KPSC leak- politicians involved? | ಕೆಪಿಎಸ್‌ಸಿ ಕರ್ಮಕಾಂಡ: ಇನ್ಸ್‌ಪೆಕ್ಟರ್‌ನಿಂದಲೇ ಪ್ರಶ್ನೆ ಪತ್ರಿಕೆ ಸೋರಿಕೆ, ರಾಜಕಾರಣಿಗಳೂ ಭಾಗಿ?- ಸಿಸಿಬಿ ತನಿಖೆಯಿಂದ ಬಯಲು



Accused; Chandrappa


ಬೆಂಗಳೂರು: ಎಫ್‌ಡಿಎ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಮಾಡಲು ವಾಣಿಜ್ಯ ತೆರಿಗೆ ಇಲಾಖೆ ಇನ್‌ಸ್ಪೆಕ್ಟರ್‌ ಜಿ.ಎಸ್.ಚಂದ್ರು ಹಾಗೂ ಸಹಚರರು, ಹಲವು ತಿಂಗಳಿನಿಂದ ತಯಾರಿ ಮಾಡಿಕೊಂಡಿದ್ದರು ಎಂಬ ಸಂಗತಿ ಸಿಸಿಬಿ ತನಿಖೆಯಿಂದ ಬಯಲಾಗಿದೆ. ಈ ಪ್ರಕರಣ ಹಿಂದಿನ ಪ್ರಶ್ನೆ ಪತ್ರಿಕೆ ಸೋರಿಕೆ ಜಾಲವನ್ನು ಪತ್ತೆ ಹಚ್ಚುವ ಸಾಧ್ಯತೆಗಳು ಕೂಡಾ ಇವೆ.







ಜ್ಞಾನಭಾರತಿ ಠಾಣೆ ವ್ಯಾಪ್ತಿಯ ಉಲ್ಲಾಳ ಬಳಿಯ ಉಪಕಾರ್‌ ಲೇಔಟ್‌ನಲ್ಲಿರುವ ಚಂದ್ರಪ್ಪ ಮನೆ ಮೇಲೆ ಶನಿವಾರ ದಾಳಿ ಮಾಡಿರುವ ಸಿಸಿಬಿ ಪೊಲೀಸರು, ಅದೇ ಮನೆಯಲ್ಲೇ ಪ್ರಶ್ನೆಪತ್ರಿಕೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಚಂದ್ರು ಆಲಿಯಾಸ್ ಚಂದ್ರಪ್ಪ ಎಂಬಾತನ ಜೊತೆಗೆ ದ್ವಿತೀಯ ದರ್ಜೆ ಸಹಾಯಕ (ಎಸ್.ಡಿ.ಎ.) ರಾಚಪ್ಪ, ಮಹೇಶ್‌ ಹಾಗೂ ಮೂರು ಮಂದಿ ಅಭ್ಯರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.


ಬೆಂಗಳೂರಿನ ಕೋರಮಂಗಲದಲ್ಲಿ ರುವ ವಾಣಿಜ್ಯ ತೆರಿಗೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಇನ್‌ಸ್ಪೆಕ್ಟರ್ ಜಿ.ಎಸ್. ಚಂದ್ರಪ್ಪ, ತನ್ನ ಸಹಚರರ ಜೊತೆ ಸೇರಿ ಪ್ರಶ್ನೆಪತ್ರಿಕೆ ಸೋರಿಕೆ ಮಾಡಲು ಸಂಚು ರೂಪಿಸಿದ್ದ ಎಂಬ ಮಾಹಿತಿಗಳು ಲಭ್ಯವಾಗಿವೆ..



ಇದಕ್ಕೆ ಸಂಬಂಧಿಸಿದಂತೆ, ಮಧ್ಯವರ್ತಿಗಳ ಮೂಲಕ ಅಭ್ಯರ್ಥಿಗಳನ್ನು ಸಂಪರ್ಕಿಸಿ, ಪ್ರಶ್ನೆಪತ್ರಿಕೆ ನೀಡುವ ಒಪ್ಪಂದ ಮಾಡಿಕೊಂಡು ಹಣ ಪಡೆದಿದ್ದ ಎಂದು ಸಿಸಿಬಿ ಮೂಲಗಳು ಹೇಳಿವೆ. 



ಮಧ್ಯವರ್ತಿಗಳಲ್ಲಿ KPSC ಸದಸ್ಯರು, ಅಧಿಕಾರಿಗಳು, ಪ್ರಭಾವಿ ರಾಜಕಾರಣಿಗಳು ಭಾಗಿಯಾಗಿರುವ ಸಾಧ್ಯತೆ ಇದೆ ಎಂದೆ ಶಂಕೆ ವ್ಯಕ್ತಪಡಿಸಲಾಗಿದೆ.




ಶನಿವಾರವೇ ಆರೋಪಿ ಕೈಗೆ ಪ್ರಶ್ನೆಪತ್ರಿಕೆ ಸಿಕ್ಕಿತ್ತು. ಅದನ್ನೇ ಮನೆಗೆ ತಂದಿದ್ದ ಚಂದ್ರು, 10 ಲಕ್ಷ ರೂ ಹಣ ಪಡೆದು ಅಭ್ಯರ್ಥಿಗಳಿಗೆ ಕೊಟ್ಟಿದ್ದ. ಈ ಪ್ರಶ್ನೆಗಳನ್ನು ಇಟ್ಟುಕೊಂಡು ಸರಿಯಾದ ಉತ್ತರಗಳನ್ನು ಸಿದ್ಧಪಡಿಸಿದ್ದ ಕೆಲ ಅಭ್ಯರ್ಥಿಗಳು, ಭಾನುವಾರ ನಡೆಯಲಿದ್ದ ಪರೀಕ್ಷೆ ಬರೆಯಲು ಸಿದ್ಧರಾಗಿದ್ದರು. 



ಪ್ರಶ್ನೆಪತ್ರಿಕೆ ಸೋರಿಕೆ ಮಾಹಿತಿ ಬರುತ್ತಿದ್ದಂತೆ ಮನೆ ಮೇಲೆ ದಾಳಿ ಮಾಡಿ ಶೋಧ ನಡೆಸಲಾಯಿತು. ಸೋರಿಕೆಯಾದ ಪ್ರಶ್ನೆ ಪತ್ರಿಕೆ ಹಾಗೂ ಅಭ್ಯರ್ಥಿಗಳ ಜೊತೆ ರೆಡ್ ಹ್ಯಾಂಡ್ ಆಗಿ ಆರೋಪಿಗಳೂ ಸಿಕ್ಕಿಬಿದ್ದರು ಎಂದೂ ಸಿಸಿಬಿ ಮೂಲಗಳು ಹೇಳಿವೆ.



ಆರೋಪಿ ಚಂದ್ರಪ್ಪ, ಕೆಲ ಅಧಿಕಾರಿಗಳು ಮತ್ತು ರಾಜಕಾರಣಿಗಳ ಜೊತೆ ಉತ್ತಮ ಒಡನಾಟ ಇಟ್ಟುಕೊಂಡಿದ್ದ. ಆತನೇ ಪ್ರಶ್ನೆಪತ್ರಿಕೆ ಸೋರಿಕೆ ರೂವಾರಿ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಇನ್ನಷ್ಟು ಮಾಹಿತಿಗಳು ತನಿಖೆಯಿಂದ ಹೊರಬರಲಿವೆ.