ಮಂಗಳೂರು: ಶಾಸಕರಾದ ಅಶೋಕ್ ರೈ - ವೇದವ್ಯಾಸ ಕಾಮತ್ ನಡುವೆ ಕೆಡಿಪಿ ಸಭೆಯಲ್ಲಿ ಡಯಾಲಿಸ್ ಅವ್ಯವಸ್ಥೆಗೆ 'ಕದನ ಕೋಲಾಹಲ'

ಮಂಗಳೂರು: ಕಾಂಗ್ರೆಸ್ ಶಾಸಕ ಅಶೋಕ್ ರೈ  ಹಾಗೂ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ನಡುವೆ ಜಿಲ್ಲಾಸ್ಪತ್ರೆಯ ಡಯಾಲಿಸಿಸ್ ಅವ್ಯವಸ್ಥೆ ವಿಚಾರಕ್ಕೆ ದ.ಕ.ಜಿಪಂ ನೇತ್ರಾವತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಜಟಾಪಟಿ ನಡೆದಿದೆ. ಶಾಸಕದ್ವಯರ ಮಾತಿನ ಚಕಮಕಿಗೆ ಇಡೀ ಕೆಡಿಪಿ ಸಭೆಯೇ ಮೂಕ ಸಾಕ್ಷಿಯಾಗಿದೆ.

ದ‌.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ನೇತೃತ್ವದಲ್ಲಿ ಕೆಡಿಪಿ ಸಭೆ ನಡೆದಿತ್ತು. ಈ ಸಭೆಯಲ್ಲಿ ಮಂಗಳೂರು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಡಯಾಲಿಸಿಸ್ ಅವ್ಯವಸ್ಥೆ ವಿಚಾರದಲ್ಲಿ ಜಟಾಪಟಿ ನಡೆದಿತ್ತು. ಮಾತಿಗೆ ಮಾತು ಬೆಳೆದು ಶಾಸಕ ವೇದವ್ಯಾಸ ಕಾಮತ್ ಅವರು, ಅಶೋಕ್ ರೈಯವರಿಗೆ 'ನೀವು ಶಾಸಕರಾಗಿ ಏಳು ತಿಂಗಳಾಗಿದ್ದು ಸರಿಯಾದ ಮಾಹಿತಿ ಇಟ್ಟು ಮಾತಾಡಿ' ಎಂದಿದ್ದಾರೆ‌. ಅದಕ್ಕೆ ಪ್ರತ್ಯುತ್ತರವಾಗಿ ಶಾಸಕ ಅಶೋಕ್ ರೈಯವರು "ನೀವು ಐದು ವರ್ಷಗಳಿಂದ ಶಾಸಕರಾಗಿದ್ದೀರಿ ಎಂದರೆ ಪಿಎಚ್ ಡಿ ಮಾಡಿದ್ದೀರಿ ಅಂಥ ಅಂದ್ಕೊಂಡ್ರಾ ಎಂದು ಕೇಳಿದ್ದಾರೆ.




ಕಳೆದ ಐದು ವರ್ಷ ಬಿಜೆಪಿ ಸರ್ಕಾರ ಇದ್ದಾಗಲೂ ಡಯಾಲಿಸಿಸ್ ವ್ಯವಸ್ಥೆ ಸರಿ ಇರಲಿಲ್ಲ. ಈಗ ಡಯಾಲಿಸಿಸ್ ಸರಿಯಾಗಿದೆ. ಸಮಸ್ಯೆ ಇದ್ದುದನ್ನು ಸರಿಪಡಿಸಿದ್ದೇವೆ ಎಂದು ಅಶೋಕ ರೈ ಹೇಳಿದ್ದಾರೆ. ಇದರಿಂದ ಸಿಟ್ಟುಗೊಂಡ ವೇದವ್ಯಾಸ ಕಾಮತ್ ಅವರು, ಕಳೆದ ಐದು ವರ್ಷಗಳ ಅವಧಿಯಲ್ಲಿ ಡಯಾಲಿಸಿಸ್ ವ್ಯವಸ್ಥೆ ಸರಿಯಾಗಿತ್ತು. ಈಗಿರುವ ಎಂಟು ಯಂತ್ರಗಳಲ್ಲಿ ಎಷ್ಟು ಸರಿಯಿದೆ. ನಮ್ಮ ಸರ್ಕಾರವಿದ್ದಾಗ 9 ಡಯಾಲಿಸಿಸ್ ಯಂತ್ರಗಳು ಚಾಲನೆಯಲ್ಲಿತ್ತು‌. ಈಗ ಮೂರು ಯಂತ್ರಗಳಷ್ಟೇ ಸರಿಯಿದ್ದು ರೋಗಿಗಳು ಪರದಾಡುವಂತಾಗಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ‌. ಈ ವೇಳೆ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಸಮಾಧಾನ ಮಾಡಿದರೂ ಇಬ್ಬರೂ ಶಾಸಕರು ನಡುವಿನ ಜಟಾಪಟಿ ಮುಂದುವರಿದಿತ್ತು.
BREAKING NEWS
Loading latest news...
Join our WhatsApp Channel Powered By : Online Pudu