ಮಂಗಳೂರು: ವಿಎಚ್‌ಪಿಯಿಂದ ಪ್ರತಿಭಟನೆ: ಪ್ರತಿಭಟನಕಾರರನ್ನು ವಶಕ್ಕೆ ಪಡೆದ ಪೊಲೀಸರು


ಮಂಗಳೂರು: ನಗರದ ಸಂತ ಜೆರೋಸಾ ಶಾಲೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿ ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ ಹಾಗೂ ಇತರ ಮೇಲೆ  ದಾಖಲಿಸಿರುವ ಪ್ರಕರಣ ಹಿಂಪಡೆಯಬೇಕೆಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ , ಬಜರಂಗ ದಳ ಕಾರ್ಯಕರ್ತರು ನಗರದ ಮಿನಿ ವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿದರು. ಈ ವೇಳೆ ಕಾರ್ಯಕರ್ತರು ಪೊಲೀಸ್ ಕಮಿಷನರ್ ಗೆ ಮನವಿ ಕೊಡುವುದಾಗಿ ಹೇಳಿ 'ಜೈ ಶ್ರೀರಾಮ' ಘೋಷಣೆ ಕೂಗುತ್ತ ಮೆರವಣಿಗೆ ‌ಹೊರಟಾಗ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.

ಪ್ರತಿಭಟನಕಾರರು ಕ್ಲಾಕ್ ಟವರ್ ಮುಂಭಾಗದ ರಸ್ತೆಯಲ್ಲಿ ನಿಂತು ರಾಜ್ಯ ಸರ್ಕಾರ ವಿರುದ್ಧ ಧಿಕ್ಕಾರ ಕೂಗಿದರು.  ಪೊಲೀಸ್ ಕಮಿಷನರ್ ಕಚೇರಿಗೆ ಮೆರವಣಿಗೆ ತೆರಳಿ ಮನವಿ‌ ಸಲ್ಲಿಸಲು ಅವಕಾಶ ಕೊಡಬೇಕು. ಪೊಲೀಸರು ಅವಕಾಶ ನೀಡದಿದ್ದರೂ ನಾವು ಮೆರವಣಿಗೆಯಲ್ಲಿ ಹೋಗಿ ಮನವಿ ಕೊಟ್ಟೇ ಕೊಡುತ್ತೇವೆ' ಎಂದು ಶಿವಾನಂದ ಮೆಂಡನ್ ಹೇಳಿದಾಗ ಪ್ರತಿಭಟನಕಾರರು, ಪೊಲೀಸ್ ಕಮಿಷನರ್ ಕಚೇರಿಯತ್ತ ಧಾವಿಸಿ ದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರು ಹೋಗದಂತೆ ಬ್ಯಾರಿಕೇಡ್ ಹಾಕಿ ತಡೆದಿದ್ದಾರೆ. ಆದರೆ ಪ್ರತಿಭಟನಾಕಾರರು ಮುನ್ನುಗ್ಗಿ ಬ್ಯಾರಿಕೇಡ್ ತಳ್ಳಿ ಮುನ್ನುಗ್ಗಿದ್ದಾರೆ. ಕೆಲವರು ರಸ್ತೆಯ ಮೇಲೆ‌ ಮಲಗಿ ಜೈ ಶ್ರೀರಾಮ ಘೋಷಣೆ ಕೂಗಿದರು. ಈ ವೇಳೆ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ಪ್ರತಿಭಟನಕಾರರು ಮೆರವಣಿಗೆ ಪೂರ್ವ ಅನುಮತಿ ಪಡೆದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.