ಮಂಗಳೂರು: ಮುಸ್ಲಿಂ ಯುವಕನಿಂದ ಹಿಂದೂ ವಿದ್ಯಾರ್ಥಿನಿಯ ಅಪಹರಣ - ಲವ್‌ಜಿಹಾದ್ ಆರೋಪ, ಯುವತಿಯನ್ನು ಕರೆತಂದ ಪಾಂಡೇಶ್ವರ ಪೊಲೀಸರು


ಮಂಗಳೂರು: ನಗರದ ಶ್ರೀನಿವಾಸ್ ಕಾಲೇಜಿನಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದ ಕಾಸರಗೋಡು ಮೂಲದ ಹಿಂದೂ ವಿದ್ಯಾರ್ಥಿನಿಯನ್ನು ಮುಸ್ಲಿಂ ಯುವಕನೋರ್ವ ಅಪಹರಣ ಮಾಡಿದ್ದಾನೆ. ಈತ ಆಕೆಯನ್ನು ಮತಾಂತರಕ್ಕೆ ಯತ್ನಿಸುತ್ತಿದ್ದಾನೆಂದು ಆಕೆಯ ಪೋಷಕರು ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ. 

ಕಾಸರಗೋಡಿನ ವಿದ್ಯಾನಗರ ನಿವಾಸಿ ಮಹಮ್ಮದ್ ಅಶ್ಫಾಕ್ ಅಪಹರಣ ಮಾಡಿರುವ ಆರೋಪಿ. ಹಿಂದೂ ವಿದ್ಯಾರ್ಥಿನಿ ಉಳ್ಳಾಲದ ಸಂಬಂಧಿಕರ ಮನೆಯಲ್ಲಿದ್ದುಕೊಂಡು ಶ್ರೀನಿವಾಸ ಕಾಲೇಜಿಗೆ ಹೋಗುತ್ತಿದ್ದಳು. ಜೂನ್ 30ರಂದು ಯುವತಿಯನ್ನು ಉಳ್ಳಾಲದಿಂದ ಅಪಹರಿಸಿದ್ದಾಗಿ ದೂರಿನಲ್ಲಿ ಹೆತ್ತವರು ತಿಳಿಸಿದ್ದಾರೆ. ಆತ ಕೇರಳದ ಕೊಚ್ಚಿಗೆ ಕರೆದೊಯ್ದು ಮತಾಂತರ ಮಾಡುವ ಉದ್ದೇಶ ಹೊಂದಿದ್ದಾನೆ ಎಂದು ದೂರಿನಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಕರಣದ ಬೆನ್ನುಹತ್ತಿದ ಪಾಂಡೇಶ್ವರ ಪೊಲೀಸರು ಆರೋಪಿ ಮಹಮ್ಮದ್ ಅಶ್ಫಾಕ್ ಮತ್ತು ಯುವತಿಯನ್ನು ಕಾಸರಗೋಡಿನಲ್ಲಿ ಪತ್ತೆ ಹಚ್ಚಿದ್ದಾರೆ. ಅದೇ ಯುವಕನನ್ನು ಮದುವೆಯಾಗುತ್ತೇನೆಂದು ಹೇಳುತ್ತಿದ್ದ ಯುವತಿಯನ್ನು ಪೊಲೀಸರು ಮಂಗಳೂರಿಗೆ ಕರೆತಂದು ಮುಡಿಪುವಿನ ಪ್ರಜ್ಞಾ ಸಲಹಾ ಕೇಂದ್ರದಲ್ಲಿ ಇಟ್ಟಿದ್ದಾರೆ. ತನ್ನ ಸ್ವಇಚ್ಛೆಯಿಂದ ಹೋಗಿದ್ದಾಗಿ ಯುವತಿ ಹೇಳಿದ್ದರಿಂದ ಪೊಲೀಸರು ಆರೋಪಿ ಅಶ್ಫಾಕ್‌ನನ್ನು ಬಂಧಿಸದೆ ಬಿಟ್ಟಿದ್ದಾರೆ. 

ಆರೋಪಿ ಮಹಮ್ಮದ್ ಅಶ್ಫಾಕ್ ಕ್ರಿಮಿನಲ್ ಹಿನ್ನೆಲೆಯವನಾಗಿದ್ದು, ಆತನ ಮೇಲೆ ಕಾಸರಗೋಡು ನಗರದ ವಿವಿಧ ಠಾಣೆಗಳಲ್ಲಿ 15 ಪ್ರಕರಣಗಳು ದಾಖಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu