-->
1000938341
ಪತ್ನಿಯನ್ನು ಹತ್ಯೆಮಾಡಿ ಹೂತಿಟ್ಟ ಪತಿರಾಯ - ಮೂರು ತಿಂಗಳ ಬಳಿಕ ನಾಯಿಯಿಂದ ಸಿಕ್ಕಿವಿದ್ದ ಆರೋಪಿ

ಪತ್ನಿಯನ್ನು ಹತ್ಯೆಮಾಡಿ ಹೂತಿಟ್ಟ ಪತಿರಾಯ - ಮೂರು ತಿಂಗಳ ಬಳಿಕ ನಾಯಿಯಿಂದ ಸಿಕ್ಕಿವಿದ್ದ ಆರೋಪಿ

ಹಾಸನ: ಕ್ಷುಲ್ಲಕ ಕಾರಣಕ್ಕೆ ದಂಪತಿ ನಡುವೆ ನಡೆದ ಜಗಳದಲ್ಲಿ ಪತಿಯ ಏಟಿಗೆ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದಳು. ಜೈಲು ಸೇರುವ ಭಯದಲ್ಲಿ ಮೃತದೇಹವನ್ನು ತೋಟದಲ್ಲಿ ಹೂತಿಟ್ಟು ಪತಿ ಊರು ಬಿಟ್ಟಿದ್ದನು. ಆದರೆ ಮೂರು ತಿಂಗಳ ಬಳಿಕ ನಾಯಿಗಳಿಂದ ಆರೋಪಿ ಪತಿರಾಯ ಪೊಲೀಸ್ ಕೈಗೆ ಸಿಕ್ಕಿಬಿದ್ದಿದ್ದಾನೆ.

ಈ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಾಗೆ ಗ್ರಾಮದಲ್ಲಿ ನಡೆದಿದೆ. ಶಾಂತಿವಾಸು (28) ಹತ್ಯೆಯಾದ ದುರ್ದೈವಿ. ಈಕೆಯ ಪತಿ ಪವನ್ ಕುಮಾರ್ ಆರೋಪಿ. ಮೂರು ತಿಂಗಳ ಹಿಂದೆ ಪವನ್ ಕುಮಾರ್ ಹಾಗೂ ಶಾಂತಿ ವಾಸುವಿನ ನಡುವೆ ಗಲಾಟೆ ನಡೆದಿತ್ತು. ಗಲಾಟೆ ವಿಕೋಪಕ್ಕೆ ತಿರುಗಿ ಪವನ್ ಕುಮಾರ್ ಪತ್ನಿ ಶಾಂತಿವಾಸು ಮೇಲೆ ಹಲ್ಲೆ ಮಾಡಿದ್ದ. ಗಂಭೀರ ಗಾಯಗೊಂಡಿದ್ದ ಶಾಂತಿ ಸ್ಥಳದಲ್ಲೇ ಅಸುನೀಗಿದ್ದಳು.

ಪತ್ನಿ ಮೃತಪಟ್ಟಿದ್ದಕ್ಕೆ ಹೆದರಿದ ಪವನ್ ಕುಮಾರ್ ಕೃತ್ಯ ಹೊರಗೆ ಬಂದರೆ ಜೈಲು ಸೇರುವುದು ಗ್ಯಾರಂಟಿ ಎಂದುಕೊಂಡಿದ್ದ. ಕೃತ್ಯದಿಂದ ಬಚಾವ್ ಆಗಬೇಕು ಎಂದುಕೊಂಡವನು ಮನೆಯ ಸಮೀಪದ ಹಳ್ಳದ ಪಕ್ಕದ ಗುಂಡಿಯಲ್ಲಿ ಮಣ್ಣು ತೆಗೆದು ಶವನ್ನು ಹೂತು ಹಾಕಿದ್ದ, ಬಳಿಕ ಮಕ್ಕಳೊಂದಿಗೆ ರಾತ್ರೋರಾತ್ರಿ ಬೆಂಗಳೂರಿಗೆ ಹೋಗಿದ್ದ.

ಮೂರು ತಿಂಗಳ ಕಾಲ ಆರಾಮಾಗಿದ್ದ ಆತ ನಾಯಿ ಕಾಟದಿಂದ ಸಿಕ್ಕಿಬಿದ್ದಿದ್ದಾನೆ. ನ.2ರಂದು ಏನೋ ವಾಸನೆ ಬಂದು ಬೀದಿ ನಾಯಿಗಳು ಮಣ್ಣಿನಿಂದ ಮೃತದೇಹದ ಮೂಳೆಯನ್ನು ತೆಗೆದು ಹೊರಗೆ ಎಳೆದಾಡಿದೆ. ಇದನ್ನು ತೋಟದ ಮಾಲಕರು ನೋಡಿದ್ದು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ನ.3ರ ಬೆಳಗ್ಗೆ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಹೊರತೆಗೆದಿದ್ದಾರೆ. ಬಟ್ಟೆಯ ಆಧಾರದಲ್ಲಿ ಹೆಣ್ಣಿನ ಮೃತದೇಹವೆಂದು ಪತ್ತೆ ಮಾಡಿದ ಪೊಲೀಸರು ಸ್ಥಳೀಯರಲ್ಲಿ ಈ ಬಗ್ಗೆ ವಿಚಾರಿಸಿದ್ದಾರೆ. ಆಗ ಪವನ್ ಕುಮಾರ್ ಬಗ್ಗೆ ತಿಳಿದು ಬಂದಿದೆ. ಸಕಲೇಶಪುರ ನಗರ ಠಾಣೆಯ ಪೊಲೀಸರು ಆರೋಪಿಯನ್ನು ಬೆಂಗಳೂರಿನಲ್ಲಿ ಬಂಧಿಸಿದ್ದು ತನಿಖೆ ಮುಂದುವರಿಸಿದ್ದಾರೆ.

Ads on article

Advertise in articles 1

advertising articles 2

Advertise under the article