![ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗೆ ಎಸ್ ಡಿಪಿಐ ಟಿಕೆಟ್: ಜೈಲಿನಿಂದಲೇ ಶಾಫಿ ಬೆಳ್ಳಾರೆ ಸ್ಪರ್ಧೆ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗೆ ಎಸ್ ಡಿಪಿಐ ಟಿಕೆಟ್: ಜೈಲಿನಿಂದಲೇ ಶಾಫಿ ಬೆಳ್ಳಾರೆ ಸ್ಪರ್ಧೆ](https://lh3.googleusercontent.com/-riffexGkAuk/Y-pc7CCclaI/AAAAAAAATHA/QpavR3bN8jcts9zC4AOPo8V4l5X0aEy_wCNcBGAsYHQ/s1600/1676303550132350-0.png)
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗೆ ಎಸ್ ಡಿಪಿಐ ಟಿಕೆಟ್: ಜೈಲಿನಿಂದಲೇ ಶಾಫಿ ಬೆಳ್ಳಾರೆ ಸ್ಪರ್ಧೆ
Monday, February 13, 2023
ಮಂಗಳೂರು: ಬಿಜೆಪಿ ಯುವ ಮೋರ್ಚ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿ ಶಾಫಿ ಬೆಳ್ಳಾರೆಯನ್ನು ಈ ಬಾರಿ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಪುತ್ತೂರು ಕ್ಷೇತ್ರದಿಂದ ಕಣಕ್ಕಿಳಿಸುವುದಾಗಿ ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಘೋಷಣೆ ಮಾಡಿದ್ದಾರೆ.
ಶಾಫಿ ಬೆಳ್ಳಾರೆಯನ್ನು ಬಿಜೆಪಿ ಕಾರ್ಯಕರ್ತ ಬೆಳ್ಳಾರೆ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದಲ್ಲಿ ಎನ್ಐಎ ಬಂಧಿಸಿದೆ. ಜೈಲಿನಲ್ಲಿರುವ ಆರೋಪಿಯನ್ನು ಶಾಸಕ ಸ್ಥಾನಕ್ಕೆ ಅಭ್ಯರ್ಥಿಯಾಗಿ ಘೋಷಣೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.
ಶಾಫಿ ಬೆಳ್ಳಾರೆ ವಿಧಾನ ಪರಿಷತ್ ಚುನಾವಣೆಯಲ್ಲೂ ಕರಾವಳಿಯಿಂದ ಸ್ಪರ್ಧಿಸಿದ್ದ. ಆದರೆ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಈತ ಭಾಗಿಯಾಗಿರುವುದು ತನಿಖೆಯಲ್ಲಿ ಬಯಲಾಗಿತ್ತು. ಆದ್ದರಿಂದ ಎನ್ಐಎಯಿಂದ ಈತ ಬಂಧನಕ್ಕೊಳಗಾಗಿದ್ದ. ಸದ್ಯ ಎನ್ಐಎ ಬಂಧನದಲ್ಲಿರುವ ಈತ ಜೈಲಿನಿಂದಲೇ ಚುನಾವಣೆ ಎದುರಿಸಲಿದ್ದಾನೆ.
ಪ್ರವೀಣ್ ನೆಟ್ಟಾರು ಹತ್ಯೆಯು ಹಿಂದೂಗಳನ್ನು ಬೆದರಿಸುವ, ಸಮಾಜದಲ್ಲಿ ಭೀತಿ ಮೂಡಿಸುವ ಕೃತ್ಯ ಎಂದು ಎನ್ಐಎ ಈ ಪ್ರಕರಣದಲ್ಲಿ ದೇಶದ್ರೋಹ ಕಾಯ್ದೆಯಡಿ ಪ್ರಕರಣ ದಾಖಲಿಸಿತ್ತು. ಆದ್ದರಿಂದ ಈ ಪ್ರಕರಣದ ಆರೋಪಿಗಳು ಕಾನೂನಿನ ಮುಂದೆ ದೇಶದ್ರೋಹಿಗಳೇ ಆಗಿರುತ್ತಾರೆ. ಆದರೂ ಎಸ್ ಡಿಪಿಐ ಯಾವುದೇ ಭೀತಿ, ಮುಜುಗರವೂ ಇಲ್ಲದೆ ಆರೋಪಿಯನ್ನೇ ಚುನಾವಣಾ ಕಣಕ್ಕಳಿಸಿರುವುದು ಹಿಂದೂ ಸಮಾಜದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಒಟ್ಟಿನಲ್ಲಿ ಇಂತಹ ಬೆಳವಣಿಗೆಗಳನ್ನು ಕಂಡಾಗ ಈ ಬಾರಿಯ ಚುನಾವಣೆ ರಾಜ್ಯದಲ್ಲಿ ಸಂಚಲನ ಮೂಡಿಸುವುದರಲ್ಲಿ ಯಾವುದೇ ಸಂಶಯವಿಲ್ಲ.