ಗಂಟಲಿನಲ್ಲಿ ಚಕ್ಕುಲಿ ಸಿಲುಕಿ ದುರ್ಮರಣಕ್ಕೀಡಾದ ಒಂದೂವರೆ ವರ್ಷದ ಪುಟ್ಟ ಮಗು

ತಿರುವನಂತಪುರಂ: ಗಂಟಲಿನಲ್ಲಿ ಚಕ್ಕುಲಿ ಸಿಲುಕಿಕೊಂಡು ಒಂದೂವರೆ ವರ್ಷದ ಪುಟ್ಟ ಮಗುವೊಂದು ದುರ್ಮರಣಕ್ಕೀಡಾದ ಘಟನೆ ಕೇರಳದಲ್ಲಿ ನಡೆದಿದೆ.

ವೈಷ್ಣವ್ ಮೃತಪಟ್ಟ ಬಾಲಕ. ಮಂಕಂಕುಜಿ ಮಲಯಿಲ್ ಪಾಡೆತತ್ತಿಲ್ ನಿವಾಸಿ ವಿಜೀಶ್ ಮತ್ತು ದಿವ್ಯಾದಾಸ್ ಅವರ ಅವಳಿ ಮಕ್ಕಳಲ್ಲಿ ವೈಷ್ಣವ್ ಎಂಬ ಮಗು ಮತ್ತು ತಾಯಿ ದಿವ್ಯಾ ಮಾತ್ರ ಮನೆಯಲ್ಲಿದ್ದರು. ಮಗುವಿನ ತಂದೆ ವೃತ್ತಿಯಲ್ಲಿ ಕಾರ್ಪೆಂಟರ್ ಆಗಿದ್ದು, ಪಾಲಕ್ಕಾಡ್‌ಗೆ ಕೆಲಸಕ್ಕೆ ತೆರಳಿದ್ದರು.

ಬಾಲಕ ಚಕ್ಕುಲಿಯನು ತಿಂದುಕೊಂಡು ತನ್ನ ಪಾಡಿಗೆ ಆಟವಾಡುತ್ತಿದ್ದ. ಈ ವೇಳೆ ಏಕಾಏಕಿ ಚಕ್ಕುಲಿಯನ್ನು ನುಂಗಿಬಿಟ್ಟಿದ್ದಾನೆ. ಪರಿಣಾಮ ಚಕ್ಕುಲಿ ಗಂಟಲಲ್ಲಿ ಸಿಲುಕಿಕೊಂಡು ಆತನಿಗೆ ಉಸಿರಾಡಲು ಸಾಧ್ಯವಾಗುತ್ತಿರಲಿಲ್ಲ. ಕೂಡಲೇ ಆತನನ್ನು ಕೊಲ್ಲಂನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ವೈಷ್ಣವ್‌ನನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.