ಕಲ್ಲಕುರಿಚಿ (ತಮಿಳುನಾಡು): ಮನೆಗೆಲಸಕ್ಕಾಗಿ ಕುವೈತ್ಗೆ ತೆರಳಿದ್ದ ತಮಿಳುನಾಡಿನ ಮಹಿಳೆಯೊಬ್ಬರು ಅಲ್ಲಿ ತೀವ್ರ ದೈಹಿಕ, ಮಾನಸಿಕ ಹಿಂಸೆಗೊಳಗಾಗಿದ್ದು, ತಮ್ಮನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆಸಿಕೊಳ್ಳುವಂತೆ ಕಣ್ಣೀರಿಡುತ್ತಾ ವೀಡಿಯೋ ಮೂಲಕ ಸರ್ಕಾರ ಹಾಗೂ ಅಧಿಕಾರಿಗಳಿಗೆ ರಕ್ಷಣೆಯ ಮೊರೆ ಹೋಗಿದ್ದಾರೆ.
ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯ ಅನಿತಾ ಎಂಬ ಇಬ್ಬರು ಹದಿಹರೆಯದ ಮಕ್ಕಳ ತಾಯಿ ಈ ಸಂಕಷ್ಟಕ್ಕೆ ಸಿಲುಕಿದ ದುರ್ದೈವಿ. ಮಧ್ಯವರ್ತಿಗಳ ಮೂಲಕ ಮನೆಗೆಲಸದ ಆಸೆಯಿಂದ ಮೂರು ತಿಂಗಳ ಹಿಂದೆ ಕುವೈತ್ಗೆ ತೆರಳಿದ್ದ ಇವರು, ಕಳೆದ ಎರಡು ತಿಂಗಳಿಂದ ತೀವ್ರ ಹಿಂಸೆಗೆ ಒಳಗಾಗಿದ್ದಾರೆ.
ಕಣ್ಣೀರಿಟ್ಟು ವೀಡಿಯೋದಲ್ಲಿ ಬೇಡಿಕೊಂಡ ಸಂತ್ರಸ್ತೆ
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವೀಡಿಯೋದಲ್ಲಿ ಕಣ್ಣೀರು ಸುರಿಸುತ್ತಾ ಮಾತನಾಡಿದ ಅನಿತಾ, ಕಲ್ಲಕುರಿಚಿ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗೆ (SP) ನೇರವಾಗಿ ರಕ್ಷಣೆಗೆ ಮನವಿ ಮಾಡಿದ್ದಾರೆ:
"ನಾನು ಇಲ್ಲಿಗೆ ಬಂದು ಮೂರು ತಿಂಗಳಾಯಿತು. ಕಳೆದ ಎರಡು ತಿಂಗಳಿಂದ ಅವರು ನನಗೆ ತೀವ್ರ ಚಿತ್ರಹಿಂಸೆ ನೀಡುತ್ತಿದ್ದಾರೆ, ಅತ್ಯಂತ ಕ್ರೂರವಾಗಿ ನಡೆಸಿಕೊಳ್ಳುತ್ತಿದ್ದಾರೆ. 50 ದಿನಗಳಿಂದ ಸರಿಯಾಗಿ ಊಟ ನೀಡಿಲ್ಲ, ಎರಡು ತಿಂಗಳಿಂದ ಸಂಬಳವನ್ನೂ ಕೊಟ್ಟಿಲ್ಲ. ನನ್ನನ್ನು ಜೀವಂತವಾಗಿ ರಕ್ಷಿಸಿ ತಾಯ್ನಾಡಿಗೆ ಕರೆಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಹಾಗೂ ಎಸ್ಪಿ ಮೇಡಂ ಅವರಲ್ಲಿ ಬೇಡಿಕೊಳ್ಳುತ್ತೇನೆ. ಈ ನೋವನ್ನು ಇನ್ನು ತಾಳಿಕೊಳ್ಳಲು ನನ್ನಿಂದ ಸಾಧ್ಯವಿಲ್ಲ, ಅವರು ನನ್ನನ್ನು ಕೊಂದುಬಿಡುತ್ತಾರೆ ಎಂಬ ಭಯವಿದೆ. ದಯವಿಟ್ಟು ನನ್ನನ್ನು ಹೇಗಾದರೂ ಮಾಡಿ ಬದುಕಿಸಿ ಕರೆದೊಯ್ಯಿರಿ."
ಏಜೆಂಟ್ನಿಂದ ವಂಚನೆ: ತಾಯಿಯ ಆಕ್ರಂದನ
ಅತ್ತ ಭಾರತದಲ್ಲಿರುವ ಅನಿತಾ ಅವರ ತಾಯಿ ಅನಿಲಾ ಕೂಡ ಅಧಿಕಾರಿಗಳಿಗೆ ಕಣ್ಣೀರಿನ ಮನವಿ ಮಾಡಿದ್ದು, ಸ್ಥಳೀಯ ಏಜೆಂಟ್ ತಮ್ಮ ಕುಟುಂಬಕ್ಕೆ ವಂಚಿಸಿದ್ದಾನೆ ಎಂದು ಆರೋಪಿಸಿದ್ದಾರೆ. "ನನ್ನ ಮಗಳನ್ನು ಒಳ್ಳೆಯ ಕೆಲಸ ಕೊಡಿಸುವುದಾಗಿ ನಂಬಿಸಿ ಕುವೈತ್ಗೆ ಕಳುಹಿಸಿ ವಂಚಿಸಿದ್ದಾರೆ. ಅಲ್ಲಿ ಆಕೆಯನ್ನು ಕ್ರೂರವಾಗಿ ಹಿಂಸಿಸಲಾಗುತ್ತಿದೆ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಆಕೆಯನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿ ತರಲು ಕ್ರಮ ಕೈಗೊಳ್ಳಬೇಕು" ಎಂದು ಆಗ್ರಹಿಸಿದ್ದಾರೆ.
ಮಹಿಳೆಯ ವೀಡಿಯೋ ಸದ್ಯ ವ್ಯಾಪಕ ಗಮನ ಸೆಳೆದಿದ್ದು, ವಿದೇಶಾಂಗ ಇಲಾಖೆ ಹಾಗೂ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಆಕೆಯ ರಕ್ಷಣೆಗೆ ಮುಂದಾಗಬೇಕೆಂಬ ಒತ್ತಾಯ ಕೇಳಿಬಂದಿದೆ.
.png)