-->

ಅಮಿತ್ ಶಾ ಮನೆ ಮುಂದೆ ಮೌನ ಪ್ರತಿಭಟನೆಗೆ ಯತ್ನಿಸಿದ್ದ ನವ್ಯಶ್ರೀಗೆ ಅವಕಾಶ ನಿರಾಕರಣೆ: ಕರ್ನಾಟಕ ಪೊಲೀಸ್ ಮೇಲೆ ಕಿಡಿ

ಅಮಿತ್ ಶಾ ಮನೆ ಮುಂದೆ ಮೌನ ಪ್ರತಿಭಟನೆಗೆ ಯತ್ನಿಸಿದ್ದ ನವ್ಯಶ್ರೀಗೆ ಅವಕಾಶ ನಿರಾಕರಣೆ: ಕರ್ನಾಟಕ ಪೊಲೀಸ್ ಮೇಲೆ ಕಿಡಿ

ದೆಹಲಿ: ಕೇಂದ್ರದ ಗೃಹ ಸಚಿವ ಅಮಿತ್ ಶಾ ಮನೆ ಮುಂದೆ ಮೌನ ಪ್ರತಿಭಟನೆ ನಡೆಸಲು ಯತ್ನಿಸಿರುವ ಚನ್ನಪಟ್ಟಣ ಮೂಲದ ಕಾಂಗ್ರೆಸ್ ನಾಯಕಿ ನವ್ಯಶ್ರೀ ರಾವ್‌ಗೆ ಅವಕಾಶ ದೊರಕಿಲ್ಲ. ಆದ್ದರಿಂದ ಅವರು ಈ ಬಗ್ಗೆ ಸುದ್ದಿಗಾರರ ಮುಂದೆ ಅಸಮಾಧಾನ ಹೊರಹಾಕಿದ್ದಾರೆ.

'ಶುಕ್ರವಾರ ಸಂಜೆ ದೆಹಲಿಗೆ ಬಂದಿದ್ದೆ. ಶನಿವಾರ ಅಮಿತ್ ಶಾ ಅವರ ಮನೆಯ ಮುಂದೆ ಪ್ರತಿಭಟನೆ ನಡೆಸಬೇಕು ಎಂದು ಹೋಗಿದ್ದೆ. ಆದರೆ ಅಮಿತ್ ಶಾ ಮನೆಯಲ್ಲಿದ್ದರೂ ನಮಗೆ ಪ್ರತಿಭಟನೆಗೆ ಅವಕಾಶ ಸಿಗಲಿಲ್ಲ. ಆ.15 ರಂದು ಕೂಡ ಬೆಳಗಾವಿಯಲ್ಲಿ ಪ್ರತಿಭಟನೆ ಮಾಡಲು ಹೋಗುವಾಗಲೂ ನಮ್ಮನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಕರ್ನಾಟಕದಲ್ಲಿ‌ ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕುವ ಕಾರ್ಯ ಮಾಡಲಾಗಿತ್ತು. ಅಮಿತ್ ಶಾ ಅವರ ಮನೆಯ ಬಳಿ ಹೋದಾಗ ನಮ್ಮನ್ನು ಥಾಣಾ ಪೊಲೀಸ್ ಠಾಣೆಗೆ ಕರೆದೊಯ್ದಿದರು. ಪ್ರತಿಭಟನೆಯ ಪ್ರಯತ್ನ ಬೇಡ ಎಂದು ಅವರು ಮನವಿ ಮಾಡಿದ್ದರು. ಆಗ ನಾನು ಎಫ್‌ಐಆರ್ ಪ್ರತಿ ಕೊಟ್ಟು ನನಗೆ ಆಗಿರುವ ಅನ್ಯಾಯದ ಬಗ್ಗೆ ವಿವರಿಸಿದೆ' ಎಂದು ಹೇಳಿದರು.

ರಾಜ್ಯದಲ್ಲಿ ಅದರಲ್ಲೂ ಬೆಳಗಾವಿ ಪೊಲೀಸ್ ಇಲಾಖೆಯು ಪ್ರಕರಣದ ದಿಕ್ಕು ತಪ್ಪಿಸುವ ಕಾರ್ಯ ಎಸಗುತ್ತಿದೆ. ರಾಜಕುಮಾರ್ ಟಾಕಳೆಯ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತಿಲ್ಲ. ಆರೋಪಿಯನ್ನು ಇನ್ನೂ ಬಂಧಿಸಿಲ್ಲ. ಹಾಗಾಗಿ ಪೊಲೀಸ್ ಇಲಾಖೆಯ ವೈಫಲ್ಯವನ್ನು ಖಂಡಿಸಿ ಉನ್ನತ ಮಟ್ಟದಲ್ಲಿ ನ್ಯಾಯ ಕೇಳಲು ದೆಹಲಿಗೆ ಆಗಮಿಸಿದ್ದೇನೆ ಎಂದು ವಿವರಿಸಿದರು.

ರಾಜಕುಮಾರ್ ಟಾಕಳೆ ಓರ್ವ ಅತ್ಯಾಚಾರ ಆರೋಪಿ. ಆತ ನನ್ನ ಖಾಸಗಿ ವೀಡಿಯೋವನ್ನು ಹರಿಯಬಿಟ್ಟು ಮಾನಹಾನಿ ಎಸಗಿದ್ದಾನೆ. ಆದರೂ ಆತನ  ಬಂಧನ ಇನ್ನೂ ಆಗಿಲ್ಲ. ಇನ್ನು ನಟೋರಿಯಸ್, ಟೆರರಿಸ್ಟ್‌ಗಳನ್ನು ಹೇಗೆ ಬಂಧಿಸ್ತಾರೆ ? ಎಂದು ಪೊಲೀಸ್ ಇಲಾಖೆ ವಿರುದ್ಧ ನವ್ಯಶ್ರೀ ರಾವ್ ಆಕ್ರೋಶ ಹೊರಹಾಕಿದ್ದಾರೆ. ಆರೋಪಿಯ ಬಂಧನವಾಗದೆ ಇರೋದರಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗಿದೆ. ಅಮಿತ್ ಶಾ ಅವರನ್ನು ಭೇಟಿಯಾಗಲು ಅವಕಾಶ ದೊರಕಿದೆ. ಆದರೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ನವ್ಯಶ್ರೀಗೆ ಆದತಂಹ ಅನ್ಯಾಯ ಇನ್ಯಾವ ಹೆಣ್ಣಿಗೂ ಆಗಬಾರದು. ಪ್ರತಿಯೊಬ್ಬರು ದೆಹಲಿಗೆ ಬಂದು ನ್ಯಾಯ ಪಡೆಯುವ ಸ್ಥಿತಿ ನಿರ್ಮಾಣ ಆಗಬಾರದು. ರಾಜ್ಯದಲ್ಲೇ ನ್ಯಾಯ ಸಿಗುವಂತಾಗಬೇಕು ಎಂದು ಹೇಳಿದರು.

Ads on article

Advertise in articles 1

advertising articles 2

Advertise under the article