ಕಾಂಗ್ರೆಸ್ ನಿಂದ ಮಂಗಳೂರಿನಲ್ಲಿ 5 ನೇ ಗ್ಯಾರಂಟಿ ಘೋಷಣೆ- ಸರಕಾರ ಬಂದರೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ

ಮಂಗಳೂರು: ಈಗಾಗಲೇ ನಾಲ್ಕು ಘೋಷಣೆ ಮೂಲಕ ಚುನಾವಣಾ ಪ್ರಚಾರ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ಇಂದು ಐದನೇ ಗ್ಯಾರಂಟಿಯನ್ನು ಘೋಷಣೆ ಮಾಡಿ‌ ಮಹಿಳೆಯರ ಮತದತ್ತ ದೃಷ್ಟಿ ನೆಟ್ಟಿದೆ.

ಮಂಗಳೂರಿನ ಅಡ್ಯಾರ್ ಸಹ್ಯಾದ್ರಿ ಕಾಲೇಜಿನ ಮೈದಾನದಲ್ಲಿ  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಐದನೇ ಗ್ಯಾರಂಟಿಯನ್ನು ಘೋಷಣೆ ಮಾಡಿದರು.ಈ ಭರವಸೆಯ ಪ್ರಕಾರ ಕಾಂಗ್ರೆಸ್ ಸರಕಾರ ಬಂದರೆ  ಸರಕಾರದ ಅವಧಿಯಲ್ಲಿ ಮಹಿಳೆಯರಿಗೆ ಸರಕಾರಿ ಬಸ್ ನಲ್ಲಿ ಉಚಿತ ಪ್ರಯಾಣ ಮಾಡಬಹುದು. ಯಾವುದೇ ಟಿಕೆಟ್ ತೆಗೊಳ್ಳದೆ ಉಚಿತವಾಗಿ ಪ್ರಯಾಣಿಸಬಹುದು.

ಈಗಾಗಲೇ ನಾಲ್ಕು ಘೋಷಣೆಗಳನ್ನು ಕಾಂಗ್ರೆಸ್ ಮಾಡಿದೆ.  ತಿಂಗಳಿಗೆ ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್, ಪ್ರತಿ ಮನೆಯ ಮಹಿಳೆಯರಿಗೆ 2 ಸಾವಿರ ಮಾಸಾಸನ, ಬಡವರಿಗೆ 10 ಕೆ ಜಿ  ಉಚಿತ ಅಕ್ಕಿ ಮತ್ತು ನಿರುದ್ಯೋಗಿಗಳಿಗೆ 3 ಸಾವಿರ ಭತ್ಯೆ ಘೋಷಣೆ ಮಾಡಿತ್ತು. ಇಂದು ಐದನೇ ಘೋಷಣೆಯನ್ನು ಮಾಡಲಾಗಿದೆ.

ಈ ಐದು ಘೋಷಣೆಗಳನ್ನು ಸರಕಾರ ಬಂದ ಮೊದಲ ದಿನದ ಮೊದಲ ಕ್ಯಾಬಿನೆಟ್ ‌ನಲ್ಲಿ ಅನುಷ್ಠಾನ ಮಾಡಲಾಗುವುದು ಎಂದು ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.