ಟೊಮ್ಯಾಟೊ ಬೆಳೆದು ಕೋಟ್ಯಾಧಿಪತಿಗಳಾದ ಸಹೋದರರು: 12 ಎಕರೆ ಭೂಮಿಯಲ್ಲಿ ಬಂಪರ್ ಬೆಲೆ
Monday, August 7, 2023
ಚಾಮರಾಜನಗರ: ಇಲ್ಲಿನ ಸಹೋದರಿಬ್ಬರು ಈಗ ಟೊಮ್ಯಾಟೊ ಬೆಳೆದು ಕೋಟ್ಯಧಿಪತಿಗಳಾಗಿದ್ದಾರೆ. ಚಾಮರಾಜನಗರ ತಾಲೂಕಿನ ಲಕ್ಷ್ಮೀಪುರದ ರಾಜೇಶ್ ಮತ್ತು ನಾಗೇಶ್ ಎಂಬ ಸಹೋದರರು ಸ್ವಂತ 2 ಎಕರೆ ಜತೆಗೆ, 10 ಎಕರೆ ಜಮೀನನ್ನು ಗುತ್ತಿಗೆಗೆ ಪಡೆದಿದ್ದರು. ಇದರಲ್ಲಿ ಸಂಪೂರ್ಣವಾಗಿ ಟೊಮ್ಯಾಟೊ ಬೆಳೆದು ಉತ್ತಮ ಆದಾಯ ಗಳಿಸಿದ್ದಾರೆ. ಇವರು ಮೊದಲಿಗೆ ಸ್ವಂತ ಜಮೀನಿನಲ್ಲಿ ಮಳೆ ಆಶ್ರಿತ ಬೆಳೆ ಬೆಳೆದು ಜೀವನ ಸಾಗಿಸುತ್ತಿತ್ತು. ಬಳಿಕ ಸಹೋದರರು ಎಸ್ಎಸ್ಎಲ್ಸಿ ಮುಗಿಸಿ, ಕಾಲೇಜಿಗೆ ಹೋಗದೆ ಕೃಷಿ ಮಾಡುವ ನಿರ್ಧಾರ ಕೈಗೊಂಡರು.
3-4 ವರ್ಷಗಳಿಂದ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಸಹೋದರರು ಟೊಮ್ಯಾಟೊ ಬೆಳೆಯನ್ನೇ ಬೆಳೆಯುತ್ತಿದ್ದರು. 2 ವರ್ಷಗಳ ಹಿಂದೆ ಟೊಮ್ಯಾಟೊ ದರ ಕಡಿಮೆ ಇದ್ದ ಕಾರಣ ಅಷ್ಟೇನೂ ಲಾಭ ದೊರಕಿರಲಿಲ್ಲ. ಕಳೆದ ಬಾರಿಯೂ ಖರ್ಚು ಸಿಕ್ಕಿತ್ತೇ ಹೊರತು ಲಾಭ ಕಂಡಿರಲಿಲ್ಲ. ಆದರೂ ಟೊಮ್ಯಾಟೊ ಬೆಳೆಯುವುದನ್ನು ನಿಲ್ಲಿಸದ ಸಹೋದರರು ಜೂನ್ನಲ್ಲಿ ಸಂಪೂರ್ಣ 12 ಎಕರೆ ಜಮೀನಿನಲ್ಲೂ ಸುಮಾರು 80 ಸಾವಿರ ಗಿಡಗಳನ್ನು ನಾಟಿ ಮಾಡಿದ್ದರು. ಬಿಸಿಲಿನ ಪರಿಣಾಮ 20-30 ಸಾವಿರ ಗಿಡಗಳು ಒಣಗಿದ್ದವು. ಉಳಿದ 50 ಸಾವಿರ ಗಿಡಗಳಿಂದ ಈಗಾಗಲೇ 2-3 ಕೊಯ್ಲು ಮಾಡಿದ್ದು, 50-60 ಟನ್ ಟೊಮ್ಯಾಟೊ ಲಭ್ಯವಾಗಿದೆ. ಇದರಿಂದ 40 ಲಕ್ಷ ರೂ. ಸಂಪಾದಿಸಿದ್ದಾರೆ. ಇನ್ನೂ 100-150 ಟನ್ ಟೊಮ್ಯಾಟೊ ಕೊಯ್ಲು ಸಿಗುವ ಸಾಧ್ಯತೆ ಇದ್ದು, ಒಟ್ಟಾರೆ ಸುಮಾರು 2 ಕೋಟಿ ರೂ. ಆದಾಯ ನಿರೀಕ್ಷೆ ಮಾಡಿದ್ದಾರೆ.
ಲಕ್ಷ್ಮೀಪುರ ಗ್ರಾಮದಲ್ಲಿ ಸ್ವಂತ ಮನೆಯಿದ್ದರೂ ಟೊಮ್ಯಾಟೊ ಕಾಯುವ ಸಲುವಾಗಿ ಸಹೋದರರು ಜಮೀನಿನಲ್ಲೇ ವಾಸ್ತವ್ಯ ಹೂಡುತ್ತಿದ್ದಾರೆ. 12 ಎಕರೆ ಪ್ರದೇಶವಾಗಿರುವುದರಿಂದ ಕೊಯ್ಲಿನ ಸಮಯದಲ್ಲಿ ಕಾವಲು ಕಾಯುವುದೇ ದೊಡ್ಡ ಸಮಸ್ಯೆಯಾಗುತ್ತದೆ. ಈ ಕಾರಣಕ್ಕೆ ಜಮೀನಿನಲ್ಲೇ ಉಳಿಯುವ ಸಹೋದರರು, ತುಂಬ ಕಷ್ಟಪಟ್ಟು ಬೆಳೆಯನ್ನು ರಕ್ಷಿಸಿಕೊಂಡಿದ್ದಾರೆ. ಬಿಸಿಲು, ಮಳೆ, ರೋಗದ ಸಮಸ್ಯೆಗಳನ್ನು ಹೊರತುಪಡಿಸಿಯೂ 50 ಸಾವಿರ ಗಿಡಗಳು ಉತ್ತಮ ರೀತಿಯಲ್ಲಿ ಫಲ ಕೊಟ್ಟಿವೆ. ಟೊಮ್ಯಾಟೊಗೆ ಪ್ರಸ್ತುತ ಇರುವ ಬೆಲೆ ಹೀಗೆಯೇ ಮುಂದುವರಿದರೆ ಮತ್ತಷ್ಟು ಲಾಭ ದೊರೆಯುವ ನಿರೀಕ್ಷೆ ಇದೆ.