
ಡಾ. ರಘುಪತಿ, ರತ್ನಮಾಲಾ ಪುರಂದರ್, ಸರೋಜಿನಿ ಶೆಟ್ಟಿ, ಯಶವಂತ ಬೋಳೂರು ಸಹಿತ ಆರು ಮಂದಿಗೆ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಡಾ. ರಘುಪತಿ, ರತ್ನಮಾಲಾ ಪುರಂದರ್, ಸರೋಜಿನಿ ಶೆಟ್ಟಿ, ಯಶವಂತ ಬೋಳೂರು ಸಹಿತ ಆರು ಮಂದಿಗೆ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಡಾ. ರಘುಪತಿ ಕೆಮ್ತೂರು (71 ವರ್ಷ)
(ತುಳು ಸಂಶೋಧನೆ /ಸಾಹಿತ್ಯ ಕ್ಷೇತ್ರ)
ಡಾ.
ರಘಪತಿ
ಕೆಮ್ತೂರು ಇವರು ಉಡುಪಿ ಜಿಲ್ಲೆಯ ಕೆಮ್ತೂರಿನವರು. ಇವರು ತುಳುನಾಡಿನ ಊರುಗಳಿಗೆ ಇರುವ ಹೆಸರುಗಳ ಬಗ್ಗೆ ಬಹು ಶಾಸ್ತ್ರೀಯ ಹಿನ್ನೆಲೆಯಲ್ಲಿ ಅಧ್ಯಯನ ಮಾಡಿ ಮಂಡಿಸಿದ ಸಂಶೋಧನ ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯ 1981ರಲ್ಲಿ ಪಿ.ಎಚ್.ಡಿ.
ಪದವಿ ನೀಡಿ ಗೌರವಿಸಿದೆ.
ಈ ಹಿನ್ನೆಲೆಯಲ್ಲಿ ಅವರು ಬರೆದಿರುವ “ತುಳುನಾಡಿನ ಸ್ಥಳನಾಮಾಧ್ಯಯನ” ಗ್ರಂಥವು ಶ್ರೇಷ್ಠ ಸಂಶೋಧನಾ ಗ್ರಂಥವೆಂದು ವ್ಯಾಖ್ಯಾನಿಸಲ್ಪಟ್ಟಿದೆ.
ಇವರ ‘ತುಳು ಮತ್ತು ಕನ್ನಡ ಸ್ಥಳನಾಮ ವಸ್ತುಕೋಶ’ ಹಾಗೂ “ಹೆಸರಿನಲ್ಲೇನಿದೆ..?” ಎಂಬ ಪುಸ್ತಕವು ತುಳುನಾಡಿನ ಸ್ಥಳನಾಮಗಳ ಬಗ್ಗೆ ಸಮಗ್ರ ವಿವರ ನೀಡುವ ಕೃತಿಗಳಾಗಿವೆ. ತುಳುನಾಡಿನ ಸ್ಥಳನಾಮಗಳ ಬಗ್ಗೆ ರಾಷ್ಟ್ರೀಯ ಅಂತ ರಾಷ್ಟ್ರೀಯ ಇಂಗ್ಲೀಷ್ ನಿಯತಕಾಲಿಕೆಗಳಲ್ಲಿ ಇವರ ಲೇಖನ ಪ್ರಕಟವಾಗಿದೆ. ವಿಮರ್ಶಕರಾಗಿ ಖ್ಯಾತರಾಗಿರುವ ಇವರು ಎಂಟು ವಿಮರ್ಶನಾ ಕೃತಿಗಳನ್ನು ಪ್ರಕಟಿಸಿದ್ದಾರೆ. ತುಳು ಸಂಶೋಧನೆ ಹಾಗೂ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ
2022ನೇ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ.
ರತ್ನಮಾಲಾ ಪುರಂದರ ಬೆಂಗಳೂರು (65 ವರ್ಷ)
(ತುಳು ನಾಟಕ / ಸಿನಿಮಾ ಕ್ಷೇತ್ರ)
ಮೂಲತಃ ಮಂಗಳೂರಿನ ಪಣಂಬೂರಿನವರಾದ ರತ್ನಮಾಲಾ ಪುರಂದರ (65) ಅವರು 4 ದಶಕಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವರು. ತನ್ನ 13ನೇ ವಯಸ್ಸಿನಲ್ಲಿ
ತುಳು ನಾಟಕ ಕಲಾವಿದೆಯಾಗಿ ರಂಗ ಪ್ರವೇಶಿಸಿದ ರತ್ನಮಾಲಾ ಅವರು ಆರಂಭಿಕ ವರ್ಷದಲ್ಲಿ ಕೆ.ಎನ್. ಟೇಲರ್, ರಮಾನಂದ ಚೂರ್ಯ, ರಾಮ ಕಿರೋಡಿಯನ್ ಮೊದಲಾದವರ 30ಕ್ಕೂ ಅಧಿಕ ತುಳು ನಾಟಕಗಳಲ್ಲಿ ನಟಿಸಿ ಪ್ರಸಿದ್ಧಿ
ಪಡೆದವರು. ಕೆ.ಎನ್. ಟೇಲರ್ ಅವರ ತುಳು ಸಿನಿಮಾ ಕಾಸ್ ದಾಯೆ ಕಂಡನಿ,
ಏರ್ ಮಲ್ತಿನ ತಪ್ಪು ತುಳು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಸಂಗೀತ ಕಲಾವಿದೆಯಾಗಿರುವ ರತ್ನಮಾಲಾ ಅವರು ತುಳುವಿನಲ್ಲಿ ಹಾಡಿರುವ
70ಕ್ಕೂ ಹೆಚ್ಚು ಹಾಡುಗಳು ಕ್ಯಾಸೆಟ್ ರೂಪದಲ್ಲಿ ಬಂದಿವೆ. ಅನೇಕ ಕನ್ನಡ ಸಿನಿಮಾ , ಧಾರವಾಹಿಗಳ ನಟಿಯಾಗಿ ಪಾತ್ರ ಮಾಡಿದ್ದಾರೆ, ಹಿನ್ನೆಲೆ ಗಾಯಕಿಯಾಗಿಯೂ ಹಾಡಿದ್ದಾರೆ. ಬೆಂಗಳೂರು ತುಳು ಕೂಟದಲ್ಲಿ 25 ವರ್ಷಗಳವರೆಗೆ ಸದಸ್ಯೆಯಾಗಿ ಹಾಗೂ 5 ಅವಧಿಗೆ ಉಪಾಧ್ಯಕ್ಷರಾಗಿ
ಸೇವೆ ಸಲ್ಲಿಸಿದ್ದಾರೆ.
ತುಳು ನಾಟಕ ಹಾಗೂ ಸಿನಿಮಾ ಕ್ಷೇತ್ರದ ಸಾಧನೆಗಾಗಿ 2022 ನೇ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ.
ಮುಂಡಾಸು ವಾದ್ಯ ಕಲಾಕಾರ ಪ್ರಭಾಕರ ಶೇರಿಗಾರ (70 ವರ್ಷ)
(ತುಳು ಜಾನಪದ ಕ್ಷೇತ್ರ)
ಉಡುಪಿ ಕಡಿಯಾಳಿ ನಿವಾಸಿ ಪ್ರಭಾಕರ ಶೇರಿಗಾರ (70) ಅಪರೂಪದ ಮುಂಡಾಸು ವಾದ್ಯ ನುಡಿಸುವ ಹಿರಿಯ ಕಲಾವಿದರು. ದೇವಸ್ಥಾನ, ಮಠಗಳ ಉತ್ಸವ, ಜಾತ್ರೆ ಸಂದರ್ಭದಲ್ಲಿ ಪಂಚವಾದ್ಯದ ಜೊತೆಗೆ ಮುಂಡಾಸು ವಾದ್ಯ (ಸೂರ್ಯವಾದ್ಯ) ನುಡಿಸುವ ಸಾಂಪ್ರದಾಯಿಕ ಕಲಾ ಪ್ರಕಾರದಲ್ಲಿ 40 ವರ್ಷಗಳಿಗಿಂತ ಹೆಚ್ಚು ವರ್ಷ ಸೇವೆ ಸಲ್ಲಿಸಿದವರು ಪ್ರಭಾಕರ ಶೇರಿಗಾರ.
ಸೂರ್ಯವಾದ್ಯ (ಮುಂಡಾಸು ವಾದ್ಯ) ಎಂಟರಿ0ದ ಹತ್ತು ಇಂಚು ವ್ಯಾಸವುಳ್ಳ ಕಬ್ಬಿಣ ಅಥವಾ ಹಿತ್ತಾಳೆಯ ಬಳೆಗೆ ಆಡಿನ ಚರ್ಮದ ಹೊದಿಕೆ ಬಿಗಿಗೊಳಿಸಿ ತನ್ನ ಹಣೆಯ ಮುಂಭಾಗಕ್ಕೆ ಬರುವಂತೆ ಧರಿಸಿ ನುಡಿಸುವಂತ ವಿಶಿಷ್ಟ ವಾದನ ಪರಿಕರ.
ಶ್ರೀಯುತ ಪ್ರಭಾಕರ ಶೇರಿಗಾರ ಅವರು ಮುಂಡಾಸು ವಾದ್ಯ ನುಡಿಸುವ ಏಕೈಕ ಕಲಾವಿದರಾಗಿದ್ದಾರೆ. ಇದೀಗ ವಯೋಸಹಜವಾಗಿ ಈ ವೃತ್ತಿಯನ್ನು ನಿಲ್ಲಿಸಿದ್ದಾರೆ. ಮುಂಡಾಸು ವಾದ್ಯದ ಕೊನೆಯ ಕೊಂಡಿಯಾಗಿರುವವರು ಪ್ರಭಾಕರ ಶೇರಿಗಾರರು. ಇವರ ಜಾನಪದ ಕ್ಷೇತ್ರದ ಸಾಧನೆಗಾಗಿ 2022 ನೇ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ.
ಶಿಮಂತೂರು ಚಂದ್ರಹಾಸ ಸುವರ್ಣ ಮುಂಬಯಿ (70 ವರ್ಷ)
(ತುಳು ಸಾಹಿತ್ಯ ಕ್ಷೇತ್ರ)
ಮೂಲತ: ದಕ್ಷಿಣ ಕ್ನನಡದ ಮೂಲ್ಕಿಯ ಶಿಮಂತೂರು ಗ್ರಾಮದ ಚಂದ್ರಹಾಸ ಸುವರ್ಣರು
ಕಳೆದ 44 ವರ್ಷಗಳಿಂದ ಮುಂಬಯಿಯಲ್ಲಿ ನೆಲೆಸಿದ್ದಾರೆ.
ತುಳು ಭಾಷೆಯ ಕವಿತೆ , ಕಥೆ, ಕಾದಂಬರಿ, ನಾಟಕ, ಜನಪದ ವಿಚಾರಗಳ ಬಗ್ಗೆ ಪ್ರೌಢ ಕೃತಿಗಳನ್ನು ಪ್ರಕಟಿಸಿರುವರು. ಶಿಮಂತೂರು ಅವರ 17 ಕೃತಿಗಳು ಪ್ರಕಟಗೊಂಡಿವೆ. ಇದರಲ್ಲಿ 10 ತುಳು ಕೃತಿಗಳು. ಇವರ ಕೊರಲ್ ಕವನ ಸಂಕಲನ 2012ರಲ್ಲಿ ಹಾಗೂ ಗಾಲ ತುಳು ನಾಟಕ 2015ರಲ್ಲಿ , ಗಗ್ಗರ ಕಥಾ ಸಂಕಲನ 2017 ರಲ್ಲಿ ತುಳು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತ ಕೃತಿಗಳು.
ಮಣ್ಣ್ದ ಮದಿಪು ಕಾದಂಬರಿ 2017 ರಲ್ಲಿ ಪಣಿಯಾಡಿ ಪ್ರಶಸ್ತಿ ಪುರಸ್ಕೃತವಾಗಿತ್ತು.
ಮುಂಬಯಿಯಲ್ಲಿ ನೆಲೆಸಿ ತನ್ನ ವೃತಿಯ ಜೊತೆಗೆ ಪುಸ್ತಕ ಬರವಣಿಗೆ ಪ್ರಕಟಣಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಶಿಮಂತೂರು ಅವರು ತಮ್ಮ ಪೂಜ ಪ್ರಕಾಶನದ ಮೂಲಕ ತನ್ನ ಹಾಗೂ ವಿವಿಧ ಲೇಖಕರ 30 ಕೃತಿಗಳನ್ನು ಪ್ರಕಟಿಸುವ ಮೂಲಕ ಮುಂಬಯಿಯಲ್ಲಿ
ತುಳು ಸಾಹಿತ್ಯ ಲೋಕದ ಕೊಂಡಿಯಾಗಿ ನಿರಂತರವಾಗಿ ಸೇವೆ ನಿರ್ವಹಿಸುತ್ತಿದ್ದಾರೆ. 2018-2011
ರ ಅವಧಿಯಲ್ಲಿ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ತುಳು ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ 2023ನೇ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ನೆಕ್ಕಿದಪುಣಿ ಗೋಪಾಲಕೃಷ್ಣ ಬೆಂಗಳೂರು (75 ವರ್ಷ)
(ತುಳು ನಾಟಕ ಕ್ಷೇತ್ರ)
ಮೂಲತ ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ನೆಕ್ಕಿದಪುಣಿಯವರಾಗಿರುವ ಗೋಪಾಲಕೃಷ್ಣ (75) ಅವರು 46 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವರು. 1969ರಲ್ಲಿ ಬರವಣಿಗೆ ಆರಂಭಿಸಿದ ಗೋಪಾಲಕೃಷ್ಣರು ನಾಟಕ, ರಚನೆ, ನಿರ್ದೇಶನ ಹಾಗೂ ನಟನೆ ಹಾಗೂ ವರ್ಣ ಅಲಂಕಾರದಲ್ಲಿ ತನ್ನನ್ನು ಸುದೀರ್ಘ ಕಾಲ ತೊಡಗಿಸಿಕೊಂಡವರು. 24 ತುಳು
ನಾಟಕ ಕೃತಿಗಳನ್ನು ರಚಿಸಿ ಪ್ರಕಟಿಸಿದ್ದಾರೆ.
ಗುಟ್ಟುದ ಕರಿಯಮಣಿ , ಅಜ್ಜಿನ ಸೋಲು, ಬಲಿದಾನ, ಕಲ್ಕುಡ ಕಲ್ಲುರ್ಟಿ, ಕೋಟಿ ಚೆನ್ನಯ , ಸತ್ಯ ಹರಿಶ್ಚಂದ್ರ , ಲಚ್ಚುನ ಕೊರಗೆ, ಮೊದಲಾದವು ನೆಕ್ಕಿದಪುಣಿ ಗೋಪಾಲಕೃಷ್ಣರ ಪ್ರಸಿದ್ದ್ತಿ ಪಡೆದ ನಾಟಕಗಳು. ನೆಕ್ಕಿದಪುಣಿ ಗೋಪಾಲಕೃಷ್ಣರು
ಬ್ರಹ್ಮ ಶ್ರೀ ನಾರಾಯಣ ಗುರುಗಳ ಬಗ್ಗೆ 7 ಕೃತಿಗಳನ್ನು ರಚಿಸಿದ್ದಾರೆ.
1972ರಲ್ಲಿ ಎಸ್.ಆರ್. ಹೆಗ್ಡೆ ನೇತೃತ್ವದಲ್ಲಿ ಮಂಗಳೂರಿನಲ್ಲಿ ತುಳುಕೂಟ ಆರಂಭವಾದಾಗ ಅವರು ಸ್ಥಾಪಕ ಸದಸ್ಯರಾಗಿದ್ದರು. ಬೆಂಗಳೂರು ತುಳುಕೂಟದಲ್ಲಿ ವಿಶುಕುಮಾರ್ ಅವರು ಅಧ್ಯಕ್ಷರಾಗಿದ್ದಾಗ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುತ್ತಾರೆ. ಪ್ರಸ್ತುತ ಬೆಂಗಳೂರಿನಲ್ಲಿ ತುಳು ಸಂಘ ಸಂಸ್ಥೆಗಳಿಗೆ ಹಿರಿಯ ಮಾರ್ಗದರ್ಶಕರಾಗಿದ್ದಾರೆ. ತುಳು ನಾಟಕ ಕ್ಷೇತ್ರದ ಸಾಧನೆಗಾಗಿ 2023ನೇ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಲಕ್ಷ್ಮಣ ಯಾನೆ ಕಾಂತ (65 ವರ್ಷ)
(ತುಳು ಜಾನಪದ ಕ್ಷೇತ್ರ)
ಉಳ್ಳಾಲ ತಾಲೂಕಿನ ಬಾಳೆಪುಣಿ ಗ್ರಾಮದ
ಕಣಂತೂರಿನಲ್ಲಿ ಜನಿಸಿದ ಲಕ್ಷಣ ಯಾನೆ ಕಾಂತ (65) ಇವರು ತನ್ನ ಹತ್ತೊಂಭತ್ತನೇ ವಯಸ್ಸಿನಿಂದ ದೈವಾರಾಧನೆ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿರುತ್ತಾರೆ. ತುಳುನಾಡಿನ ಕಾರಣಿಕ ಪ್ರಸಿದ್ದ ದೈವಸ್ಥಾನವಾದ ಕಣಂತೂರು ಶ್ರೀ ತೋಡಕುಕ್ಕಿನಾರು ಕ್ಷೇತ್ರದ ದೈವರಾಧನೆ ಸೇರಿದಂತೆ
ಕೂಟತ್ತಾಜೆ ಉಳ್ಳಾಲ್ದಿ ಕ್ಷೇತ್ರ, ಬಾರೆಬೆಟ್ಟು ಕ್ಷೇತ್ರ, ವರ್ಕಾಡಿ, ನರಿಂಗಾನದ ಮಲರಾಯ ಪಿಲಿ ಚಾಮುಂಡಿ ಕ್ಷೇತ್ರ, ಬೋಳಿಯಾರು ಮೂವೆರ್ ದೈಯ್ಯೂಂಕುಲು , ಮುಡಿಪು ಮುಡಿಪಿನ್ನಾರ್ ಕ್ಷೇತ್ರ, ಇರಾ ಕುರ್ಯಾಡಿತ್ತಾಯ, ಮಂಜೇಶ್ವರ ವೀರ ಭದ್ರ ಕ್ಷೇತ್ರ ಮೊದಲಾದ ಕ್ಷೇತ್ರಗಳಲ್ಲಿ ನೇಮ ಕಟ್ಟುವ ಸೇವೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಇವರ ಮೂಲ ಹೆಸರು ಲಕ್ಷ್ಮಣ ಎಂದಾಗಿದ್ದು, ದೈವರಾಧನೆಯ ಪರಂಪರೆಯಿ0ದ ಗುರುತಿಸಿಕೊಳ್ಳುವುದು ಕಣಂತೂರು ಕಾಂತ ಎಂದಾಗಿರುತ್ತದೆ. ತುಳು ಜಾನಪದ ಕ್ಷೇತ್ರದ ಸಾಧನೆಗಾಗಿ 2023ನೇ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ.
ಯಶವಂತ ಬೋಳೂರು (70 ವರ್ಷ)
(ತುಳು ಸಾಹಿತ್ಯ ಕ್ಷೇತ್ರ)
ಮೀನುಗಾರರ ಬದುಕಿನ ಆಸ್ಮಿತೆ ಜೊತೆಗೆ ಕಡಲ ಕರೆಯ ತುಳು ಭಾಷೆಯ ಸೊಗಡಿನಲ್ಲಿ ಹಾಡು, ಕವಿತೆ, ಭಕ್ತಿಗೀತೆ, ಕತೆ, ನಾಟಕ ಬರೆಯುವ ಯಶವಂತ ಬೋಳೂರು(70) ಕಳೆದ ಐವತ್ತು ವರ್ಷಗಳಿಂದ ತುಳು ಸಾಹಿತ್ಯ ಲೋಕದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹದಿನೈದಕ್ಕೂ ಹೆಚ್ಚು ನಾಟಕಗಳನ್ನು ಬರೆದಿದ್ದಾರೆ. ಮಂಗಳೂರಿನ ಬೋಳೂರಿನ ನಿವಾಸಿಯಾದ ಯಶವಂತ ಬೋಳೂರು ಅವರ 65ಕ್ಕೂ ಹೆಚ್ಚು ತುಳು ಹಾಡುಗಳು, ಸಿನಿಮಾ,ನಾಟಕ, ಆಲ್ಬಂಗಳ ಮೂಲಕ ಜನಪ್ರಿಯವಾಗಿದೆ. ಇವರ 25ಕ್ಕೂ ಹೆಚ್ಚು ತುಳು ಭಕ್ತಿಗೀತೆಗಳು ಕ್ಯಾಸೆಟ್, ಆಲ್ಬಂ ಮೂಲಕ ಜನಪ್ರಿಯಗೊಂಡಿದೆ.
ನವಭಾರತ, ಮುಂಗಾರು, ಜನವಾಹಿನಿ ಪತ್ರಿಕೆಯಲ್ಲಿ ಪತ್ರಕರ್ತರಾಗಿ, ಹಿರಿಯ ಸಂಪಾದಕರಾಗಿ ಸೇವೆ ಸಲ್ಲಿಸಿರುವ ಯಶವಂತ ಬೋಳೂರು ಅವರು ಮೀನುಗಾರರ ಬದುಕಿನ ಧ್ವನಿಯಾಗಿ ‘ಮೀನಾವಳಿ’ ಮಾಸ ಪತ್ರಿಕೆಯನ್ನು ದಶಕಗಳ ಕಾಲ ಮುನ್ನಡೆಸಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಗೆ 1998-2001 ನೇ ಅವಧಿಯಲ್ಲಿ ಸದಸ್ಯರಾಗಿಯೂ ಸೇವೆ ಸಲ್ಲಿಸಿರುತ್ತಾರೆ. ತುಳು ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ 2024ನೇ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ.
ಸರೋಜಿನಿ ಎಸ್ ಶೆಟ್ಟಿ (65 ವರ್ಷ)
(ತುಳು ನಾಟಕ / ಸಿನಿಮಾ ಕ್ಷೇತ್ರ)
ಕಳೆದ 45 ವರ್ಷಗಳಿಂದ ತುಳು ನಾಟಕ ಹಾಗೂ ತುಳು –ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸರೋಜಿನಿ ಎಸ್ ಶೆಟ್ಟಿ (65) ಅವರು ಮಂಗಳೂರಿನ ಶಕ್ತಿನಗರದ ನಿವಾಸಿ. 15ನೇ ವರ್ಷದಲ್ಲಿ ಕೆ.ಎನ್ ಟೇಲರ್ ಅವರ ‘ಕಂಡನೆ ಬುಡೆದಿ’ ನಾಟಕ ಮೂಲಕ ರಂಗ ಪ್ರವೇಶ ಮಾಡಿದ್ದರು. ಬಿ.ವಿ. ಕಾರಂತರ ನಿರ್ದೇಶನದ ‘ಚೋಮನ ದುಡಿ’ ಕನ್ನಡ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪರಿಚಯಿಸಲ್ಪಟ್ಟರು. 1976ರಲ್ಲಿ ತೆರೆಕಂಡ ಕೆ.ಎನ್.ಟೇಲರ್ ಅವರ ನಿರ್ದೇಶನದ ‘ತುಳುನಾಡ ಸಿರಿ’ ಸಿನಿಮಾದ ಮೂಲಕ ತುಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಮೊದಲ ತುಳು ಸಿನಿಮಾದ ಮೂಲಕವೇ ಅಪಾರ ಖ್ಯಾತಿಗೆ ಪಾತ್ರರಾಗಿದ್ದರು.
ಸರೋಜಿನಿ ಶೆಟ್ಟಿ ಅವರು, 18 ತುಳು ಸಿನಿಮಾ, 12 ಕನ್ನಡ ಸಿನಿಮಾ, 6 ಧಾರವಾಹಿಯಲ್ಲಿ ನಟಿಸಿದ್ದಾರೆ. 25ಕ್ಕೂ ಹೆಚ್ಚು
ತುಳು ನಾಟಕಗಳ ಎರಡೂವರೆ ಸಾವಿರಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಅಭಿನಯಿಸಿದ್ದಾರೆ. 2005-2008
ರಲ್ಲಿ ತುಳು ಅಕಾಡೆಮಿ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದರು. ತುಳು ನಾಟಕ ಹಾಗೂ ಸಿನಿಮಾ ಕ್ಷೇತ್ರದ ಸಾಧನೆಗಾಇ 2024ನೇ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ.
ಬಿ. ಕೆ ದೇವರಾವ್ (80 ವರ್ಷ)
(ತುಳು ಕೃಷಿ ಜಾನಪದ ಕ್ಷೇತ್ರ)
ಕೃಷಿ ಪರಂಪರೆಯ ತುಳುನಾಡಿನಲ್ಲಿ ಭತ್ತದ ಬೇಸಾಯದ ವಿಶಿಷ್ಟ ಕೃಷಿ ಸಾಧಕ ಬೆಳ್ತಂಗಡಿಯ ಬಂಗಾಡಿ ಕಿಲ್ಲೂರಿನ ಬಿ.ಕೆ ದೇವರಾವ್(80) ತನ್ನ ಐದೂವರೆ ಎಕರೆ ಕೃಷಿ ಭೂಮಿಯಲ್ಲಿ 170ಕ್ಕೂ ಹೆಚ್ಚು ಭತ್ತದ ತಳಿಗಳನ್ನು ಬೆಳೆದು ದೇಶದ ಗಮನ ಸೆಳೆದ ಬರಿಗಾಲಿನ ಕೃಷಿಕ. 80ಕ್ಕೂ ಹೆಚ್ಚು ‘ಕಾಡು ಮಾವಿನ’ ತಳಿಗಳು, 50ಕ್ಕೂ ಹೆಚ್ಚು ಹಲಸಿನ ತಳಿಗಳನ್ನು ಬೆಳೆಸಿದವರು. ಕೆಂಪಕ್ಕಿ, ಕಪ್ಪಕ್ಕಿ, ಔಷಧೀಯ ಗುಣದ ಅಕ್ಕಿ, ವಿದೇಶಿ ಅಕ್ಕಿ ತಳಿಗಳನ್ನು ಬೆಳೆದು ಕಾಪಾಡಿಕೊಂಡು ಬಂದವರು ಬಿ.ಕೆ.ದೇವರಾವ್ ಅವರು.
2021ರಲ್ಲಿ ರಾಷ್ಟ್ರೀಯ ಸಸ್ಯತಳಿ ಸಂರಕ್ಷಕ ರೈತ ಪ್ರಶಸ್ತಿ ಪುರಸ್ಕೃತರು. ತುಳುನಾಡಿನ ಕೃಷಿ ಜನಪದ ಕ್ಷೇತ್ರದ ಸಾಧನೆಗಾಗಿ 2024ನೇ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ