ಚಾಲನೆಯಲ್ಲಿದ್ದ ಕಾರಿನಲ್ಲಿಯೇ ಪಟಾಕಿ ಸಿಡಿಸಿದ ಆರೋಪಿ ಮೇಲೆ ಪ್ರಕರಣ ದಾಖಲು: ಕಾರು ವಶಕ್ಕೆ

ಉಡುಪಿ: ಇಲ್ಲಿನ ಮಣಿಪಾಲದ ಡಾ.ವಿ.ಎಸ್.ಆಚಾರ್ಯ ರಸ್ತೆಯಲ್ಲಿ ಅ.25ರ ರಾತ್ರಿ ಕಾರಿನ ಮೇಲೆ ಪಟಾಕಿಯನ್ನು ಸಿಡಿಸಿ ಅಪಾಯವಾಗುವ ರೀತಿಯ ಕಾರು ಚಲಾಯಿಸಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಮಣಿಪಾಲ ಪೊಲೀಸರು ಕಾರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. 

ಅಪಾಯಕಾರಿ ರೀತಿಯಲ್ಲಿ ಕಾರು ಚಲಾಯಿಸಿದಾತ ವಿಶಾಲ್ ಕೊಹ್ಲಿ(26) ಎಂದು ಗುರುತಿಸಲಾಗಿದೆ. 

ಮಣಿಪಾಲದ ವಿ.ಪಿ.ನಗರದಲ್ಲಿ ವಾಸವಾಗಿರುವ ವಿಶಾಲ್ ಕೊಹ್ಲಿ ಸೆಲೂನ್ ಒಂದರಲ್ಲಿ ಕೆಲಸ ಮಾಡುತಿದ್ದಾನೆ ಎಂದು ತಿಳಿದುಬಂದಿದೆ. ಅ.25ರ ಮಂಗಳವಾರ ರಾತ್ರಿ 9.30ರ ಸುಮಾರಿಗೆ ಮಣಿಪಾಲದ ಶಿವಳ್ಳಿ ಗ್ರಾಮದ ಡಾ.ವಿ.ಎಸ್.ಆಚಾರ್ಯ ರಸ್ತೆಯಲ್ಲಿ ನಿರ್ಲಕ್ಷ್ಯತನ, ಅಜಾಗರೂಕತೆ ಹಾಗೂ ಅಪಾಯಕಾರಿ ರೀತಿಯಲ್ಲಿ ಕಾರಿನ ಮೇಲೆ ಪಟಾಕಿ ಇಟ್ಟು ಸಿಡಿಸುತ್ತಾ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾನೆ. ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಬಿತ್ತರಗೊಂಡಿದ್ದು, ವೈರಲ್ ಆಗಿತ್ತು.

ಮಾಹಿತಿ ಪಡೆದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ.ಹಾಕಿ ಅವರ ಮಾರ್ಗದರ್ಶನದಂತೆ ಮಣಿಪಾಲ ಪೊಲೀಸ್ ಠಾಣಾ ಪಿಎಸ್‌ಐ ರಾಜಶೇಖರ್ ವಂದಲಿ , ಎಎಸ್ಸೆ ಶೈಲೇಶ್ ಕುಮಾರ್ ಹಾಗೂ ಹೆಡ್‌ಕಾನ್‌ಸ್ಟೇಬಲ್ ಪ್ರಸನ್ನ ಅವರು ಸಂಬಂಧಿತ ಕಾರು ಹಾಗೂ ಚಾಲಕ ವಿಶಾಲ್ ಕೊಹ್ಲಿಯನ್ನು ಸಿಂಡಿಕೇಟ್ ವೃತ್ತದ ಬಳಿ ವಶಕ್ಕೆ ಪಡೆದುಕೊಂಡಿದ್ದಾರೆ. ಮಣಿಪಾಲ ಪಿಎಸ್‌ಐ ರಾಜಶೇಖರ ವಂದಲಿ ಅವರ ಸ್ವದೂರಿನ ಮೇಲೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu