ಮಂಗಳೂರು: ಬಿಗ್ ಬಾಸ್ ಸೀಸನ್ -9 ವಿನ್ನರ್ ರೂಪೇಶ್ ಶೆಟ್ಟಿಯೊಂದಿಗೆ ಫೋಟೋ ಕ್ಲಿಕ್ಕಿಸಿ ಸಂಭ್ರಮಿಸಿದ ಕುಡ್ಲದ ಪೊಲೀಸರು


ಮಂಗಳೂರು: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ ಬಾಸ್ ಸೀಸನ್ -9ರ ವಿನ್ನರ್ ರೂಪೇಶ್ ಶೆಟ್ಟಿಯವರೊಂದಿಗೆ ಮಂಗಳೂರು ಪೊಲೀಸರು ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಪಟ್ಟರು.

ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಬಿಗ್ ಬಾಸ್ ಸೀಸನ್ -9ರ ವಿನ್ನರ್ ರೂಪೇಶ್ ಶೆಟ್ಟಿ ಆಗಮಿಸಿದ್ದರು. ಈ ವೇಳೆ ಮಂಗಳೂರು ಪೊಲೀಸ್ ಕಮಿಷನರ್ ಅವರನ್ನು ಆದರದಿಂದ ಬರಮಾಡಿಕೊಂಡರು. ಬಳಿಕ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಯ ಸಮಕ್ಷಮದಲ್ಲಿ ಸನ್ಮಾನಿಸಿದರು. ಬಳಿಕ ಮಂಗಳೂರು ನಗರ ಪೊಲೀಸರು, ಪೊಲೀಸ್ ಕಮಿಷನರ್ ಕಚೇರಿಯ ಸಿಬ್ಬಂದಿ, ಮಹಿಳಾ ಸಿಬ್ಬಂದಿ ರೂಪೇಶ್ ಶೆಟ್ಟಿಯವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಪಟ್ಟರು. 

ರೂಪೇಶ್ ಶೆಟ್ಟಿಯವರು ಈ ವೇಳೆ ಪೊಲೀಸ್ ಕಮಿಷನರ್ ಅವರು ತಮ್ಮನ್ನು ಕರೆಸಿಕೊಂಡು ಅಭಿನಂದಿಸಿರುವ ಬಗ್ಗೆ ಸಂತೋಷಪಟ್ಟರು. ಬಳಿಕ ಬಿಗ್ ಬಾಸ್ ಮನೆಯಲ್ಲಿ ತಾವೇ ರಚಿಸಿ ಟ್ಯೂನ್ ಮಾಡಿರುವ ಬುದ್ಧಿವಂತರು ಹಾಡನ್ನು ಹಾಡಿ ಪೊಲೀಸರನ್ನು ರಂಜಿಸಿದರು.

ಈ ವೇಳೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಅವರು ಮಾತನಾಡಿ, ಕನ್ನಡದಲ್ಲಿ ತ್ರಿವಳಿ "ಆರ್"ಗಳಾದ ರಕ್ಷಿತ್ ಶೆಟ್ಟಿ, ರಿಷಭ್ ಶೆಟ್ಟಿ, ರಾಜ್ ಬಿ. ಶೆಟ್ಟಿಯವರು ಕನ್ನಡ ಸಿನಿಮಾರಂಗದಲ್ಲಿ ತಮ್ಮದೇ ಆದ ಸ್ಥಾನವನ್ನು ಗಳಿಸಿಕೊಂಡಿದ್ದಾರೆ. ಇವರೊಂದಿಗೆ ರೂಪೇಶ್ ಶೆಟ್ಟಿ ಎಂಬ "ಆರ್" ಸೇರಿಕೊಂಡು ದ.ಕ.ಜಿಲ್ಲೆಯ, ತುಳುನಾಡಿನ, ಕರ್ನಾಟಕದ ಹೆಸರನ್ನು ದೇಶ - ವಿದೇಶಗಳಲ್ಲಿ ಪಸರಿಸಲಿ ಎಂದು ಹಾರೈಸಿದರು.

ಬಿಗ್ ಬಾಸ್ ಸೀಸನ್ -9 ವಿನ್ನರ್ ಆದ ಬಳಿಕ ಮೊದಲ ಬಾರಿಗೆ ರೂಪೇಶ್ ಶೆಟ್ಟಿಯವರು ನಿನ್ನೆ ಮಂಗಳೂರಿಗೆ ಆಗಮಿಸಿದ್ದರು. ಈ ವೇಳೆ ಮಂಗಳೂರಿನ ಅವರ ಅಭಿಮಾನಿಗಳಿಂದ ಅದ್ದೂರಿ ಸ್ವಾಗತ ದೊರಕಿತ್ತು. ಆ ಬಳಿಕ ತಾವು ಕಟ್ಟಿಕೊಂಡ ಹರಕೆಯಂತೆ ಕುತ್ತಾರುವಿನ ಕೊರಗಜ್ಜನ ಕಟ್ಟೆಗೆ ತೆರಳಿ ಕೊರಗಜ್ಜನ ದರ್ಶನ ಪಡೆದರು.
BREAKING NEWS
Loading latest news...
Join our WhatsApp Channel Powered By : Online Pudu