Uppinangadi:- ಕಾಡಾನೆ ತಿವಿತಕ್ಕೊಳಗಾಗಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ 15 ಲಕ್ಷ ರೂ.ಪರಿಹಾರ ಮಂಜೂರು. 5 ಲಕ್ಷದ ಚೆಕ್ ಹಸ್ತಾಂತರ.

ಉಪ್ಪಿನಂಗಡಿ 

ಮೂರು ದಿನದ ಹಿಂದೆ ಕಾಡಾನೆ ದಾಳಿಯಲ್ಲಿ ಮೃತಪಟ್ಟ ಶಿರಾಡಿ ಗ್ರಾಮದ ಜನತಾ ಕಾಲೋನಿ ನಿವಾಸಿ ತಿಮ್ಮಪ್ಪರವರ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ ಮಂಜೂರಾದ 15 ಲಕ್ಷ ರೂಪಾಯಿ ಮೊತ್ತದಲ್ಲಿ 5 ಲಕ್ಷ ರೂ.,ಪರಿಹಾರ ಮೊತ್ತದ ಚೆಕ್ ಅನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.

ಅರಣ್ಯ ಇಲಾಖೆಯಿಂದ ಸುಮಾರು 15 ಲಕ್ಷ ರೂಪಾಯಿ ಪರಿಹಾರ ಧನವು ಮಂಜೂರುಗೊಂಡಿದ್ದು, ಈ ಪೈಕಿ 5 ಲಕ್ಷ ರೂ.ಮೊತ್ತದ ಚೆಕ್ ಅನ್ನು ಅರಣ್ಯ ಇಲಾಖೆ ಅಧಿಕಾರಿಗಳು ಅವರ ಕುಟುಂಬಕ್ಕೆ ಹಸ್ತಾಂತರ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಉಪ್ಪಿನಂಗಡಿ ವಲಯ ಅರಣ್ಯ ಅಧಿಕಾರಿ ಜಯಪ್ರಕಾಶ್ ಅವರು ಈಗಾಗಲೇ ಭದ್ರಾ ಟೈಗರ್ ಫೌಂಡಷನ್ ಚಿಕ್ಕಮಗಳೂರು ಇವರ ಸಹಕಾರದೊಂದಿಗೆ ಸುಮಾರು 5ಲಕ್ಷ ಮೊತ್ತದ ಚೆಕ್ ಅನ್ನು ಸಂತ್ರಸ್ತರಿಗೆ ಇಂದು ಹಸ್ತಾಂತರ ಮಾಡಿದ್ದೇವೆ. ಉಳಿದ 10ಲಕ್ಷ ಮೊತ್ತವನ್ನು ಕೆಲವು ದಾಖಲೆ ಪತ್ರಗಳು ಸರಿಯಾದ ಕೂಡಲೇ ಮೃತರ ಕುಟುಂಬಕ್ಕೆ ನೀಡಲಾಗುವುದು ಎಂದಿದ್ದಾರೆ.

ಅರಣ್ಯ ಇಲಾಖೆಯ ಡಿಸಿಎಫ್ ಡಾ.ದಿನೇಶ್‌ಕುಮಾರ್, ಎಸಿಎಫ್ ವಿ.ಪಿ.ಕಾರ್ಯಪ್ಪ, ಆರ್‌ಎಫ್ಒ ಜಯಪ್ರಕಾಶ್ ಕೆ.ಕೆ., ಡಿಆರ್‌ಎಫ್ಒ ಧೀರಜ್, ಫಾರೆಸ್ಟರ್ ಸುನಿಲ್ ನಾಯ್ಕ್‌ರವರು ಚೆಕ್ ಹಸ್ತಾಂತರಿಸಿದರು.

ತಿಮ್ಮಪ್ಪ ಹಾಗೂ ಅವರ ಮಗ ಕಾರ್ಯ ನಿಮಿತ್ತ ತೆರಳುತ್ತಿದ್ದ ವೇಳೆ ತಿಮ್ಮಪ್ಪರವರ ಮೇಲೆ ಕಾಡಾನೆ ದಾಳಿ ನಡೆಸಿತ್ತು.  ಈ ವೇಳೆ ತಿಮ್ಮಪ್ಪರವರ ಮಗ ತಂದೆಯ ರಕ್ಷಣೆಗೆಂದು ಮುಂದಾದ ವೇಳೆ ಅವರ ಮೇಲೆಯೂ ಕಾಡಾನೆ ದಾಳಿ ನಡೆಸಿತ್ತು. ಘಟನೆಯಲ್ಲಿ ಕಾಡಾನೆ ತಿವಿತದಿಂದ ಗಂಭೀರ ಗಾಯಗೊಂಡಿದ್ದ ತಿಮ್ಮಪ್ಪರವರು ಮೃತಪಟ್ಟು, ಮಗ ತೀವ್ರವಾಗಿ ಗಾಯಗೊಂಡಿದ್ದರು.
BREAKING NEWS
Loading latest news...
Join our WhatsApp Channel Powered By : Online Pudu