ಬಂಟ್ವಾಳ: ಸಾಲ ಬಾಧೆಯಿಂದ ಕಂಗೆಟ್ಟ ಯುವಕ ನೇಣಿಗೆ ಶರಣು


ಬಂಟ್ವಾಳ: ಸಾಲದ ಬಾಧೆಯಿಂದ ಕಂಗೆಟ್ಟ ಯುವಕನೋರ್ವನು ಮನೆಯಲ್ಲಿ ನೇಣಿಗೆ ಶರಣಾಗಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಸಜೀಪದಲ್ಲಿ ನಡೆದಿದೆ.

ಸಜೀಪ ಪಡು ಗ್ರಾಮದ ತಲೆಮೊಗರು ನಿವಾಸಿ ಸನತ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡ ಯುವಕ.

ಸನತ್ ಕುಮಾರ್ ಮೀನು ವ್ಯಾಪಾರ ಮಾಡಿಕೊಂಡಿದ್ದರು. ಮೀನು ಮಾರಾಟಕ್ಕೆಂದು ಸಾಲ ಮಾಡಿ ಟೆಂಪೋ ರಿಕ್ಷಾವನ್ನು ಖರೀದಿಸಿದ್ದರು. ಆದರೆ ಮೀನು ವ್ಯಾಪಾರ ಸರಿಯಾಗಿ ಆಗದೆ ಹಾಕಿದ ಬಂಡವಾಳವನ್ನು ಕಳೆದುಕೊಂಡಿದ್ದರು. ಪರಿಣಾಮ ವಾಹನ ಖರೀದಿಗಾಗಿ ಮಾಡಿದ್ದ ಬ್ಯಾಂಕ್ ಸಾಲದ ಕಂತನ್ನು ಕಟ್ಟಲು ಸಾಧ್ಯವಾಗಿರಲಿಲ್ಲ ಎಂದು ಹೇಳಲಾಗಿದೆ.

ಆದ್ದರಿಂದ ಟೆಂಪೋವನ್ನೂ ಕೂಡ ಮಾರಾಟ ಮಾಡಿದ್ದರು. ಇದರೊಂದಿಗೆ ಕೋಳಿ ಅಂಕದಲ್ಲೂ ಹಣ ಕಳೆದುಕೊಂಡಿದ್ದರು. ಇದರಿಂದ ಮಾನಸಿಕವಾಗಿ ನೊಂದಿದ್ದ ಸನತ್ ಸಾಲದ ಬಾಧೆಯಿಂದ ಹೊರಬರಲು ಅಸಾಧ್ಯವಾಗದೆ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು‌.

ಹೊರಗಡೆ ಹೋಗಿದ್ದ ಮನೆಮಂದಿ ವಾಪಸ್ ಬಂದ ವೇಳೆ ರೂಮ್ ಬಾಗಿಲು ಹಾಕಿಕೊಂಡಿದ್ದನ್ನು ಗಮನಿಸಿ ಕರೆದಿದ್ದಾರೆ. ಆದರೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಆದ್ದರಿಂದ ಬಾಗಿಲು ಮುರಿದು ನೋಡಿದಾಗ ಪಕ್ಕಾಸಿಗೆ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ.

ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಎಸ್.ಐ.ಹರೀಶ್ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.