-->

ಗುಜರಾತ್ ಉದ್ಘಾಟನೆಯಾದ ಐದೇ ದಿನಕ್ಕೆ ಕುಸಿದ ತೂಗುಸೇತುವೆ: ಜಲಸಮಾಧಿಯಾದವರ ಸಂಖ್ಯೆ 100ಕ್ಕೆ ಏರಿಕೆ

ಗುಜರಾತ್ ಉದ್ಘಾಟನೆಯಾದ ಐದೇ ದಿನಕ್ಕೆ ಕುಸಿದ ತೂಗುಸೇತುವೆ: ಜಲಸಮಾಧಿಯಾದವರ ಸಂಖ್ಯೆ 100ಕ್ಕೆ ಏರಿಕೆ

ಅಹಮದಾಬಾದ್: ಗುಜರಾತ್‌ನಲ್ಲಿ ರವಿವಾರ ಸಂಜೆ ಸಂಭವಿಸಿರುವ ತೂಗುಸೇತುವೆ ದುರಂತದಲ್ಲಿ ಜಲಸಮಾಧಿಯಾದವರ ಸಂಖ್ಯೆ 100ರ ಗಡಿ ದಾಟಿದೆ. ಮೃತಪಟ್ಟವರಲ್ಲಿ 30 ಮಕ್ಕಳು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. 

ಮೊಬಿರ್ ಜಿಲ್ಲೆಯ ಮಚ್ಚು ನದಿಗೆ ಮರು ನಿರ್ಮಾಣಗೊಂಡ ತೂಗುಸೇತುವೆ ಮೇಲೆ ಛತ್ ಪೂಜೆಯ ನಿಮಿತ್ತ ಕೆಲವು ವಿಧಿವಿಧಾನಗಳನ್ನು ನೆರವೇರಿಸಲು ನದಿ ತೀರದಲ್ಲಿ ಭಾರೀ ಜನಸ್ತೋಮ ಜಮಾಯಿಸಿತ್ತು. ಭಾನುವಾರ ಸಂಜೆ 6.30ಕ್ಕೆ ಪ್ರವಾಸಿಗರು ಸೇರಿದಂತೆ 500ಕ್ಕೂ ಅಧಿಕ ಮಂದಿ ಈ ಸೇತುವೆಯ ಮೇಲೆ ನಿಂತಿದ್ದರು. ಈ ವೇಳೆ ಸೇತುವೆ ಕುಸಿದಿದ್ದು, 100ಕ್ಕೂ ಅಧಿಕ ಮಂದಿ ಜಲಸಮಾಧಿಯಾಗಿದ್ದಾರೆ. 

ಆರಂಭದಲ್ಲಿ ಸಾವಿನ ಸಂಖ್ಯೆ 30 ಎಂದು ಅಂದಾಜಿಸಲಾಗಿತ್ತು. ಆದರೆ ಸೋಮವಾರ ಬೆಳಗ್ಗಿನ ಜಾವದ ವೇಳೆಗೆ ಬಂದಿರುವ ವರದಿಯ ಪ್ರಕಾರ 100 ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ನದಿಗೆ ಬಿದ್ದ ಕೆಲವರು ಈಜಿ ದಡ ಸೇರಿದ್ದಾರೆ. ಕಾರ್ಯಾಚರಣೆ ನಡೆಸಿ 117 ಮಂದಿಯನ್ನು ರಕ್ಷಿಸಲಾಗಿದೆ. 19 ಮಂದಿ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರು ಸಾವು - ಬದುಕಿನ ನಡುವೆ ಹೋರಾಡುತ್ತಿದ್ದರೆ,  ನಾಪತ್ತೆಯಾದ ಹಲವರಿಗಾಗಿ ಶೋಧಕಾರ್ಯ ನಡೆಯುತ್ತಿದೆ.

230 ಮೀಟರ್ ಉದ್ದದ ಈ ತೂಗುಸೇತುವೆಯು 140 ವರ್ಷಗಳ ಹಿಂದೆ ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡಿತ್ತು. ಅಂದು ಇದರ ನಿರ್ಮಾಣಕ್ಕಾಗಿ ಬಳಸಿರುವ ಎಲ್ಲಾ ವಸ್ತುಗಳನ್ನು ಇಂಗ್ಲೆಂಡ್‌ನಿಂದ ತರಿಸಲಾಗಿತ್ತು. 1879 ಫೆಬ್ರವರಿ 20ರಂದು ಅಂದಿನ ಮುಂಬೈ ಗವರ್ನರ್ ರಿಚರ್ಡ್ ಟೆಂಪಲ್ ಈ ಸೇತುವೆಯ ಉದ್ಘಾಟನೆ ಮಾಡಿದ್ದರು. ಇದನ್ನು ಜುಲ್ಲೋ ಫೂಲ್ ಎಂದು ಕರೆಯುತ್ತಿದ್ದರು. ಈ ಸೇತುವೆಯು ಮಹಾಪ್ರಭುಜಿಯನ್ನು ಸಮಕಾಂತ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುತಿತ್ತು. 2001ರ ಭೂಕಂಪದ ಸಂದರ್ಭದಲ್ಲಿ ಈ ಸೇತುವೆಗೆ ತೀವ್ರ ಹಾನಿಯಾಗಿತ್ತು. ಅಂದಾಜು 2 ಕೋಟಿ ರೂ. ವೆಚ್ಚದಲ್ಲಿ ಇತ್ತೀಚೆಗಷ್ಟೇ ನವೀಕರಣಗೊಂಡಿದ್ದ ಈ ಸೇತುವೆ ಮರು ಉದ್ಘಾಟನೆಯಾದ ಐದೇ ದಿನಕ್ಕೆ ಕುಸಿದಿದೆ.

Ads on article

Advertise in articles 1

advertising articles 2

Advertise under the article