-->
1000938341
ವರನ ಗೆಳೆಯರಿಗೆ ಊಟದಲ್ಲಿ ಸಿಗದ ಸ್ವೀಟ್, ಮುರಿದುಬಿತ್ತು ಮದುವೆ!

ವರನ ಗೆಳೆಯರಿಗೆ ಊಟದಲ್ಲಿ ಸಿಗದ ಸ್ವೀಟ್, ಮುರಿದುಬಿತ್ತು ಮದುವೆ!





ಕೊಡಗು: ವರನ ಗೆಳೆಯರಿಗೆ ಊಟದಲ್ಲಿ ಸ್ವೀಟ್ ಸಿಗಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಕಲ್ಯಾಣ ಮಂಟಪದಲ್ಲೇ ಮದುವೆ ಮುರಿದುಬಿದ್ದ ಘಟನೆ ನಡೆದಿದೆ.


ಈ ಹಿನ್ನೆಲೆಯಲ್ಲಿ ವಧುವಿನ ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ ವಿಚಿತ್ರ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆಯಲ್ಲಿ ನಡೆದಿದೆ.


ಹಾನಗಲ್‌ನ ಯುವತಿ ಹಾಗೂ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಿವಿಲ್ ಇಂಜಿನೀಯರ್ ಆಗಿರುವ ತುಮಕೂರಿನ ಹರ್ಷಿತ್ ಎಂಬಾತನೊಂದಿಗೆ ವಿವಾಹ ನಿಶ್ಚಯವಾಗಿತ್ತು. ವಧು-ವರರಿಬ್ಬರು ಮ್ಯಾಟ್ರಿಮೊನಿಯಲ್ಲಿ ಪರಿಚಯವಾಗಿ, ಯುವತಿಯನ್ನು ಮದುವೆಯಾಗಲು ಹರ್ಷಿತ್ ಒಪ್ಪಿಕೊಂಡಿದ್ದ. ಅದರಂತೆಯೇ ಶನಿವಾರ ರಾತ್ರಿ ಸೋಮವಾರಪೇಟೆಯ ಜಾನಕಿ ಕನ್ವೆನ್ಷನ್ ಹಾಲ್‌ನಲ್ಲಿ ಮದುವೆ ಸಮಾರಂಭ ನಡೆದಿತ್ತು. ಭಾನುವಾರ ನಡೆಯಬೇಕಿದ್ದ ವಿವಾಹ. ಅದಕ್ಕೂ ಮೊದಲು ಶನಿವಾರ ರಾತ್ರಿ ಕಲ್ಯಾಣ ಮಂಟಪದಲ್ಲಿ ನಿಶ್ಚಿತಾರ್ಥ ಕಾರ್ಯ ನಡೆಸಲಾಗಿತ್ತು. 


ಅಂದು ಸಂಜೆ ನಾಲ್ಕು ಗಂಟೆಗೆ ಕಲ್ಯಾಣಮಂಟಪಕ್ಕೆ  ವರ ಮತ್ತು ಕುಟುಂಬಸ್ಥರು ಬಂದಿದ್ದರು. ಆದರೆ ವಧು ಮತ್ತು ಕುಟುಂಬದವರು ಕಲ್ಯಾಣಮಂಟಕ್ಕೆ 2 ಗಂಟೆ ತಡವಾಗಿ ಬಂದಿದ್ದರು. ಈ ವಿಚಾರಕ್ಕೆ ವರನ ಕಡೆಯವರಿಂದ ಗಲಾಟೆ ಶುರುವಾಗಿದೆ ಎಂದು ಆರೋಪಿಸಿಲಾಗಿದೆ. ಇದರ ನಡುವೆ ವರನ ಸ್ನೇಹಿತರು ಊಟ ಕುಳಿತಾಗ ಸಿಹಿ ತಿಂಡಿ ಖಾಲಿಯಾಗಿದೆ. ಸ್ನೇಹಿತರ ಸ್ವೀಟ್‌ ಸಿಕ್ಕಿಲ್ಲ ಎಂಬ ಕಾರಣಕ್ಕೆ ವಧುವಿನ ಕುಟುಂಬಸ್ಥರ ನಡುವೆ ವರ ಹರ್ಷಿತ್ ಗಲಾಟೆ ಮಾಡಿಕೊಂಡಿದ್ದಾನೆ. ಗಲಾಟೆ ವಿಕೋಪಕ್ಕೆ ತಿರುಗಿ ರವಿವಾರ ನಡೆಯಬೇಕಿದ್ದ ವಿವಾಹ ಮುರಿದುಬಿದ್ದಿದೆ.



ವಧುವಿನ ಕುಟುಂಬಸ್ಥರು ಎರಡು ಗಂಟೆ ತಡವಾಗಿ ಬಂದಿದ್ದು, ಸ್ನೇಹಿತರಿಗೆ ಸ್ವೀಟ್ ಸಿಗದಿದ್ದುದು ಈ ಎರಡು ವಿಚಾರಕ್ಕೆ ವರನಿಂದ ಗಲಾಟೆಯಾಗಿದೆ ಎಂದು ಅರೋಪಿಸಿ ವಧುವಿನ ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮಗಳ ವಿವಾಹ ನಿಂತು ನಮ್ಮ ಮರ್ಯಾದೆ ಹೋಗಿದೆ. ಜೊತೆಗೆ ಲಕ್ಷಾಂತರ ರೂ. ಖರ್ಚು ಮಾಡಿದ್ದೇವೆ. ಈ ಎಲ್ಲ ನಷ್ಟ ವರನ ಕುಟುಂಬದವರು ತುಂಬಿಕೊಡುವಂತೆ ವಧುವಿನ ಕುಟುಂಬಸ್ಥರು ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆದರೆ ವರನ ಕುಟುಂಬಕ್ಕೆ ರಾಜಕೀಯ ಹಿನ್ನೆಲೆ, ಪ್ರಭಾವ ಇರುವುದರಿಂದ ವಧು ಕುಟುಂಬಸ್ಥರು ಕೊಟ್ಟ ದೂರು ಸ್ವೀಕರಿಸದೆ ತಮಗೆ ಬೇಕಾದಂತೆ ಬರೆದುಕೊಂಡಿದ್ದಾರೆಂದು ಪೊಲೀಸರ ವಿರುದ್ಧ ವಧು ಆರೋಪಿಸಿದ್ದಾರೆ.

Ads on article

Advertise in articles 1

advertising articles 2

Advertise under the article