ಯುವಜನತೆ ಹಾಗೂ ವಿದ್ಯಾರ್ಥಿಗಳ ಸಬಲೀಕರಣಕ್ಕೆ ಎನ್‌ಇಪಿ ಪೂರಕ - ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ


ಬೆಂಗಳೂರು: ಯುವಜನತೆ ಹಾಗೂ ವಿದ್ಯಾರ್ಥಿಗಳ ಸಬಲೀಕರಣಕ್ಕೆ ಎನ್‌ಇಪಿ 2020 ಪೂರಕ ಮತ್ತು ಸಮರ್ಪಕವಾಗಿದೆ ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಅಭಿಪ್ರಾಯ ಪಟ್ಟಿದ್ದಾರೆ.

ಬುಧವಾರ ನಗರದ ಅರಮನೆ ಮೈದಾನದಲ್ಲಿ ನಡೆದ 'ಬೆಂಗಳೂರು ಟೆಕ್ ಸಮ್ಮಿಟ್‌'ನಲ್ಲಿ ವಿಶೇಷ ಸಂವಾದದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಸಮರ್ಥರಾಗಲು ಎನ್‌ಇಪಿ ನೆರವಾಗಲಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಎನ್‌ಇಪಿ ಕರಡು ರಚನೆ ಅಧ್ಯಕ್ಷ ಕೆ.ಕಸ್ತೂರಿ ರಂಗನ್ ಅವರುಗಳು ಅಭಿನಂದನಾರ್ಹರು ಎಂದರು.

ವಿದ್ಯಾರ್ಥಿಗಳು ಸ್ವತಂತ್ರವಾಗಿ ಚಿಂತನೆ ಮಾಡುವುದು, ಕ್ರಿಯಾತ್ಮಕವಾಗಿ ಆಲಿಸುವುದು, ವಿಶ್ಲೇಷಣಾ ಸಾಮರ್ಥ್ಯ ಹೆಚ್ಚಿಸಿಕೊಳ್ಳುವುದು ಅತ್ಯಗತ್ಯ ಅಂತರಶಿಸ್ತೀಯ ವಿಷಯಗಳನ್ನು ಕಲಿಯುವುದು ಪ್ರಸಕ್ತ ಕಾಲಕ್ಕೆ ಮಹತ್ವದ್ದು. ಈ ನಿಟ್ಟಿನಲ್ಲಿ ಎನ್‌ಇಪಿ ಸಕಾರಾತ್ಮಕ ಹೆಜ್ಜೆಯಾಗಿದೆ. ನನ್ನ ವಿದ್ಯಾರ್ಥಿದೆಸೆ ಹಾಗೂ ಯೌವನದಲ್ಲಿ ನಾನು ಕೂಡಾ ಬೇರೆ ನಿಲುವುಗಳನ್ನು ಹೊಂದಿದ್ದೆ. ಆದರೆ, ಕಾಲಾನಂತರದಲ್ಲಿ ಇತರ ದೇಶಗಳ ಅಭಿವೃದ್ಧಿಯ ಪಥವನ್ನು ಗಮನಿಸಿದ ಬಳಿಕ ಸಹಾನುಕಂಪದಿಂದ ಕೂಡಿದ ಬಂಡವಾಳಶಾಹಿಯಾಗಿ ಬದಲಾದೆ. ಫ್ರಾನ್ಸ್ ನಲ್ಲಿ ನಾನು ಕಳೆದ ದಿನಗಳು ನನ್ನ ಚಿಂತನೆಯನ್ನು ಬದಲಾಯಿಸಿದೆ ಎಂದು ನಾರಾಯಣ ಮೂರ್ತಿ ತಮ್ಮ ಅನುಭವ ಹಂಚಿಕೊಂಡರು. 

ವಿಶ್ವದಲ್ಲಿ ಸಮಾಜವಾದ, ಎಡಪಂಥೀಯ ತತ್ವ ಚಿಂತನೆಗಳನ್ನು ನೆಚ್ಚಿಕೊಂಡಂತಹ ದೇಶಗಳು ಅಷ್ಟಾಗಿ ಉತ್ತಮ ಸ್ಥಿತಿಯಲ್ಲಿಲ್ಲ. ಸಮಾಜವಾದಿ ತತ್ವಗಳನ್ನು ನಂಬಿದ್ದ ಸೋವಿಯತ್ ಒಕ್ಕೂಟವೇ ಈಗ ಇಲ್ಲವಾಗಿದೆ. ಇಂತಹ ಸಂದರ್ಭದಲ್ಲಿ ಸಹಾನುಭೂತಿಯುಳ್ಳ ಬಂಡವಾಳಶಾಹಿ ವ್ಯವಸ್ಥೆ ನಮ್ಮ ದೇಶ ಅಭಿವೃದ್ಧಿಗೆ ಅಗತ್ಯವಿದೆ. ಬಂಡವಾಳ ಹೂಡಿಕೆದಾರರು ತಮ್ಮ ಕಂಪನಿಯಲ್ಲಿ ದುಡಿಯುವ ಪ್ರತಿಯೊಬ್ಬ ವ್ಯಕ್ತಿಯ ಹಿತವನ್ನು ಕಾಪಾಡಿಕೊಂಡು ಯಾವುದೇ ಕ್ರಮವನ್ನು ಕೈಗೊಳ್ಳಬೇಕು. ಹೀಗಾದಲ್ಲಿ ಮಾತ್ರ ಎಲ್ಲರ ಉದ್ಧಾರವಾಗುತ್ತದೆ ಎಂದರು.

'ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಅಭಿಮಾನಿಯಾದ ನಮ್ಮ ತಂದೆಯ ಪ್ರಭಾವದಿಂದ ನಾವೂ ಸಮಾಜವಾದ ಹಾಗೂ ಆರಂಭದಲ್ಲಿ ಎಡಪಂಥೀಯವಾದವನ್ನು ಅನುಸರಿಸುತ್ತಿದ್ದೆ. ಆ ಸಂದರ್ಭದಲ್ಲಿ ದೇಶದ ಪರಿಸ್ಥಿತಿಗೆ ಅದು ಅಗತ್ಯವಿತ್ತು. ಆದರೆ ನಾನು ಫ್ರಾನ್ಸ್‌ಗೆ ಹೋಗಿ ಒಂದಷ್ಟು ಕಾಲ ಇದ್ದ ನಂತರ, ನನ್ನ ಆಲೋಚನೆಯೇ ಬದಲಾದವು. ನಮ್ಮ ದೇಶದ ಅಭಿವೃದ್ಧಿಗೆ ಬಂಡವಾಳಶಾಹಿ ವ್ಯವಸ್ಥೆ ಅಗತ್ಯ ಆದರೆ ಅದು ಸಹಾನುಭೂತಿಯುಳ್ಳದ್ದಾಗಿರಬೇಕು ಎಂದು' ಹೇಳಿದರು.
BREAKING NEWS
Loading latest news...
Join our WhatsApp Channel Powered By : Online Pudu