ದಕ್ಷಿಣ ಕನ್ನಡ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಹೊಸ ಸಂಕಷ್ಟ

13 ಪರೀಕ್ಷಾ ಕೇಂದ್ರ ರದ್ದು , ಮೂರು ಹೊಸ ಪರೀಕ್ಷಾ ಕೇಂದ್ರ ಸ್ಥಾಪನೆ

ಪುತ್ತೂರು: ಎಸೆಸೆಲ್ಸಿ ಅಂತಿಮ ಪರೀಕ್ಷೆ ಮಾ. 25ರಿಂದ ಎ. 6ರ ತನಕ ನಡೆಯಲಿದ್ದು, ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 13 ಪರೀಕ್ಷಾ ಕೇಂದ್ರಗಳನ್ನು ರದ್ದುಪಡಿಸಿ ರುವುದರಿಂದ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳು ಸಂಕಷ್ಟ ಅನುಭವಿಸಲಿದ್ದಾರೆ
ಕೇಂದ್ರಗಳ ಧಾರಣ ಸಾಮರ್ಥ್ಯಕ್ಕೆ ತಕ್ಕಷ್ಟು ವಿದ್ಯಾರ್ಥಿ ಸಂಖ್ಯೆ ಇಲ್ಲದಿರುವ ಕಾರಣ ಈ ಕ್ರಮ ತೆಗೆದುಕೊಳ್ಳಲಾಗಿದೆ. ಆದರೆ ಇದರಿಂದ ಗ್ರಾಮಾಂತರ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಲಿದೆ ಎಂಬುದು ಪೋಷಕರ ದೂರು ಬರುತ್ತಿದೆ 
ರದ್ದು, ಹೊಸ ಕೇಂದ್ರ ಎಷ್ಟು?
ಜಿಲ್ಲೆಯಲ್ಲಿ 2023ರಲ್ಲಿ 98 ಪರೀಕ್ಷಾ ಕೇಂದ್ರಗಳಿದ್ದವು. ಈ ಬಾರಿ 88ಕ್ಕೆ ಇಳಿದಿದೆ. ಬಂಟ್ವಾಳ ತಾಲೂಕಿನಲ್ಲಿ 1. ಪುತ್ತೂರು 2, ಬೆಳ್ತಂಗಡಿ 1, ಮಂಗಳೂರು ಉತ್ತರ 2. ಮಂಗಳೂರು ದಕ್ಷಿಣದಲ್ಲಿ 7 ಕೇಂದ್ರಗಳನ್ನು ರದ್ದುಪಡಿಸಲಾಗಿದೆ. ಬಂಟ್ವಾಳ ತಾಲೂಕಿನಲ್ಲಿ 1. ಮಂಗಳೂರು ಉತ್ತರ 1. ಮಂಗಳೂರು ದಕ್ಷಿಣದಲ್ಲಿ 1 ಹೊಸ ಕೇಂದ್ರ ತೆರೆಯಲಾಗಿದೆ. ಒಟ್ಟು 13 ಕೇಂದ್ರ ರದ್ದುಪಡಿಸಿ 3 ಹೊಸ ಕೇಂದ್ರ ತೆರೆಯಲಾಗಿದೆ.
ಉಡುಪಿ ಯಥಾಸ್ಥಿತಿ : 
ಉಡುಪಿ ಜಿಲ್ಲೆಯಲ್ಲಿ 5 ವಲಯಗಳಿದ್ದು, 51 ಪರೀಕ್ಷಾ ಕೇಂದ್ರಗಳಿವೆ. ಬೈಂದೂರು-8, ಕುಂದಾಪುರ-8, ಕಾರ್ಕಳ-9, ಬ್ರಹ್ಮಾವರ-11, ಉಡುಪಿ-15 ಕೇಂದ್ರಗಳಿವೆ. ಕಳೆದ ಬಾರಿಗೆ ಹೋಲಿಸಿದರೆ ಯಾವುದೇ ಬದಲಾವಣೆ ಇಲ್ಲ ಎಂದು ಡಿಡಿಪಿಐ ಗಣಪತಿ ತಿಳಿಸಿದ್ದಾರೆ.
ರದ್ದು ಏಕೆ?
ಪರೀಕ್ಷಾ ಕೇಂದ್ರಗಳಲ್ಲಿ 250 ವಿದ್ಯಾರ್ಥಿ ಬಲ ಇರಬೇಕು ಅನ್ನುವುದು ಇಲಾಖೆಯ ನಿಯಮ. ಕನಿಷ್ಠ 180ರಿಂದ 200 ಆದರೂ ಬೇಕು. ಅದಕ್ಕಿಂತ ಕಡಿಮೆ ಸಂಖ್ಯೆ ಇರುವ ಕಾರಣ 13 ಕೇಂದ್ರಗಳ ರದ್ದತಿ ಅನಿವಾರ್ಯವಾಗಿತ್ತು ಅನ್ನುವುದು ಅಧಿಕಾರಿಗಳ ಹೇಳಿಕೆ, ರದ್ದಾದ ಕೇಂದ್ರಕ್ಕೆ ಒಳಪಟ್ಟಿರುವ ವಿದ್ಯಾರ್ಥಿಗಳಿಗೆ ಹತ್ತಿರದ ಕೇಂದ್ರವನ್ನು ನಿಗದಿಪಡಿಸಲಾಗಿದೆ. ಹಿಂದೆ ಆರೇಳು ಕಿ.ಮೀ. ದೂರದಲ್ಲಿ ಇದ್ದ ಪರೀಕ್ಷಾ ಕೇಂದ್ರ ರದ್ದಾದ ಪರಿಣಾಮ ಇನ್ನು ಹತ್ತಾರು ಕಿ.ಮೀ. ದೂರ ತೆರಳಬೇಕಾದ ಸ್ಥಿತಿ ಈಗ ಸೃಷ್ಟಿಯಾಗಿದೆ.
ಪುತ್ತೂರು ತಾಲೂಕಿನ ಗ್ರಾಮಾಂತರ ಪ್ರದೇಶದ ಕುಂಬ್ರ ಕೆಪಿಎಸ್‌ನಲ್ಲಿ ಇದ್ದ ಪರೀಕ್ಷಾ ಕೇಂದ್ರವನ್ನು ರದ್ದು ಪಡಿಸಲಾಗಿದೆ. ಪರಿಸರದ ವಿದ್ಯಾರ್ಥಿಗಳು ಪುತ್ತೂರಿನ ಪರೀಕ್ಷಾ ಕೇಂದ್ರಗಳಿಗೆ ಹೋಗಬೇಕಿದೆ. ಹೆಚ್ಚಿನ ಸಮಯವನ್ನು ಪ್ರಯಾಣದಲ್ಲೇ ಕಳೆಯುವ ಹಾಗಾಗಿದ್ದು, ಕುಂಬ್ರದಲ್ಲೇ ಕೇಂದ್ರ ಸ್ಥಾಪಿಸಬೇಕೆನ್ನುವುದು ನಮ್ಮೆಲ್ಲರ ವಿನಂತಿ.
- ಸಯ್ಯದ್ ಗಫೂರ್ ಸಾಹೇಬ್ ಪಾಲ್ತಾಡು ಕಾರ್ಯಾಧ್ಯಕ್ಷ, ಸರಕಾರಿ ಪ್ರೌಢಶಾಲೆ ಮಣಿಕ್ಕರ
ವಿದ್ಯಾರ್ಥಿಗಳ ಸಂಖ್ಯೆ ಆಧರಿಸಿ ರಾಜ್ಯಾದ್ಯಂತ ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು ತಗ್ಗಿಸಲಾಗಿದೆ. ದ.ಕ.ದಲ್ಲೂ 10 ಕೇಂದ್ರ ಕಡಿಮೆ ಆಗಿದೆ. ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಇಲಾಖೆ ಪೂರಕ ಕ್ರಮ ಕೈಗೊಂಡಿದೆ.
- ವೆಂಕಟೇಶ್‌ ಸುಬ್ರಾಯ ಪಟಾರ್, ಡಿಡಿಪಿಐ, ದ.ಕ. ಜಿಲ್ಲೆ

ರದ್ದಾದ ಕೇಂದ್ರಗಳು
ಬಂಟ್ವಾಳ: ಶ್ರೀಮತಿ ಲಕ್ಷ್ಮೀದೇವಿ ನರಸಿಂಹ ಪೈ ವಿದ್ಯಾಲಯ ಪಾಣೆಮಂಗಳೂರು
ಬೆಳ್ತಂಗಡಿ: ಕಣಿಯೂರು ಪದು¾ಜ ಸರಕಾರಿ ಪ್ರೌಢಶಾಲೆ
ಪುತ್ತೂರು: ಸುದಾನ ಪ್ರೌಢಶಾಲೆ ಪುತ್ತೂರು, ಕುಂಬ್ರ ಕೆಪಿಎಸ್ ಪ್ರೌಢಶಾಲೆ
ಮಂಗಳೂರು ಉತ್ತರ: ಹಂಪನಕಟ್ಟೆ ಮಿಲಾಗ್ರಿಸ್ ಪ.ಪೂ. ಕಾಲೇಜು, ಗಣಪತಿ ಆಂಗ್ಲಮಾಧ್ಯಮ ಶಾಲೆ
ಹಂಪನಕಟ್ಟೆ
ಮಂಗಳೂರು ದಕ್ಷಿಣ: ಸೈಂಟ್ ಆ್ಯಗ್ನಸ್ ಪ್ರೌಢಶಾಲೆ ಬೆಂದೂರುವೆಲ್, ಭಾರತ ಪ್ರೌಢ ಶಾಲೆ ಉಳ್ಳಾಲ, ಸರಕಾರಿ ಪ್ರೌಢಶಾಲೆ ದೇರಳಕಟ್ಟೆ, ಸ.ಪ.ಪೂ. ಕಾಲೇಜು ಮುತ್ತೂರು, ಸೇಕ್ರೆಡ್ ಹಾರ್ಡ್ ಪ್ರೌಢಶಾಲೆ ಕುಲಶೇಖರ, ಸೈಂಟ್ ಮೇರಿಸ್ ಪ್ರೌಢಶಾಲೆ ಪನ್ನೀರು, ವಿದ್ಯಾಜ್ಯೋತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಾಮಂಜೂರು

ಹೊಸ ಕೇಂದ್ರಗಳು
ಎಸ್‌ವಿಎಸ್‌ ಆಂಗ್ಲಮಾಧ್ಯಮ ಪ್ರೌಢಶಾಲೆ ಬಂಟ್ವಾಳ,
 ಸೈಂಟ್ ಅಲೋಶಿಯಸ್ ಉರ್ವ, 
ಸರಕಾರಿ ಪ್ರೌಢಶಾಲೆ ಗುರುಪುರ
BREAKING NEWS
Loading latest news...
Join our WhatsApp Channel Powered By : Online Pudu