ಪೂರಕ ಪರೀಕ್ಷೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರಿ: ಡಾ. ಎಂ. ಮೋಹನ ಆಳ್ವ

ಪೂರಕ ಪರೀಕ್ಷೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರಿ: ಡಾ. ಎಂ. ಮೋಹನ ಆಳ್ವ





ಪ್ರಸ್ತುತ ಶೈಕ್ಷಣಿಕ ಪಠ್ಯಕ್ರಮದಲ್ಲಿ SSLCಯಲ್ಲಿ 100% ಅಂಕ ಗಳಿಸುವುದು ಕಷ್ಟವೇನಲ್ಲ. ಆದರೆ ಅದರ ನಂತರ ಆಗಮಿಸಲಿರುವ ಪದವಿ ಪೂರ್ವ ಶಿಕ್ಷಣ ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಅತೀ ಅಮೂಲ್ಯವಾಗಿದೆ. NCR ಪಠ್ಯ ವಿಷಯದಲ್ಲಿ ಎಷ್ಟು ಅಂಕ ಪಡೆದರೂ ಮೆಡಿಕಲ್, ಡೆಂಟಲ್ ಅಥವಾ ಅನ್ಯ ರೀತಿಯ ಶಿಕ್ಷಣ ಪಡೆಯಲು ಸಾಧ್ಯವಾಗುವುದಿಲ್ಲ. ಮೆಡಿಕಲ್ ಸೀಟ್ ಪಡೆಯಬೇಕಾದರೆ NEETನಂತಹ ಪೂರಕ ಪರೀಕ್ಷೆಗೆ ಹಾಜರಾಗಬೇಕು. ಮಕ್ಕಳಿಗೆ ಕರ್ನಾಟಕ ಹೊರತುಪಡಿಸಿದರೆ ಬೇರೆ ರಾಜ್ಯಗಳಲ್ಲಿ ಒಂದನೇ ತರಗತಿಯಿಂದಲೇ ಪೂರಕ ಪರೀಕ್ಷೆ ತರಬೇತಿ ಆರಂಭವಾಗುತ್ತದೆ. ಇದು ಬೆಳೆಯುತ್ತ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗುತ್ತದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದ್ರೆ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು.


ಸುರತ್ಕಲ್ ಬಂಟರ ಸಂಘದಲ್ಲಿ SSLC ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.



ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮತ್ತು ಸುರತ್ಕಲ್‌ನ ಬಂಟರ ಸಂಘದ ಸಂಯುಕ್ತ ಆಶ್ರಯದಲ್ಲಿ "SSLC ನಂತರ ಮುಂದೇನು?" ಎಂಬ ವಿಷಯದ ಬಗ್ಗೆ ವಿಚಾರ ಮಂಥನ ಕಾರ್ಯಕ್ರಮ ಸುರತ್ಕಲ್‌ನ ಬಂಟರ ಭವನದಲ್ಲಿ ನಡೆಯಿತು.


ನಮ್ಮ ಇಡೀ ದೇಶದಲ್ಲಿ ಇರುವುದು ಅಂದಾಜು ಎರಡೂವರೆ ಲಕ್ಷ CA, CS ಆದವರು. ಆದರೆ 20 ಲಕ್ಷದಷ್ಟು CAಗಳು ದೇಶಕ್ಕೆ ಅಗತ್ಯವಿದ್ದಾರೆ. ಈ ಕೊರತೆಗೆ ಮುಖ್ಯ ಕಾರಣ ಮಕ್ಕಳು ಪೂರಕ ಪರೀಕ್ಷೆ ಕುರಿತು ಭಯ ಹೊಂದಿರುವುದು. ಇದನ್ನು ನಿವಾರಿಸಿದಲ್ಲಿ ಮಾತ್ರವೇ ಮಕ್ಕಳು ಸಾಧನೆ ಮಾಡಲು ಆಗುವುದು" ಎಂದು ಅವರು ಹೇಳಿದರು.


ಕರಾವಳಿಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಈ ನಿಟ್ಟಿನಲ್ಲಿ ಬಹುಮುಖ್ಯ ಸಾಧನೆ ಮಾಡಿದೆ. ಇನ್ನು ಮುಂದಿನ ಶೈಕ್ಷಣಿಕ ವರ್ಷಗಳಲ್ಲಿ ಪೂರಕ ಪರೀಕ್ಷೆ ಕೋಚಿಂಗ್ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಅಷ್ಟೇ ಅಲ್ಲದೆ, ಶಿಕ್ಷಣ ಸಂಸ್ಥೆಯ 15-20 ಕಿ.ಮೀ. ಸುತ್ತಮುತ್ತಲಿನ ಪ್ರದೇಶದ ಮಕ್ಕಳಿಗೆ ಶೈಕ್ಷಣಿಕ ಶುಲ್ಕದಲ್ಲಿ ಶೇ. 50% ರಷ್ಟು ರಿಯಾಯಿತಿ ಕೊಡಲಾಗುವುದು" ಎಂದು ಭರವಸೆ ನೀಡಿದರು.


"ಬೆಳಿಗ್ಗೆ 8-30ಕ್ಕೆ ಸರಿಯಾಗಿ ಪಿ.ಯು. ತರಗತಿಗಳು ಆರಂಭವಾಗಿ ಮಧ್ಯಾಹ್ನ ಕ್ಲಾಸ್ ಮುಗಿಸಿ ಊಟವನ್ನು ಅಲ್ಲಿಯೇ ಮುಗಿಸಿ 4.00 ಗಂಟೆಗೆ ಲಘು ಉಪಹಾರ ನಡೆಸಿ ಅಂದಿನ ಪಠ್ಯವನ್ನು ಅಲ್ಲಿಯೇ ಓದಿ ಮನನ ಮಾಡಿಕೊಂಡು 5:30ಕ್ಕೆ ಅಲ್ಲಿಂದ ಹೊರಡುವುದು. ಮಕ್ಕಳಿಗೆ ಏಕಾಗ್ರತೆ, ಗುರಿ ಮತ್ತು ಇಚ್ಚಾ ಶಕ್ತಿ ಇದ್ದರೆ ಮಾತ್ರ ಅವರು ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ. ನಮ್ಮ ಕಾರ್ಯಕ್ರಮ ಈ ರೀತಿಯಿದ್ದು ಮಕ್ಕಳು ಈ ಪಠ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು. ಒಂದು ವೇಳೆ, ವಿದ್ಯಾರ್ಥಿಗಳು ಆಳ್ವಾಸ್ ಹಾಸ್ಟೆಲ್‌ನಲ್ಲೇ ಉಳಿದುಕೊಂಡು ಶಿಕ್ಷಣ ಪಡೆಯುವುದಾದರೆ ಸ್ಥಳೀಯ ವಿದ್ಯಾರ್ಥಿಗಳಿಗೆ ಸಂಸ್ಥೆಯಿಂದ ಶೇ. 50%ರಷ್ಟು ರಿಯಾಯಿತಿ ಮಾಡಿಕೊಡಲಾಗುವುದು" ಎಂದು ಹೇಳಿದರು.



ಕಾರ್ಯಕ್ರಮದಲ್ಲಿ ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು, ಉದ್ಯಮಿ ಬಂಟರ ಸಂಘದ ನಿಕಟ ಪೂರ್ವ ಅಧ್ಯಕ್ಷ ಸುಧಾಕರ್ ಎಸ್. ಪೂಂಜ, ಮಾಜಿ ಅಧ್ಯಕ್ಷ ದೇವಾನಂದ ಶೆಟ್ಟಿ, ಉಪಾಧ್ಯಕ್ಷ ಕುಡುಂಬೂರು ಪುಷ್ಪರಾಜ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ, ಕೋಶಾಧಿಕಾರಿ ಅವಿನಾಶ್ ಶೆಟ್ಟಿ, ಶಿಕ್ಷಣ ಸಮಿತಿ ಸಂಚಾಲಕ ಲೊಕೇಶ್ ರೈ ಮೊದಲಾದವರು ಉಪಸ್ಥಿತರಿದ್ದರು. ಮಾಧವಿ ಚಡಗ ಕಾರ್ಯಕ್ರಮ ನಿರೂಪಿಸಿದರು. ಪ್ರಭಾತ್ ವಂದನಾರ್ಪಣೆಗೈದರು.



BREAKING NEWS
Loading latest news...
Join our WhatsApp Channel Powered By : Online Pudu