ಸದಭಿರುಚಿಯ ಸಿನಿಮಾ ಮೂಲಕ ಕನ್ನಡದ ಬೆಳ್ಳಿತೆರೆ ಬೆಳಗಿದ ನಿರ್ದೇಶಕ ಎಸ್.ಕೆ. ಭಗವಾನ್ ಇನ್ನಿಲ್ಲ


ಬೆಂಗಳೂರು: ಕಸ್ತೂರಿ ನಿವಾಸ, ಎರಡು ಕನಸು, ಚಂದನದ ಗೊಂಬೆಯಂತಹ ಸಿನಿಮಾಗಳನ್ನು ಕನ್ನಡದ ಹಿರಿತೆರೆಗೆ ನೀಡಿದ ಕನ್ನಡದ ಹಿರಿಯ ಚಲನಚಿತ್ರ ನಿರ್ದೇಶಕ ಎಸ್.ಕೆ.ಭಗವಾನ್(90) ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಇಹಲೋಕ ತ್ಯಜಿಸಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ರವೀಂದ್ರ ಕಲಾಕ್ಷೇತ್ರದಲ್ಲಿ ಮೃತದೇಹದ ಅಂತಿಮ ದರ್ಶನಕ್ಕೆ ಏರ್ಪಾಡು ಮಾಡಲಾಗುತ್ತಿದೆ. ಅತೀ ಹೆಚ್ಚು ಜನಪ್ರಿಯ, ಸದಭಿರುಚಿಯ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ ಕೀರ್ತಿ ದೊರೈ-ಭಗವಾನ್ ಜೋಡಿಯದ್ದು. ದೊರೈರಾಜ್ ಅವರು 2000ರಲ್ಲಿ ನಿಧನರಾಗಿದ್ದರು. ಈ ಜೋಡಿ ಜತೆಯಾಗಿ ಸುಮಾರು 27 ಸಿನಿಮಾಗಳನ್ನು ನಿರ್ದೇಶಿಸಿತ್ತು. ಡಾ.ರಾಜಕುಮಾರ್‌ ಕ್ಯಾಂಪ್ ನಲ್ಲಿ ಅತಿ ಹೆಚ್ಚು ಕಾಣಿಸಿಕೊಂಡಿದ್ದ ಈ ಜೋಡಿ, ಅಣ್ಣಾವ್ರಿಗೆ ಅತೀ ಹೆಚ್ಚು ಸಿನೆಮಾಗಳನ್ನ ನಿರ್ದೇಶನ ಮಾಡಿತ್ತು. ಈ ಪೈಕಿ ಬಹುತೇಕ ಸಿನೆಮಾಗಳು ಹಿಟ್ ಆಗಿವೆ.

1968ರಲ್ಲಿ ಜೇಡರ ಬಲೆ ಎಂಬ ಬಾಂಡ್ ಶೈಲಿಯ ಪತ್ತೇದಾರಿ ಸಿನಿಮಾದ ಮೂಲಕ ದೊರೈ - ಭಗವಾನ್ ಜೋಡಿ ಜತೆಯಾಯಿತು. ಆ ಬಳಿಕ ರಾಜ್ ಕುಮಾರ್ ಅವರಿಗೆ ಕಸ್ತೂರಿ ನಿವಾಸ, ಎರಡು ಕನಸು, ಗಿರಿಕನ್ಯೆ, ನಾನೊಬ್ಬ ಕಳ್ಳ, ಸಮಯದ ಗೊಂಬೆ, ಜೀವನ ಚೈತ್ರ, ವಸಂತ ಗೀತ,  ಹೊಸಬೆಳಕು, ಒಡಹುಟ್ಟಿದವರು, ಆಪರೇಷನ್ ಡೈಮಂಡ್ ರಾಕೆಟ್, ಮುಂತಾದ ಯಶಸ್ವಿ ಸಿನಿಮಾವನ್ನು ನೀಡಿತ್ತು. ಅಲ್ಲದೆ ಅನಂತ್ ನಾಗ್ - ಲಕ್ಷ್ಮೀ ಜೋಡಿಗಾಗಿ ಚಂದನದ ಗೊಂಬೆ, ಬೆಂಕಿಯ ಬಲೆ, ಬಿಡುಗಡೆಯ ಬೇಡಿ ಮುಂತಾದ ಸಿನಿಮಾಗಳಲ್ಲದೆ, ಬಯಲು ದಾರಿ, ಮುನಿಯನ ಮಾದರಿ, ನೀನು ನಕ್ಕರೆ ಹಾಲು ಸಕ್ಕರೆ, ಗಾಳಿಮಾತು ಹೀಗೆ ಸಾಕಷ್ಟು ಸಿನೆಮಾಗಳಿಗೆ ದೊರೈ - ಭಗವಾನ್ ಜೋಡಿಯಾಗಿ ನಿರ್ದೇಶನ ಮಾಡಿದ್ದಾರೆ. ಇವಲ್ಲಿ ಹೆಚ್ಚಿನವು ಕನ್ನಡದ ಕಾದಂಬರಿ ಆಧಾರಿತ ಸಿನಿಮಾಗಳು ಎಂಬುದು ಇನ್ನೊಂದು ಹೆಗ್ಗಳಿಕೆ. ಎಸ್.ಕೆ.ಭಗವಾನ್ ಒಬ್ಬರೇ ಮಾಂಗಲ್ಯ ಬಂಧನ(1993) ಎಂಬ ಸಿನಿಮಾವನ್ನು ನಿರ್ದೇಶನ ಮಾಡಿದ್ದರು.
BREAKING NEWS
Loading latest news...
Join our WhatsApp Channel Powered By : Online Pudu