ತಾಯಿಯನ್ನು ಮನೆಯಲ್ಲಿ ಕೂಡಿ ಹಾಕಿ ಪ್ರಯಾಗ್‌ರಾಜ್‌ಗೆ ತೆರಳಿದ ಪುತ್ರ: ಹಸಿವು ತಾಳಲಾರದೆ ಪ್ಲಾಸ್ಟಿಕ್ ತಿಂದಳು



ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ಪ್ರಪಂಚದಾದ್ಯಂತದ ಭಕ್ತರು ಆಗಮಿಸುತ್ತಿರುವುದು, ಅಲ್ಲಿ ನಡೆಯುತ್ತಿರುವ ವಿಚಾರಗಳ ಬಗ್ಗೆ ಎಲ್ಲರಿಗೂ ತಿಳಿದುಬಂದಿದೆ. ಆದರೆ ಜಾರ್ಖಂಡ್‌ನ ರಾಮಗಢ ಜಿಲ್ಲೆಯ ವ್ಯಕ್ತಿಯೊಬ್ಬ ತನ್ನ ವೃದ್ಧ ತಾಯಿಯನ್ನು ಮನೆಯಲ್ಲಿ ಕೂಡಿ ಹಾಕಿ ಮನೆಗೆ ಬೀಗ ಜಡಿದು, ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಕುಂಭಮೇಳಕ್ಕೆ ಹೋಗಿರುವ ಘಟನೆ ಬೆಳಕಿಗೆ ಬಂದಿದೆ.

ಜಾರ್ಖಂಡ್‌ನ ರಾಮಗಢ ಜಿಲ್ಲೆಯ ನಿವಾಸಿ ಅಖಿಲೇಶ್ ಪ್ರಜಾಪತಿ ಫೆ.17ರಂದು ತನ್ನ ತಾಯಿ ಸಂಜು ದೇವಿ (65)ಯವರನ್ನು ಮನೆಯಲ್ಲಿ ಕೂಡಿ ಹಾಕಿ ಮನೆಗೆ ಬೀಗ ಹಾಕಿ ಜಡಿದು ಪ್ರಯಾಗ್‌ರಾಜ್‌ಗೆ ತೆರಳಿದ್ದ. ಈ ವೇಳೆ ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಕರೆದೊಯ್ದಿದ್ದ. ಮೂರು ದಿನಗಳ ಕಾಲ, ಸಂಜು ದೇವಿ ತನ್ನ ಪುತ್ರ ಮನೆಯಲ್ಲಿ ಇಟ್ಟಿದ್ದ ಅನ್ನ ಮತ್ತು ನೀರನ್ನು ಸೇವಿಸಿ ದಿನ ಕಳೆದಿದ್ದಾಳೆ. ಅದಾದ ಬಳಿಕ, ತಿನ್ನಲು ಏನೂ ಇಲ್ಲದ ಕಾರಣ ಅವಳಿಗೆ ಹಸಿವು ತಾಳಲಾಗಲಿಲ್ಲ. ಅವಳು ಪ್ಲಾಸ್ಟಿಕ್ ತಿನ್ನಲು ಸಹ ಪ್ರಯತ್ನಿಸಿದಳು. ಹಸಿವು ತಾಳಲಾರದೆ ಅವಳು ಕಿರುಚಲು ಪ್ರಾರಂಭಿಸಿದಳು. ಸ್ಥಳೀಯರು ಆಕೆಯ ಕಿರುಚಾಟ ಕೇಳಿ ಮಗಳು ಚಾಂದನಿ ದೇವಿಗೆ ಮಾಹಿತಿ ನೀಡಿದರು.

ಚಾಂದನಿ ದೇವಿ ಮನೆಗೆ ಆಗಮಿಸಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲಿಗೆ ಬಂದ ಪೊಲೀಸರು ಆಕೆಯನ್ನು ರಕ್ಷಿಸಿ, ಆಹಾರ ನೀಡಿ, ನಂತರ ತಕ್ಷಣವೇ ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ರಾಮಗಢ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಕೃಷ್ಣ ಕುಮಾರ್ ವೃದ್ಧೆಯ ಪುತ್ರ ಅಖಿಲೇಶ್ ಪ್ರಜಾಪತಿಯನ್ನು ದೂರವಾಣಿಯಲ್ಲಿ ಸಂಪರ್ಕಿಸಿದ್ದಾರೆ. ಆಗ ಆತ ತನ್ನ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾನೆ. ನಾವು ಮನೆಯಿಂದ ಹೊರಡುವ ಮೊದಲು, ತಮ್ಮ ತಾಯಿಗೆ ಆಹಾರ, ಅಕ್ಕಿ ಮತ್ತು ಇತರ ಅಗತ್ಯ ವಸ್ತುಗಳನ್ನು ಒದಗಿಸಿದ ನಂತರವೇ ಬಂದಿದ್ದ ಎಂದು ಅವರು ಹೇಳಿದರು. ತನ್ನ ತಾಯಿ ಕುಂಭಮೇಳಕ್ಕೆ ಹೋಗುವಂತೆ ಕೇಳಿಕೊಂಡಿದ್ದಳು, ಆದರೆ ಅವಳು ಅನಾರೋಗ್ಯದಿಂದ ಬಳಲುತ್ತಿದ್ದಳು, ಆದ್ದರಿಂದ ಅವಳನ್ನು ತನ್ನೊಂದಿಗೆ ಕರೆದುಕೊಂಡು ಹೋಗಲಿಲ್ಲ ಎಂದು ಅವನು ಹೇಳಿದನು.

ಕುಂಭಮೇಳಕ್ಕೆ ಹೊರಡುವ ಮೊದಲು ತನ್ನ ಸಹೋದರ ತಾಯಿಯನ್ನು ಮನೆಯಲ್ಲಿ ಬಂಧಿಸುವ ಬದಲು ತನಗೆ ಹೇಳಿದ್ದರೆ, ತಾನು ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೆ ಎಂದು ಸಂತ್ರಸ್ತೆ ಸಂಜು ದೇವಿಯ ಪುತ್ರಿ ಚಾಂದನಿ ದೇವಿ ಹೇಳಿದ್ದಾರೆ. ಈ ಬಗ್ಗೆ ಅಧಿಕೃತ ದೂರು ದಾಖಲಾಗಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇನ್ಸ್‌ಪೆಕ್ಟರ್ ಕೃಷ್ಣ ಕುಮಾರ್ ತಿಳಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu