ಐಫೋನ್‌ ಕೊಡಿಸಿಲ್ಲವೆಂದು ಮನೆಯನ್ನೇ ಬಿಟ್ಡುಹೋದ ಬಾಲಕ : ಕಂಗಾಲಾದ ಪೋಷಕರು



ಬಾಗಲಕೋಟೆ: ಮನೆಯವರು ಐಫೋನ್ ಕೊಡಿಸಲಿಲ್ಲವೆಂದು ವಿದ್ಯಾರ್ಥಿಯೊಬ್ಬನು ಮನೆ ಬಿಟ್ಟು ಹೋಗಿರುವ ಘಟನೆ ಬಾಗಲಕೋಟೆ ತಾಲ್ಲೂಕಿನ ಗದ್ದನಕೇರಿ ಗ್ರಾಮದಲ್ಲಿ ನಡೆದಿದೆ.

ಗುರುನಾಥ ತಳವಾ‌ರ್ ಹಾಗೂ ಸುವರ್ಣ ದಂಪತಿಯ ಪುತ್ರ ಶ್ರವಣಕುಮಾ‌ರ್ ಮನೆಬಿಟ್ಟು ಹೋದ ಬಾಲಕ. ಸದ್ಯ ಒಂಬತ್ತನೇ ತರಗತಿ ಪಾಸ್ ಆಗಿ ಹತ್ತನೇ ತರಗತಿಗೆ ತೇರ್ಗಡೆಯಾಗಿದ್ದ ಶ್ರವಣ್ ಕುಮಾರ್ ಕಳೆದ ಏಪ್ರಿಲ್ 13ರಂದು ಮನೆಯಲ್ಲಿದ್ದ 800 ರೂ. ತೆಗೆದುಕೊಂಡು ಮನೆಯಿಂದ ಹೋಗಿದ್ದು, ಈವರೆಗೆ ಮನೆಗೆ ಮರಳಿಲ್ಲ ಎಂದು ತಿಳಿದು ಬಂದಿದೆ.

ಇನ್ನು ಮನೆಮನ ನಾಪತ್ತೆಯಾಗಿದ್ದರಿಂದ ಪೋಷಕರು ಕಂಗಾಲಾಗಿ ಕಣ್ಣೀರು ಹಾಕುತ್ತಿದ್ದಾರೆ. ಎಲ್ಲೇ ಇದ್ದರೂ ಮನೆಗೆ ಬಾ ಎಂದು ಪೋಷಕರು ಶ್ರವಣಕುಮಾರನ ಫೋಟೋ ಹಿಡಿದು ಗೋಗರೆಯುತ್ತಿದ್ದಾರೆ.‌ ಶ್ರವಣಕುಮಾ‌ರ್ ಕಳೆದ ಒಂದು ವರ್ಷದಿಂದ ತಂದೆಯ ಫೋನ್ ಬಳಸುತ್ತಿದ್ದ. ಕಳೆದ ಕೆಲ ದಿನಗಳ ಹಿಂದೆ ಆತನ ಪೋಷಕರು 15 ಸಾವಿರ ರೂಪಾಯಿ ಮೌಲ್ಯದ ಹೊಸ ಮೊಬೈಲ್ ಫೋನ್ ಕೊಡಿಸಿದ್ದರು. ಅದಾದರೂ ಹೊಸ ಐಫೋನ್ ಕೊಡಿಸುವಂತೆ ಪೋಷಕರ ಬಳಿ ಹಠ ಹಿಡಿದಿದ್ದ. ಸ್ವಲ್ಪ ದಿನ ತಡವಾಗುತ್ತದೆ ಎಂದು ಹೇಳಿದ್ದಕ್ಕೆ ಕೋಪಗೊಂಡು ಮನೆ ಬಿಟ್ಟು ಹೋಗಿದ್ದಾನೆ.

ಶ್ರವಣಕುಮಾರ್ ಮೊರಾರ್ಜಿ ವಸತಿ ಶಾಲೆಯಲ್ಲಿ ಓದುತ್ತಿದ್ದಾನೆ. ಒಂಬತ್ತನೇ ತರಗತಿಯಲ್ಲಿ 92 ಪ್ರತಿಶತ ಅಂಕ ಗಳಿಸಿದ್ದಾನೆ. ಪ್ರತಿಭಾವಂತ ವಿದ್ಯಾರ್ಥಿಯಾಗಿರುವ ಶ್ರವಣಕುಮಾರ ಮನೆ ಬಿಟ್ಟು ಹೋಗಿದ್ದು, ಕುಟುಂಬಸ್ಥರಿಗೆ ದಿಕ್ಕೇ ತೋಚದಂತಾಗಿದೆ. ಎಲ್ಲೇ ಇದ್ದರೂ ಮನೆಗೆ ಬಾ ನೀನು ಹೇಳಿದಂತೆ ಫೋನ್ ಕೊಡಿಸುತ್ತೇವೆ ಎನ್ನುತ್ತಿರುವ ಪೋಷಕರು ಈ ಬಗ್ಗೆ ಬಾಗಲಕೋಟೆ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu