರು. ಬಂಧಿತರಲ್ಲಿ ಮಂಗಳೂರಿನ ಮೆಡಿಕಲ್ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿನಿಯೂ ಇದ್ದಿರುವುದು ಎಲ್ಲರನ್ನೂ ಚಕಿತಗೊಳಿಸಿದೆ.


ಮಂಗಳೂರು ಹೊರವಲಯದ ದೇರಳಕಟ್ಟೆ ಬಳಿ ಸಿಸಿಬಿ ಪೊಲೀಸರು ಈ ಯಶಸ್ವೀ ಕಾರ್ಯಾಚರಣೆ ನಡೆಸಿದ್ದದಾರೆ. ಕರಾವಳಿಯ ಪ್ರತಿಷ್ಟಿತ ಶ್ರೀನಿವಾಸ ವೈದ್ಯಕೀಯ ಕಾಲೇಜಿನಲ್ಲಿ ಅಂತಿಮ ವರ್ಷದ ಮೆಡಿಕಲ್ ಕಲಿಯುತ್ತಿದ್ದ ಮಿನು ರಶ್ಮಿ ಮತ್ತು ಕಾಸರಗೋಡಿನ ಮಂಗಲ್ಪಾಡಿ ನಿವಾಸಿ ಅಜ್ಮಲ್ ಎಂಬವರನ್ನು ಬಂಧಿಸಿದ್ದಾರೆ. ‌



ಬಂಧಿತರ ಬಳಿಯಲ್ಲಿದ್ದ ಸುಮಾರು 30 ಲಕ್ಷದಿಂದ ಒಂದು ಕೋಟಿ ಬೆಲೆಬಾಳುವ ಒಂದು ಕೆಜಿ 250 ಗ್ರಾಮ್ ಹೈಡ್ರೋ ವೀಡ್ ಗಾಂಜಾವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.


ಮಿನು ರಶ್ಮಿ ಮೂಲತಃ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ನಾಗರಕೊಯಿಲ್ ನಿವಾಸಿ. ಈಕೆ ಮಂಗಳೂರಿನ ಶ್ರೀನಿವಾಸ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ. ಇದೇ ವೇಳೆ, ಈಕೆ ಉಪ್ಪಳ ಬಳಿಯ ಮಂಗಲ್ಪಾಡಿ ನಿವಾಸಿ ಅಜ್ಮಲ್ ಜೊತೆ ಒಡನಾಟ ಹೊಂದಿದ್ದಳು.



ಎರಡು ದಿನಗಳ ಹಿಂದೆ ತಮಿಳುನಾಡಿನಿಂದ ರೈಲಿನಲ್ಲಿ ಮಂಗಳೂರಿಗೆ ಬಂದು ಅಜ್ಮಲ್ ಜೊತೆಗೆ ಕಾರಿನಲ್ಲಿ ದೇರಳಕಟ್ಟೆಗೆ ತೆರಳುತ್ತಿದ್ದಳು.‌ ಕಾರಿನಲ್ಲಿ ಹೈಡ್ರೋ ವೀಡ್ ಗಾಂಜಾ ಇರುವ ಬಗ್ಗೆ ಖಚಿತ ಮಾಹಿತಿ ಪಡೆದು ಪೊಲೀಸರು ದಾಳಿ ನಡೆಸಿದ್ದರು.



ಕಾಸರಗೋಡು ಜಿಲ್ಲೆಯ ನಿವಾಸಿಯಾಗಿರುವ ವೈದ್ಯ ಡಾ‌. ನದೀರ್ ಪ್ರಕರಣದ ಪ್ರಮುಖ ಆರೋಪಿ. ಆತನ ಸ್ನೇಹಿತರಿಗೆ ನೀಡುವಂತೆ ಮಿನು ರಶ್ಮಿಗೆ ಸೂಚನೆ ನೀಡಲಾಗಿತ್ತು. ಅದರಂತೆ, ಗಾಂಜಾ ಸಾಗಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಡಾ. ನದೀರ್ ಸದ್ಯಕ್ಕೆ ದುಬೈನಲ್ಲಿ ಇದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.



ಹೈಡ್ರೋ ವೀಡ್ ಗಾಂಜಾ ಸಾಧಾರಣ ಗಾಂಜಾಕ್ಕಿಂತ ಹತ್ತು ಪಟ್ಟು ಹೆಚ್ಚು ಅಮಲು ಬರಿಸುವ ಪದಾರ್ಥವಾಗಿದೆ. ಈ ಪದಾರ್ಥಕ್ಕೆ ಅತಿ ಹೆಚ್ಚು ದರದಲ್ಲಿ ಮಾರಾಟ ಮಾಡಲಾಗುತ್ತದೆ ಎನ್ನಲಾಗಿದೆ. ಯುರೋಪ್ ರಾಷ್ಟ್ರಗಳಲ್ಲಿ ಇದನ್ನು ನಿಯಮಿತ ಉಷ್ಣತೆಯಲ್ಲಿ ಬೆಳೆಯಲಾಗುತ್ತಿದ್ದು ಅಕ್ರಮವಾಗಿ ಭಾರತಕ್ಕೆ ತಂದು ಮಾರಾಟ ಮಾಡಲಾಗುತ್ತದೆ.



ಮಂಗಳೂರಿನ ಎಕಾನಮಿಕ್ ಅಂಡ್ ನಾರ್ಕೋಟಿಕ್ ಠಾಣೆಗೆ ಪ್ರಕರಣ ಹಸ್ತಾಂತರಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿ ಇದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿ ಕುಮಾರ್ ತಿಳಿಸಿದ್ದಾರೆ.

BREAKING NEWS
Loading latest news...
Join our WhatsApp Channel Powered By : Online Pudu