ಮಂಗಳೂರಿನಿಂದ ದೆಹಲಿಗೆ ಪಾದಯಾತ್ರೆ ಮಾಡುತ್ತಿದ್ದ ಚಾರ್ಮಾಡಿಯ ಮೂಸಾ ಶರೀಫ್ ಸೇರಿದಂತೆ ಮತ್ತೊಬ್ಬ ಸೂರತ್‌ನಲ್ಲಿ ಟ್ರಕ್ ಡಿಕ್ಕಿಯಾಗಿ ಮೃತ್ಯು



ಮಂಗಳೂರು: ಅತ್ಯಾಚಾರಿಗಳಿಗೆ ತಕ್ಷಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ ಮಂಗಳೂರಿನಿಂದ ದೆಹಲಿಗೆ ಪಾದಯಾತ್ರೆ ಮಾಡುತ್ತಿದ್ದ ಐವರು ವಿಶ್ರಾಂತಿ ಪಡೆಯುತ್ತಿದ್ದ ಸಂದರ್ಭ ಓಮ್ನಿ ಕಾರಿಗೆ ಟ್ರಕ್ ಡಿಕ್ಕಿ ಹೊಡೆದು, ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ಗುಜರಾತ್‌ನ ಸೂರತ್‌ನಿಂದ 200 ಕಿ.ಮಿ. ದೂರದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.

ಮೃತಪಟ್ಟವರಲ್ಲಿ ಓರ್ವರು ದಕ್ಷಿಣ ಕನ್ನಡ ಜಿಲ್ಲೆಯ ಚಾರ್ಮಾಡಿಯ ಮೂಸಾ ಶರೀಫ್ ಎಂದು ಗುರುತಿಸಲಾಗಿದೆ. ಮತ್ತೊಬ್ಬರು ಲಿಂಗೇಗೌಡ ಎಂದು ತಿಳಿದು ಬಂದಿದೆ. 

ದಾರಿಮಧ್ಯೆ ರಸ್ತೆಬದಿಯಲ್ಲಿ ಕಾರಿನಲ್ಲಿದ್ದಾಗ ಟ್ರಕ್ ಢಿಕ್ಕಿಯಾಗಿ ಮೂಸಾ ಶರೀಫ್, ಲಿಂಗೇಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ರಭಸಕ್ಕೆ ಓಮ್ಮಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಡಿಕ್ಕಿ ಹೊಡೆದು ಟ್ರಕ್ ಪರಾರಿಯಾಗಿದೆ ಎಂದು ತಿಳಿದು ಬಂದಿದೆ.

ಕೆಆರ್‌ಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಸಾಮಾಜಿಕ ಹೋರಾಟಗಾರ ಮೂಸಾ ಶರೀಫ್ ಕರ್ನಾಟಕ ಸಾರಥಿಗಳ ಟ್ರೇಡ್ ಯೂನಿಯನ್ ಮುಖಂಡರಾಗಿದ್ದರು. ದೇಶದಲ್ಲಿ ನಡೆಯುತ್ತಿರುವ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳಿಗೆ ತ್ವರಿತ ಶಿಕ್ಷೆಗೆ ಆಗ್ರಹಿಸಿ ಪ್ರಧಾನ ಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಲು ಐವರು ಕಾಲ್ನಡಿಗೆ ಜಾಥಾ ಹೊರಟಿದ್ದರು.

ಮೂಸಾ ಶರೀಫ್‌ರೊಂದಿಗೆ ನೌಫಲ್ ಅಬ್ಬಾಸ್, ಹಂಝ ಮತ್ತು ಪ್ರವೀಣ್, ಲಿಂಗೇಗೌಡ ಅವರಿದ್ದರು ಎಂದು ತಿಳಿದು ಬಂದಿದೆ. ಪಾದಯಾತ್ರೆಯ ಕುರಿತು ಯೂಟ್ಯೂಬ್ ನಲ್ಲಿ ತಂಡವು ವೀಡಿಯೋ ಹಂಚಿಕೊಳ್ಳುತ್ತಿತ್ತು. ಬುಧವಾರ ಮಧ್ಯಾಹ್ನ ಕಾಲ್ನಡಿಗೆ ಜಾಥಾದ 55ನೇ ದಿನ ಎಂಬ ಶೀರ್ಷಿಕೆಯಲ್ಲಿ ಕೊನೆಯ ವೀಡಿಯೋ ಹಂಚಿಕೆಯಾಗಿದೆ. ಮೃತ ಮೂಸಾ ಶರೀಫ್ ಪತ್ನಿ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu