2008ರ ಕಳವು ಪ್ರಕರಣದ ಖದೀಮನಿಗೆ ನ್ಯಾಯಾಂಗ ಬಂಧನ; ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಖಾಕಿ ಪಡೆ!
ಬೆಳ್ತಂಗಡಿ / ವೇಣೂರು:
ಕಳವು ಪ್ರಕರಣವೊಂದರಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ವೇಣೂರು ಠಾಣಾ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮಹಮ್ಮದ್ ಶರೀಪ್ (46) ಎಂದು ಗುರುತಿಸಲಾಗಿದೆ.
ಪ್ರಕರಣದ ಹಿನ್ನೆಲೆ:
ಆರೋಪಿ ಮಹಮ್ಮದ್ ಶರೀಪ್ ವಿರುದ್ಧ 2008 ರಲ್ಲಿ ವೇಣೂರು ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 457 (ಮನೆಗೆ ಕನ್ನ ಹಾಕುವುದು) ಹಾಗೂ 380 (ಕಳವು) ಅಡಿಯಲ್ಲಿ (ಅ.ಕ್ರ. 71/2008) ಪ್ರಕರಣ ದಾಖಲಾಗಿತ್ತು. ಆದರೆ, ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದ ವೇಳೆ ಈತ ವಿಚಾರಣೆಗೆ ಹಾಜರಾಗದೆ ನಿರಂತರವಾಗಿ ತಲೆಮರೆಸಿಕೊಂಡಿದ್ದನು.
ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಆರೋಪಿಯ ವಿರುದ್ಧ ಸಿ.ಸಿ. ಸಂಖ್ಯೆ 535/2016 ರ ಅಡಿಯಲ್ಲಿ ಜಾಮೀನು ರಹಿತ ಬಂಧನ ವಾರಂಟ್ (LPC/Warrant) ಹೊರಡಿಸಿತ್ತು.
ಪೊಲೀಸರ ಮಿಂಚಿನ ಕಾರ್ಯಾಚರಣೆ:
ಆರೋಪಿಯ ಸುಳಿವು ಪಡೆದ ವೇಣೂರು ಠಾಣಾ ಸಿಬ್ಬಂದಿಗಳಾದ ಎಎಸ್ಐ ಬೆಣ್ಣಿಚನ್, ಪಿಸಿ ಬಸವರಾಜ್ ಹಾಗೂ ಬೆಳ್ತಂಗಡಿ ಉಪ ವಿಭಾಗ ಕಚೇರಿಯ ಸಿಬ್ಬಂದಿ ಪ್ರವೀಣ್ ಎಂ. ಅವರನ್ನೊಳಗೊಂಡ ಪೊಲೀಸ್ ತಂಡವು ಆಗಸ್ಟ್ 13 ರಂದು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ದಸ್ತಗಿರಿ ಮಾಡಿದ ಆರೋಪಿಯನ್ನು ಬೆಳ್ತಂಗಡಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.