ಬೆಳ್ತಂಗಡಿ: ಸಂಬಂಧಿ ಯುವಕನಿಂದಲೇ ಹತ್ಯೆಯಾದ ಹತಭಾಗ್ಯ ಅಜ್ಜಿ; ಕಾಸಿಗಾಗಿ ಕೊಲೆ

ಬೆಳ್ತಂಗಡಿ: ಇಲ್ಲಿನ ಬೆಳಾಲು ಗ್ರಾಮದ ಕೆರೆಕೋಡಿ ಎಂಬಲ್ಲಿ 85 ವರ್ಷ ಪ್ರಾಯದ ವೃದ್ಧೆ ಅಕ್ಕು ಎಂಬವರನ್ನು ಕೊಲೆಗೈದು ದರೋಡೆಗೈದ ಪ್ರಕರಣವನ್ನು 24 ಗಂಟೆಯೊಳಗೆ ಬೇಧಿಸಿರುವ ಪೊಲೀಸರು ಆರೋಪಿಯನ್ನು ಹೆಡೆಮುರಿಕಟ್ಟಿ ಬಂಧಿಸಿದ್ದಾರೆ.

ಕಡಿರುದ್ಯಾವರ ಗ್ರಾಮದ ಕಾನರ್ಪ ಕುಮೇರು ನಿವಾಸಿ ಅಶೋಕ್ (28) ವೃದ್ಧೆಯನ್ನು ಕೊಲೆಗೈದ ಆರೋಪಿ.



                  ‌‌ಕೊಲೆಯಾದ ವೃದ್ಧೆ ಅಕ್ಕು

ಅಶೋಕ್ ಕೊಲೆಯಾದ ಅಕ್ಕು ಅವರ ಪುತ್ರ ಡೀಕಯ್ಯ ಅವರ ಪತ್ನಿಯ ಸಹೋದರಿಯ ಪುತ್ರನಾಗಿದ್ದ. ಈತ ಐಸ್ ಕ್ರೀಂ ವಾಹನದಲ್ಲಿ ಕೆಲಸ ಮಾಡುತ್ತಿದ್ದ. ಮದ್ಯವ್ಯಸನಿಯಾಗಿದ್ದ ಅಶೋಕ್ ಕೆಲ ಸಮಯಗಳಿಂದ ಕೆಲಸ ತೊರೆದು ಮನೆಯಲ್ಲಿಯೇ ಇದ್ದ. ಈತ ಸಂಬಂಧಿಯಾಗಿದ್ದ ಹಿನ್ನೆಲೆಯಲ್ಲಿ ಡೀಕಯ್ಯ ಅವರ ಮನೆಗೆ ಹಣ ಕೇಳಲು ಬರುತ್ತಿದ್ದ. 

ಆದರೆ ನಿನ್ನೆ ಮನೆಗೆ ಬಂದ ಅಶೋಕ್ ಬೆಳಗ್ಗಿನ ಹೊತ್ತು ಮನೆಯಲ್ಲಿ ಯಾರೂ ಇಲ್ಲದ ವೇಳೆ ವೃದ್ಧೆ ಅಕ್ಕುವಿಗೆ ಹಲ್ಲೆ ಮಾಡಿ ಆಕೆಯ ಕಿವಿಯೋಲೆಯನ್ನು ಹರಿದು ತೆಗೆದಿದ್ದಾನೆ. ಅಲ್ಲದೆ ಮನೆಯಲ್ಲಿದ್ದ ಹಣವನ್ನು ದರೋಡೆಗೈದಿದ್ದಾನೆ. ಮನೆಗೆ ಅಶೋಕ್ ಬಂದಿರುವುದನ್ನು ಸ್ಥಳೀಯ ನಿವಾಸಿಯೊಬ್ಬರು ನೋಡಿದ್ದರು. ಇದನ್ನು‌ ಆತ ಡೀಕಯ್ಯ ಅವರಿಗೆ ಆತ ತಿಳಿಸಿದ್ದಾನೆ. ಅವರು ಅಶೋಕ್ ಗೆ ಕರೆ ಮಾಡಿದಾಗ ಆತ ತಾನು 'ನಾರಾವಿಯಲ್ಲಿ ಇದ್ದೇನೆ' ಎಂದು ಹೇಳಿದ್ದಾನೆ.


ಅನುಮಾನದ ಹಿನ್ನೆಲೆಯಲ್ಲಿ ಅವರು ಧರ್ಮಸ್ಥಳ‌ ಪೊಲೀಸರಿಗೆ ಆತನ ಮೊಬೈಲ್ ಸಂಖ್ಯೆ ನೀಡಿದ್ದಾರೆ. ಆತ ಮೊಬೈಲ್ ಲೊಕೇಷನ್ ಪರಿಶೀಲನೆ ಮಾಡಿದಾಗ ಆತ ನಾರಾವಿಯಲ್ಲಿ ಇರದೆ ಬದಲಾಗಿ ಉಜಿರೆಯ ಸೋಮಂತಡ್ಕದಲ್ಲಿರೋದು ಪತ್ತೆಯಾಗಿದೆ. ಆತನಿದ್ದ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿದಾಗ ಅಶೋಕ್ ಕಂಠಪೂರ್ತಿ ಮದ್ಯಸೇವನೆ ಮಾಡಿ ಬಾರ್ ನಲ್ಲಿದ್ದ. ಅಜ್ಜಿಯನ್ನು ಕೊಲೆಗೈದು ದರೋಡೆ ಮಾಡಿದ ದುಡ್ಡಲ್ಲಿ ಮಜಾ ಮಾಡುತ್ತಿದ್ದ ವೇಳೆ ಪೊಲೀಸರು ಆತನನ್ನು ಬಂಧಿಸಿ, ಕಿವಿಯೋಲೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ‌. ಇದೀಗ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

BREAKING NEWS
Loading latest news...
Join our WhatsApp Channel Powered By : Online Pudu