ಪುತ್ತೂರು: ಕಲ್ಲೇಗ ಟೈಗರ್ಸ್ ಹುಲಿವೇಷ ತಂಡದ ಸಾರಥಿ ಅಕ್ಷಯ್ ಕಲ್ಲೇಗ ಬರ್ಬರ ಹತ್ಯೆ - ಇಬ್ಬರು ಆರೋಪಿಗಳು ಶರಣು


ಪುತ್ತೂರು: ಇಲ್ಲಿನ ನೆಹರೂ ನಗರದಲ್ಲಿ ದುಷ್ಕರ್ಮಿಗಳ ತಂಡವೊಂದು ನಿನ್ನೆ ತಡರಾತ್ರಿ ಯುವಕನೊಬ್ಬನನ್ನು ಅಟ್ಟಾಡಿಸಿ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದೆ. 

ಪುತ್ತೂರಿನ ಪ್ರಖ್ಯಾತ ಹುಲಿವೇಷ ತಂಡ ಕಲ್ಲೇಗ ಟೈಗರ್ಸ್ ತಂಡದ ಸಾರಥ್ಯ ವಹಿಸಿರುವ ವಿವೇಕಾನಂದ ಕಾಲೇಜ್ ಬಳಿಯ ನಿವಾಸಿ ಅಕ್ಷಯ್ ಕಲ್ಲೇಗ(24) ಹತ್ಯೆಯಾದ ಯುವಕ.

ಅಕ್ಷಯ್ ಕಲ್ಲೇಗ ಕಳೆದ 6 ವರ್ಷಗಳಿಂದ ಕಲ್ಲೇಗ ಟೈಗರ್ಸ್ ಹುಲಿವೇಷ ತಂಡವನ್ನು ಮುನ್ನಡೆಸುತ್ತಿದ್ದರು. ಈ ತಂಡ ಪುತ್ತೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಭಾರೀ ಜನ ಪ್ರಿಯತೆಯನ್ನು ಗಳಿಸಿತ್ತು. ಪಿಲಿರಂಗ್ ಹಾಗೂ ಪಿಲಿಗೊಬ್ಬು ಎರಡು ಸ್ಪರ್ಧೆಯಲ್ಲಿ ಪ್ರಶಸ್ತಿ ಬಾಚಿಕೊಂಡಿತ್ತು. ಈ ಮೂಲಕ ಪುತ್ತೂರಿನಲ್ಲಿ ಹುಲಿ ಕುಣಿತ ತಂಡಕ್ಕೆ ಅಕ್ಷಯ್ ತಂಡ ಸ್ಟಾರ್ ಗಿರಿಯನ್ನು ತಂದುಕೊಟ್ಟಿತ್ತು.


ಸೋಮವಾರ ತಡರಾತ್ರಿ 11.30ರ ಸುಮಾರಿಗೆ ಅಕ್ಷಯ್ ಹತ್ಯೆ ನಡೆದಿತ್ತು. ಸಂಜೆ ವೇಳೆ ವಾಹನ ಅಪಘಾತವೊಂದರ ವಿಚಾರದಲ್ಲಿ ಅಕ್ಷಯ್ ಹಾಗೂ ಹತ್ಯೆ ನಡೆದಿಸಿರುವ ತಂಡದ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಇದರ ನಷ್ಟದ ಹಣವನ್ನು ಪಾವತಿಯ ಬಗ್ಗೆ ಮಾತನಾಡಲೆಂದು ರಾತ್ರಿ ಅಕ್ಷಯ್ ನನ್ನು ನೆಹರೂ ನಗರಕ್ಕೆ ಬರಲು ಹೇಳಿದ್ದರು. ನೆಹರೂ ನಗರದಿಂದ ವಿವೇಕಾನಂದ ಕಾಲೇಜಿಗೆ ತೆರಳುವ ರಸ್ತೆಯಲ್ಲಿ ಹೆದ್ದಾರಿಯ ತುಸು ದೂರದಲ್ಲಿರುವ ಕೆನಾರಾ ಬ್ಯಾಂಕ್ ಎಟಿಎಂ ಬಳಿ ಅಕ್ಷಯ್ ಮೇಲೆ ತಂಡ ದಾಳಿ ನಡೆಸಿದೆ. ಅಲ್ಲಿಂದ ಆತನನ್ನು ಅಟ್ಟಾಡಿಸಿಕೊಂಡು ಬಂದು ತಲವಾರು ದಾಳಿ ನಡೆಸಿದ್ದಾರೆ. ಅಟ್ಟಾಡಿಸಿಕೊಂಡು ಹೋಗಿ ಹತ್ಯೆ ನಡೆಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಮಾಣಿ ಮೈಸೂರು ಹೆದ್ದಾರಿಯ ಒಂದು ಬದಿಯಿಂದ ಇನ್ನೊಂದು ಬದಿಯವರೆಗೆ ರಕ್ತದ ಕಲೆಗಳಿವೆ.

ಅಕ್ಷಯ್ ಮೃತದೇಹ ಗಿಡಗಂಟಿಗಳಿಂದ ಅವೃತ್ತವಾದ ಹಡೀಲು ಬಿದ್ದ ಜಾಗದಲ್ಲಿ ಬಿದ್ದುಕೊಂಡಿತ್ತು. ಒಟ್ಟು ಮೂವರಿದ್ದ ತಂಡ ಕೃತ್ಯ ಎಸಗಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಈ ಪೈಕಿ ಇಬ್ಬರು ಕೃತ್ಯ ನಡೆದ ಕೆಲಗಂಟೆಗಳಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ. ಇವರನ್ನು ಮನೀಶ್ ಹಾಗೂ ಚೇತು ಎಂದು ಹೇಳಲಾಗುತ್ತಿದೆ. ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇನ್ನೊರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗುತ್ತಿದೆ.

BREAKING NEWS
Loading latest news...
Join our WhatsApp Channel Powered By : Online Pudu