ಮನೆಗೆ ನುಗ್ಗಿ ಮಾರಕಾಸ್ತ್ರ ತೋರಿಸಿ ಲಕ್ಷಾಂತರ ರೂ. ಚಿನ್ನ ನಗದು ದರೋಡೆ: ಉಪ ಅರಣ್ಯಾಧಿಕಾರಿ, ರೌಡಿಶೀಟರ್ ಗಳು ಸೇರಿ 11 ಮಂದಿ ಅರೆಸ್ಟ್


ಬೆಂಗಳೂರು: ವ್ಯವಸ್ಥಿತವಾಗಿ ಸಂಚು ರೂಪಿಸಿ ಮನೆಯೊಂದಕ್ಕೆ ನುಗ್ಗಿ ಮನೆಮಂದಿ ಕೈ, ಕಾಲು ಕಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆಗೈದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿರುವ ಉಪ ಅರಣ್ಯಾಧಿಕಾರಿ, ಇಬ್ಬರು ರೌಡಿಶೀಟರ್ ಗಳು ಸೇರಿದಂತೆ ಒಟ್ಟು 11 ಮಂದಿ ಖತರ್ನಾಕ್ ಡಕಾಯಿತರ ಗ್ಯಾಂಗನ್ನು ಪೀಣ್ಯ ಠಾಣೆ ಪೊಲೀಸರು ಹೆಡೆಮುರಿಕಟ್ಟಿ ಬಂಧಿಸಿದ್ದಾರೆ.

ಹೆಚ್‌ಎಂಟಿ ಲೇಔಟ್‌ನಲ್ಲಿ ನಿವಾಸಿ ರೂಪೇಶ್ ಎಂಬವರ ಮನೆಯಲ್ಲಿ ಕೃತ್ಯ ನಡೆದಿತ್ತು. ಪೊಲೀಸರು ತುಮಕೂರಿನ ಸುರೇಶ್, ದಾವಣಗೆರೆ ಜಿಲ್ಲೆ ಚೆನ್ನಗಿರಿ ಅರಣ್ಯ ವಲಯದ ಉಪ ಅರಣ್ಯಾಧಿಕಾರಿ ಸುರೇಂದ್ರ, ಚಿತ್ರದುರ್ಗದ ಹಣ್ಣಿನ ವ್ಯಾಪಾರಿ ಶ್ರೀಧರ್, ನೆಲಮಂಗಲದಲ್ಲಿ ಫೈನಾನ್ಸಿಯರ್ ವಸಂತ್ ಕುಮಾರ್, ಅನಿಲ್ ಕುಮಾರ್, ಚಾಲಕ ನಾಗರಾಜ್, ಕೆ.ಜಿ.ಹಳ್ಳಿಯ ರೌಡಿಶೀಟರ್‌ಗಳಾದ ನವಾಜ್, ಶೇಕ್ ಶಹಬಾಜ್ ಸಹಚರರಾದ ರಾಹಿಲ್‌ಪಾಷಾ, ಉಸ್ಮಾನ್ ಖಾನ್ ಎಂಬುವರನ್ನು ಅರೆಸ್ಟ್ ಮಾಡಿದ್ದಾರೆ.

ಬಂಧಿತರಿಂದ 45.52 ಲಕ್ಷ ಬೆಲೆಬಾಳುವ 273 ಗ್ರಾಂ ಚಿನ್ನ, 370 ಗ್ರಾಂ ಬೆಳ್ಳಿ, 23 ಲಕ್ಷ ರೂ. ನಗದು, 13 ಮೊಬೈಲ್‌ ಫೋನ್ ಗಳು ಹಾಗೂ ಮಾರಕಾಸ್ತ್ರಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ. 

ಹೆಚ್‌ಎಂಟಿ ಲೇಔಟ್ ನಿವಾಸಿ ರೂಪೇಶ್ ತಂದೆ ಮನೋಹ‌ರ್ ಫ್ಯಾಕ್ಟರಿ ನಡೆಸುತ್ತಿದ್ದಾರೆ. ಇವರ ಬಳಿ ಲಾರಿ ಚಾಲಕನಾಗಿ ಆರೋಪಿ ನಾಗರಾಜ್ ಕೆಲಸ ಮಾಡುತ್ತಿದ್ದ. ಕಳೆದ ಡಿಸೆಂಬರ್‌ನಲ್ಲಿ ಈತ ಕೆಲಸ ತೊರೆದಿದ್ದ. ಆದರೆ ಮಾಲಕನ ಹಣದ ವ್ಯವಹಾರ ಬಗ್ಗೆ ಅರಿವಿದ್ದ ಈತ ಈ ವಿಷಯವನ್ನು ಸ್ನೇಹಿತ ಅನಿಲ್ ಕುಮಾರ್ ಬಳಿ ಹೇಳಿದ್ದ. ತಮ್ಮ ಮಾಲಕನ ಬಳಿ ಸಾಕಷ್ಟು ಹಣವಿದ್ದು, ನೋಟು ಎಣಿಸುವ ಯಂತ್ರಗಳಿವೆ ಎಂದು ಹೇಳಿದ್ದ. ಆರ್ಥಿಕ ಸಮಸ್ಯೆಯಲ್ಲಿದ್ದ ಅನಿಲ್, ಗೆಳೆಯನಾಗಿದ್ದ ಫೈನಾನ್ಸಿಯ‌ರ್ ಅಗಿ ನಷ್ಟಕ್ಕೆ ಒಳಗಾಗಿದ್ದ ವಸಂತ್ ಬಳಿ ಈ ವಿಚಾರ ತಿಳಿಸಿದ್ದ.

ಬಳಿಕ ಈ ಬಗ್ಗೆ ಶ್ರೀಧರ್ ಹಾಗೂ ಸುರೇಶ್ ಮುಖಾಂತರ ಉಪ ಅರಣ್ಯಾಧಿಕಾರಿ ಸುರೇಂದ್ರ ಬಳಿ ಮಾತನಾಡಿ ಡಕಾಯತಿ ಮಾಡಲು ಒಪ್ಪಿಸಿದ್ದರು. ಜೂಜಾಟದ ಚಟ ಹೊಂದಿದ್ದ ಸುರೇಂದ್ರನಿಗೆ ಹಣದ ಅವಶ್ಯಕತೆ ಇದ್ದಿದ್ದರಿಂದ ಕೃತ್ಯವೆಸಗಲು ಒಪ್ಪಿಕೊಂಡಿದ್ದ. ಸುರೇಶ್‌ಗೆ ಪರಿಚಯಸ್ಥರಾಗಿದ್ದ ಕೆ.ಜಿ.ಹಳ್ಳಿಯ ಐವರನ್ನು ಒಪ್ಪಿಸಿ ಡಕಾಯಿತಿಗೆ ಸಂಚು ರೂಪಿಸಿದ್ದರು.

ಉಪ ಅರಣ್ಯಾಧಿಕಾರಿಯಾಗಿದ್ದ ಸುರೇಂದ್ರನ ಸಮವಸ್ತ್ರ ಖಾಕಿಯಾಗಿದ್ದರಿಂದ ಪೊಲೀಸ್ ಸೋಗಿನಲ್ಲಿ ಹೋಗುವಂತೆ ಸಹಚರರು ಸೂಚಿಸಿದ್ದರು. ಇದರಂತೆ ಡಿ.4ರಂದು ಸಂಜೆ ಮನೆ ಬಳಿ ಡಕಾಯಿತರ ತಂಡ ದಾಂಗುಡಿ ಇಟ್ಟಿದೆ. ಮನೆಯಲ್ಲಿ ರೂಪೇಶ್ ಹಾಗೂ ಆತನ ತಾಯಿ ಇಬ್ಬರೆ ಇದ್ದರು. ಪೊಲೀಸ್‌ ಸೋಗಿನಲ್ಲಿ ಸುರೇಂದ್ರ ಬಾಗಿಲು ತಟ್ಟಿದ್ದಾರೆ. ಮನೆಯೊಳಗಿನ ಕಿಟಕಿಯಿಂದ ಇಣುಕಿ ನೋಡಿದ ರೂಪೇಶ್, ಪೊಲೀಸರೆಂದು ಭಾವಿಸಿ ಬಾಗಿಲು ತೆರೆದಿದ್ದಾರೆ. ತಾನು ಪೊಲೀಸ್ ಎಂದು ಪರಿಚಯಿಸಿಕೊಂಡು ಸುರೇಂದ್ರ ಮನೆಯೊಳಗೆ ಹೋಗಿದ್ದಾನೆ. ಈ ವೇಳೆ ಕ್ಷಣಮಾತ್ರದಲ್ಲಿ ಇನ್ನಿತರ ಆರೋಪಿಗಳು ಮನೆಗೆ ನುಗ್ಗಿದ್ದಾರೆ. ಲಾಂಗು- ಮಚ್ಚಿನಿಂದ ರೂಪೇಶ್ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಆತನ ತಾಯಿಗೂ ಬೆದರಿಸಿದ್ದಾರೆ. ಇಬ್ಬರನ್ನು ರೂಮ್‌ಗೆ ಕರೆದುಕೊಂಡು ಟೇಪ್‌ನಿಂದ ಸುತ್ತಿ ಕೂಡಿಹಾಕಿ ನಗದು, ಚಿನ್ನಾಭರಣ ಕದ್ದು ಪರಾರಿಯಾಗಿದ್ದರು.

ಪೊಲೀಸರು ಮನೆಯ ಸುತ್ತಮುತ್ತ ಅಳವಡಿಸಲಾಗಿದ್ದ ಸಿಸಿಟಿವಿ ವಶಕ್ಕೆ ಪಡೆದು ಪರಿಶೀಲಿಸಿದಾಗ ಆರೋಪಿಗಳು ಕಾರಿನಲ್ಲಿ ಪರಾರಿಯಾಗಿರುವುದು ತಿಳಿದು ಬಂದಿದೆ. ಅಲ್ಲದೆ ಕುಣಿಗಲ್ ಟೋಲ್ ದಾಟಿ ಹೋಗಿರುವುದು ತಿಳಿದುಬಂದಿತ್ತು. ಟವ‌ರ್ ಡಂಪ್ ಮೂಲಕ ಸುರೇಂದ್ರನ ನಂಬರ್ ಮಾತ್ರ ಆ್ಯಕ್ಟಿವ್ ಆಗಿತ್ತು. ಅಲ್ಲದೆ ಸಿಡಿಆರ್ (ಒಳಬರುವ ಕರೆ) ತೆಗದಾಗ ಶ್ರೀಧ‌ರ್, ವಸಂತ್‌ ಸಂಪರ್ಕದಲ್ಲಿರುವುದು ಗೊತ್ತಾಗಿದೆ. ಘಟನೆ ಬಳಿಕ ಚಿತ್ರದುರ್ಗ, ಕೊಡೈಕೆನಾಲ್‌ನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu