-->
1000938341
ಬಿಎಂಟಿಸಿ ಅಧಿಕಾರಿಗಳ ಹೆಸರಿನಲ್ಲಿ 16ಕೋಟಿ ರೂಪಾಯಿ ವಂಚನೆ : ಓರ್ವ ಅರೆಸ್ಟ್, ಏಳು ಮಂದಿ ವಿರುದ್ಧ ಎಫ್ಐಆರ್

ಬಿಎಂಟಿಸಿ ಅಧಿಕಾರಿಗಳ ಹೆಸರಿನಲ್ಲಿ 16ಕೋಟಿ ರೂಪಾಯಿ ವಂಚನೆ : ಓರ್ವ ಅರೆಸ್ಟ್, ಏಳು ಮಂದಿ ವಿರುದ್ಧ ಎಫ್ಐಆರ್

ಬೆಂಗಳೂರು: ಬಿಎಂಟಿಸಿ ಹಿರಿಯ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಸಹಿ ಮಾಡಿ 16 ಕೋಟಿ ರೂಪಾಯಿ ವಂಚಿಸಿದ್ದ ಆರೋಪದಲ್ಲಿ ಶಾಂತಿನಗರದ ಬಿಎಂಟಿಸಿ ಆಡಳಿತ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಯನ್ನು ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಬಂಧಿಸಲಾಗಿದೆ.

ಬಿಎಂಟಿಸಿಯ ಅಂದಿನ ಸಂಚಾರ ಮುಖ್ಯ ವ್ಯವಸ್ಥಾಪಕ ಶ್ರೀರಾಮ್ ಮುಲ್ಕಾನ್ ಎಂಬಾತನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ವಿಭಾಗೀಯ ಸಂಚಾರ ಅಧಿಕಾರಿ ಶ್ಯಾಮಲಾ. ಎಸ್. ಮದ್ದೋಡಿ, ಸಹಾಯಕ ಸಂಚಾರ ವ್ಯವಸ್ಥಾಪಕಿ ಮಮತಾ ಬಿ.ಕೆ, ಸಹಾಯಕ ಸಂಚಾರ ಅಧೀಕ್ಷಕರಾದ ಅನಿತಾ.ಟಿ, ಗುಣಶೀಲ, ಕಿರಿಯ ಸಹಾಯಕರಾದ ವೆಂಕಟೇಶ್.ಆರ್, ಪ್ರಕಾಶ್ ಕೊಪ್ಪಳ ಇವರೆಲ್ಲರೂ ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗಾಗಿ ಶೋಧಕಾರ್ಯ ನಡೆಸಲಾಗುತ್ತಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಟಿ.ಎಚ್ ತಿಳಿಸಿದ್ದಾರೆ.

2020-2023ರವರೆಗೆ ನಡೆದ ಅವ್ಯವಹಾರ ಇದಾಗಿದೆ ಎನ್ನಲಾಗಿದೆ. ಬಿಎಂಟಿಸಿ ಪ್ರಧಾನ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಏಳು ಮಂದಿ ಅಧಿಕಾರಿಗಳು ಬಿಎಂಟಿಸಿ ಭದ್ರತೆ ಹಾಗೂ ಜಾಗೃತದಳ ನಿರ್ದೇಶಕ ಅರುಣ್ ಹಾಗೂ ಎಂ.ಡಿ.ಯಾಗಿದ್ದ ಶಿಖಾ ಎಂಬವರ ಹೆಸರಿನಲ್ಲಿ ಸಹಿ ಇರುವ ಕಡತವನ್ನು ಕಲರ್ ಜೆರಾಕ್ಸ್ ಮಾಡಲಾಗಿದೆ. ಬಳಿಕ ನಕಲಿ ಸಹಿ ಹಾಕಿ ಸುಮಾರು 16 ಕೋಟಿ ರೂಪಾಯಿವರೆಗೂ ವಂಚಿಸಿರುವುದಾಗಿ ಆಪಾದಿಸಿ ಬಿಎಂಟಿಸಿಯ ವಿಚಕ್ಷಣಾ ದಳದ ಅಧಿಕಾರಿಗಳು ದೂರು ನೀಡಿದ್ದರು. ಈ ಸಂಬಂಧ 7 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಓರ್ವ ಆರೋಪಿಯನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಶೇಖರ್ ಟಿ.ಎಚ್ ಮಾಹಿತಿ ನೀಡಿದ್ದಾರೆ.

ಕೊರೋನ ಲಾಕ್‌ಡೌನ್ ವೇಳೆ ವಿನಾಯಿತಿ ನೀಡುವ ಸಂಬಂಧ ಪರವಾನಗಿ ಶುಲ್ಕ ಮನ್ನಾ ಮಾಡಬಹುದು ಎಂದು ಹೇಳಿ ಪತ್ರ ಬರೆದು ನಕಲಿ ಸಹಿ ಮಾಡಿ 21 ಲಕ್ಷ ರೂ. ವಂಚಿಸಿದ್ದರು. ಅಲ್ಲದೆ, ಬಿಎಂಟಿಸಿ ಹಿರಿಯ ಅಧಿಕಾರಿಗಳು ಕಡತಗಳಿಗೆ ಅನುಮೋದಿಸಿದ ಸಹಿಗಳನ್ನು ಕಲರ್ ಜೆರಾಕ್ಸ್ ಮಾಡಿ ಸಂಸ್ಥೆಗೆ 16 ಕೋಟಿ ರೂ.ವರೆಗೂ ವಂಚಿಸಿದ್ದರು. ಅವ್ಯವಹಾರ ಎಸಗಿರುವುದು ಗೊತ್ತಾಗುತ್ತಿದ್ದಂತೆ ಬಿಎಂಟಿಸಿ ಅಧಿಕಾರಿಗಳು ದೂರು ನೀಡಿದ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ವಂಚನೆ ಪ್ರಕರಣದ ಉಳಿದ ಆರು ಮಂದಿ ಆರೋಪಿಗಳು ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದು, ತೀವ್ರ ತನಿಖೆ ಕೈಗೊಂಡು ಶೋಧ ನಡೆಸಲಾಗುತ್ತಿದೆ ಎಂದು ಡಿಸಿಪಿ ಶೇಖ‌ ಟಿ.ಎಚ್ ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article