ರಾಮಾಯಣ ದರ್ಶನಂ ಕವಿ ಮನಸ್ಸಿನ ತಪಸ್ಸಿನ ಫಲ: ಡಾ. ಶಿವರಾಜ ಶಾಸ್ತ್ರಿ ಹೇರೂರು

 

 


ಮೂಡುಬಿದಿರೆ: ನಮ್ಮ ಕವಿಗಳು ಮಾನವೀಯತೆಯೆಂಬ ಭಕ್ತಿಯ ಬೀಜವನ್ನು ತಮ್ಮ ಕೃತಿಗಳ ಮೂಲಕ ಬಿತ್ತಿದ್ದಾರೆ ಎಂದು ಕಲಬುರಗಿಯ ಶರಣ ಬಸವೇಶ್ವರ ಕಲಾ ಮಹಾವಿದ್ಯಾಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಶಿವರಾಜ ಶಾಸ್ತ್ರೀ ಹೇರೂರು ಅಭಿಪ್ರಾಯಪಟ್ಟರು.




 ಅವರು ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆದ ‘ಕನ್ನಡ ಕೃತಿಗಳ ಓದು -ವಿಮರ್ಶೆ’ ಅವಲೋಕನ ಕಾರ್ಯಕ್ರಮದಲ್ಲಿ ಮಾತನಾಡಿ, ಆ ನಾಡು ಈ ನಾಡು ಎಂಬುವುದು ಕೇವಲ ನಾಮಮಾತ್ರ. ನಾವೆಲ್ಲರೂ ಒಂದೇ ನಾಡಿನವರು ಎಂದು ಅಭಿಪ್ರಾಯಪಟ್ಟರು. ಕುವೆಂಪುರವರ ರಾಮಾಯಣ ದರ್ಶನಂ ನಾವೆಲ್ಲರೂ ಓದಬೇಕಾದ ಕೃತಿ ಎಂದ ಅವರು,  ಈ ಮಹಾಕಾವ್ಯದ ಮೂಲಕ ಕತೆ ಹೇಳುವುದು ಕವಿಯ ಉದ್ದೇಶವಾಗಿರಲಿಲ್ಲ. ಅದೊಂದು ಆತ್ಮಶೋಧ. ನಗಣ್ಯ ಪಾತ್ರಗಳಿಗೂ  ಅಲ್ಲಿ ಮಹತ್ವ ಇದೆ. ಇದೊಂದು ಜೀವನ ದರ್ಶನ. ಕವಿ ಮನಸ್ಸಿನ ತಪಸ್ಸಿನ ಫಲ ಎಂದರು. 




ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಲಬುರಗಿಯ ಸರಕಾರಿ (ಸ್ವಾಯತ್ತ) ಮಹಾವಿದ್ಯಾಲಯದ ಸ್ನಾತಕೋತ್ತರ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ. ಕಲ್ಯಾಣರಾವ ಜಿ. ಪಾಟೀಲ ಮಾತನಾಡಿ ಕನ್ನಡಿಗರು ಪ್ರಪಂಚದ ಯಾವುದೇ ಭಾಗದಲ್ಲಿದ್ದರು ಕನ್ನಡದ ಮಕ್ಕಳೆ, ಅವರಿಗೆ ಜಾಗದ ಗಡಿಯಿಲ್ಲ. ಕನ್ನಡ ಕಾವ್ಯಗಳು ನಮ್ಮ ಬದುಕಿಗೆ ಬೆಳಕನ್ನು ಕೊಡುವ ಶಕ್ತಿಯಾದರೆ ಕನ್ನಡ ನಾಡು ಅನೇಕ ಧರ್ಮಗಳಿಂದ ಕೂಡಿದ ಕಾಮಧೇನು ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ವಹಿಸಿದ್ದರು.  ವೇದಿಕೆಯಲ್ಲಿ ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಯೋಗೀಶ್ ಕೈರೋಡಿ ಉಪಸ್ಥಿತರಿದ್ದರು. ಆರಂಭದಲ್ಲಿ ಕುವೆಂಪು ಸಾಹಿತ್ಯ ಜೀವನದ ಕುರಿತು ಸಾಕ್ಷ್ಯ ಚಿತ್ರ ಪ್ರದರ್ಶಿಸಲಾಯಿತು. 

ಸ್ಮಿತಾ ಭಟ್ ಕಾರ್ಯಕ್ರಮವನ್ನು ನಿರೂಪಿಸಿ, ಕನ್ನಡ ವಿಭಾಗದ ಉಪನ್ಯಾಸಕ ಹರೀಶ್ ಟಿ. ಜಿ. ವಂದಿಸಿದರು.

BREAKING NEWS
Loading latest news...
Join our WhatsApp Channel Powered By : Online Pudu