ಬೆಳ್ತಂಗಡಿ: ರಾಷ್ಟ್ರಮಟ್ಟದ ವಾಲಿಬಾಲ್ ಕ್ರೀಡಾಪಟು ಹೃದಯಾಘಾತದಿಂದ ನಿಧನ


ಬೆಳ್ತಂಗಡಿ: ರಾಷ್ಟ್ರಮಟ್ಟದ ಪ್ರತಿಭಾನ್ವಿತ ವಾಲಿಬಾಲ್ ಆಟಗಾರ್ತಿ, ಬೆಳ್ತಂಗಡಿಯ ಉಜಿರೆ ಎಸ್.ಡಿ.ಎಂ. ಕಾಲೇಜಿನ ಹಳೆಯ ವಿದ್ಯಾರ್ಥಿನಿ ಸಾಲಿಹಾತ್ (24) ಹೃದಯಾಘಾತದಿಂದ ಇಂದು ಮೃತಪಟ್ಟಿದ್ದಾರೆ.

ಪಡಂಗಡಿ ಪೊಯ್ಕೆಗುಡ್ಡೆ ನಿವಾಸಿ ಆದಂ ಹಾಗೂ ಹವ್ವಮ್ಮ ದಂಪತಿಯ ಪುತ್ರಿ ಸಾಲಿಹಾತ್ ಒಂದು ವರ್ಷದ ಹಿಂದೆ ಚಿಕ್ಕಮಗಳೂರು ಮೂಲದವರನ್ನು ವಿವಾಹವಾಗಿದ್ದರು. ಸದ್ಯ ಚಿಕ್ಕಮಗಳೂರಿನ ಪತಿ ಮನೆಯಲ್ಲಿದ್ದ ಅವರನ್ನು ಹೇದ್ರೋಗದ ಪರಿಣಾಮ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬೆಳಗ್ಗೆ ಅವರು ಇಂದು ಮೃತಪಟ್ಟಿದ್ದಾರೆ. ವೈದ್ಯರು ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ದೃಢಪಡಿಸಿದ್ದಾರೆ.

ಹೈದರ್ ಪಡಂಗಡಿಯವರ ಗರಡಿಯಲ್ಲಿ ಪಳಗಿದ್ದ ಅವರು  ಮುಂಡಾಜೆ ಶಿಕ್ಷಣ ಸಂಸ್ಥೆಯಲ್ಲಿ ಪ್ರೌಢಶಾಲೆಗೆ ಸೇರಿದ ಬಳಿಕ ಅಲ್ಲಿ ದೈಹಿಕ ಶಿಕ್ಷಕ ಗುಣಪಾಲ್ ಎಂ.ಎಸ್.ರವರ ಗರಡಿಯಲ್ಲಿ ಪಳಗಿದರು. ಅಲ್ಲಿ ವಾಲಿಬಾಲ್ ಆಟದಲ್ಲಿ ಅತ್ಯಂತ ಉತ್ಕೃಷ್ಟ ಪ್ರದರ್ಶನ ನೀಡಿ ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿ ನಡೆದ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯ ತಂಡ ದ್ವಿತೀಯ ಸ್ಥಾನ ಗಳಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು.

ಮುಂದೆ ಪದವಿ ಪೂರ್ವ ಹಾಗೂ ಪದವಿ ಶಿಕ್ಷಣವನ್ನು ಎಸ್.ಡಿ.ಎಂ. ಕಾಲೇಜು ಉಜಿರೆಯಲ್ಲಿ ಮಾಡುತ್ತಿದ್ದಾಗಲೂ ಕರ್ನಾಟಕ ರಾಜ್ಯಕದ ಬಹುಬೇಡಿಕೆಯ ವಾಲಿಬಾಲ್ ಆಟಗಾರ್ತಿಯಾಗಿ ಜನಮನ್ನಣೆ ಗಳಿಸಿದ್ದರು. ರಾಷ್ಟ್ರದ ವಾಲಿಬಾಲ್ ನಲ್ಲಿ ಬೆಳ್ಳಿ ಪದಕ, ಸೀನಿಯರ್ ನ್ಯಾಶನಲ್ ದಕ್ಷಿಣ ವಲಯದಲ್ಲಿ ಚಿನ್ನದ ಪದಕ, ಜ್ಯೂನಿಯರ್ ನ್ಯಾಷನಲ್ ನಲ್ಲಿ ತೃತೀಯ ಸ್ಥಾನ ಗಳಿಸಿದ್ದರು. ಇದೀಗ ಅವರ ನಿಧನದಿಂದ ಕುಟುಂಬಸ್ಥರ ರೋದನ ಮುಗಿಲು ಮುಟ್ಟಿದೆ.
BREAKING NEWS
Loading latest news...
Join our WhatsApp Channel Powered By : Online Pudu