ಮಂಗಳೂರು: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ರಿಗೆ ಗುದ್ದಿ ಪರಾರಿಯಾದ ಕಾರು - ಚಾಲಕ ವಶಕ್ಕೆ


ಮಂಗಳೂರು: ನಗರದ ಹೊರವಲಯದ ತೆಂಕ ಎಡಪದವಿನಲ್ಲಿ ಬಂಟ್ವಾಳ ಬಿಜೆಪಿ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಕಾರೊಂದು ಡಿಕ್ಕಿಯಾಗಿ ನಿಲ್ಲದೆ ಪರಾರಿಯಾದ ಘಟನೆ ನಡೆದಿದೆ. 

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ರವಿವಾರ ಮಧ್ಯಾಹ್ನ ಮಕರ ಸಂಕ್ರಮಣದ ನಿಮಿತ್ತ ಎಡಪದವು ಗೋಪಾಲಕೃಷ್ಣ ದೇವಸ್ಥಾನಕ್ಕೆ ತೆರಳಿದ್ದರು. ಪೂಜೆ ಮುಗಿಸಿ ವಾಪಾಸ್ ಆಗುತ್ತಿದ್ದ ಅವರು, ದೇವಸ್ಥಾನದ ಮುಂಭಾಗದಿಂದ ಕಾಲ್ನಡಿಗೆಯಲ್ಲಿ ಬರುತ್ತಿದ್ದ ರಸ್ತೆ ದಾಟುತ್ತಿದ್ದರು.‌ ಈ ವೇಳೆ ಮೂಡಬಿದಿರೆ ಕಡೆಯಿಂದ ಬರುತ್ತಿದ್ದ ಸ್ವಿಫ್ಟ್ ಕಾರೊಂದು ಶಾಸಕರಿಗೆ ಢಿಕ್ಕಿಯಾಗಿಯಾಗಿ ನಿಲ್ಲದೆ ಪರಾರಿಯಾಗಿದೆ.

ಕಾರು ಗುದ್ದಿದ ರಭಸಕ್ಕೆ ಶಾಸಕ ರಾಜೇಶ್ ನಾಯ್ಕ್ ಅವರು ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೇ ಶಾಸಕರು ಪಾರಾಗಿದ್ದಾರೆ. ಅವರ ಎರಡು ಮೊಣಕಾಲುಗಳಿಗೆ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಸದ್ಯ ಚಿಕಿತ್ಸೆ ಪಡೆದುಕೊಂಡ ಅವರು ಮನೆಗೆ ವಾಪಾಸ್ ಆಗಿದ್ದಾರೆ.

ಡಿಕ್ಕಿಯಾಗಿ ಪರಾರಿಯಾಗಿರುವ ಕಾರನ್ನು ಸ್ಥಳೀಯರು ಗುರುಪುರದಲ್ಲಿ ಹಿಡಿದು ಬಜ್ಪೆ ಪೊಲೀಸರಿಗೊಪ್ಪಿಸಿದ್ದಾರೆ. ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu