ಮಂಗಳೂರು: ರಾಮಮಂದಿರ ಉದ್ಘಾಟನೆ - ಧರ್ಮಸ್ಥಳ ಮೇಳದ ಯಕ್ಷಗಾನದಲ್ಲಿ 3ದಿನಗಳ ಕಾಲ ಶ್ರೀರಾಮಪಟ್ಟಾಭಿಷೇಕ ಮಹೋತ್ಸವ

ಮಂಗಳೂರು: ರಾಮಮಂದಿರದಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠೆಯ ಹಿನ್ನೆಲೆಯಲ್ಲಿ ಧರ್ಮಸ್ಥಳ ಮೇಳದ ಯಕ್ಷಗಾನ ಪ್ರಸಂಗದಲ್ಲಿ ನಿನ್ನೆಯಿಂದ ಮೂರು ದಿನಗಳ ಕಾಲ ಶ್ರೀರಾಮಪಟ್ಟಾಭಿಷೇಕ ಮಹೋತ್ಸವದ ವಿಶೇಷ ಸನ್ನಿವೇಶವನ್ನು ಪ್ರದರ್ಶಿಸಲಾಗುತ್ತಿದೆ.

ಈ ಬಾರಿ ಕಾರುಣ್ಯಾಂಬುಧಿ ಶ್ರೀರಾಮ ಎಂಬ ಪ್ರಸಂಗ ಮೇಳದಲ್ಲಿ ಪ್ರದರ್ಶನ ಕಾಣುತ್ತಿದೆ. ಆದರೆ ನಿನ್ನೆಯ ಪ್ರದರ್ಶನದಲ್ಲಿ ರಾವಣವಧೆಯ ಬಳಿಕ ಶ್ರೀರಾಮ ಪಟ್ಟಾಭಿಷೇಕದ ವಿಶೇಷ ಸನ್ನಿವೇಶವನ್ನು ಜೋಡಿಸಲು ಮೇಳದ ಭಾಗವತರು ರಾಮಕೃಷ್ಣ ಮಯ್ಯರು ಚಿಂತಿಸಿದ್ದರು. ಇದನ್ನು ಹೇಮಾವತಿ ವಿ. ಹೆಗ್ಗಡೆಯವರ ಗಮನಕ್ಕೆ ತಂದಾಗ ಅವರು ಒಪ್ಪಿ ಇದನ್ನು ಮೂರು ದಿನಗಳ ಕಾಲ ಮುಂದುವರಿಸುವಂತೆ ಸೂಚಿಸಿದ್ದರು. ಅದರಂತೆ ಮೂರು ದಿನಗಳ ಕಾಲ ಪ್ರದರ್ಶಿಸುವ ಕಾರುಣ್ಯಾಂಬುಧಿ ಶ್ರೀರಾಮ ಪ್ರಸಂಗದಲ್ಲಿ ಈ ಸನ್ನಿವೇಶ ಇರಲಿದೆ.

ಅಯೋಧ್ಯೆಯಲ್ಲಿ ಶ್ರೀರಾಮಪಟ್ಟಾಭಿಷೇಕದ ಸಂಭ್ರಮ. ಪಟ್ಟಾಭಿಷಿಕ್ತರಾದ ರಾಮ - ಸೀತೆಯರು, ಇವರ ಎರಡೂ ಕಡೆಗಳಲ್ಲಿ ಲಕ್ಷ್ಮಣ, ಭರತ, ಶತ್ರುಘ್ನಾದಿ, ವಿಭೀಷಣ, ಮಾತಾಲಿಗಳು ಸಾಲಂಕೃತರಾಗಿ ನಿಂತಿದ್ದಾರೆ. ಹನುಮ ವಿನಮ್ರ ಭಾವದಿಂದ ಪಾದಮೂಲದಲ್ಲಿದ್ದರೆ, ಕುಲಗುರು ವಶಿಷ್ಠರು ಹಾಗೂ ಮಂತ್ರಿ ಸುಮಂತ್ರರು ರಾಮ-ಸೀತೆಯರ ಎಡೂ ಬದಿ ಆಸೀನರಾಗಿದ್ದಾರೆ. ಸಖಿಯೊಬ್ಬಳು ರಾಮನಿಗೆ ಚಾಮರ ಬೀಸುತ್ತಿದ್ದಾಳೆ. ಅಯೋಧ್ಯೆಯ ಪುರಜನರು ಹೊರಕಾಣಿಕೆ ಸಹಿತ ಶ್ರೀರಾಮ ಘೋಷವನ್ನು ಮಾಡುತ್ತಾ ಮೆರವಣಿಗೆಯಲ್ಲಿ ಬರುತ್ತಾರೆ. ಬಳಿಕ ಪಟ್ಟಾಭಿಷಿಕ್ತ ರಾಮನ ಮುಂದೆ ವಿಶೇಷ ನೃತ್ಯೋತ್ಸವ ನಡೆಯುತ್ತದೆ. 

ಈ ಸನ್ನಿವೇಶಕ್ಕೆಂದೇ ವಿಶೇಷ ಪದ್ಯವನ್ನು ಜೋಡಣೆ ಮಾಡಲಾಗಿದೆ. ಮೊದಲ ಪದ್ಯ ಪುತ್ತಿಗೆ ರಾಮಕೃಷ್ಣ ಜೋಯಿಸರ ಹಳೆಯ ಪ್ರಸಂಗದಿಂದ ಆಯ್ದುಕೊಂಡರೆ, ಇನ್ನೊಂದು ಪದ್ಯವನ್ನು ಮೇಳದ ಮ್ಯಾನೇಜರ್ ಗಿರೀಶ್ ಹೆಗ್ಡೆಯವರು ಹೊಸದಾಗಿ ರಚಿಸಿದ್ದಾರೆ. ಈ ಸನ್ನಿವೇಶದ ಸಂದರ್ಭ ಮೇಳದ ಹೆಚ್ಚಿನ ಕಲಾವಿದರು ರಂಗಸ್ಥಳದಲ್ಲಿರುವುದು ವಿಶೇಷವಾಗಿದೆ.


BREAKING NEWS
Loading latest news...
Join our WhatsApp Channel Powered By : Online Pudu