ಮಂಗಳೂರು - ಪಡೀಲು ಜಂಕ್ಷನ್ ವಿಭಾಗದ ಹಳಿ ಮೇಲೆ ಗುಡ್ಡ ಕುಸಿತ: ಇಂದು ರೈಲು ಸಂಚಾರ ರದ್ದು

ಮಂಗಳೂರು: ಭಾರೀ ಮಳೆಗೆ  ಪಡೀಲು ಮತ್ತು ಮಂಗಳೂರು ಜಂಕ್ಷನ್ ವಿಭಾಗದ ನಡುವಿನ ಹಳಿಯ ಮೇಲೆ (181/200 ಕಿ.ಮೀ.) ಇಂದು ಬೆಳಗ್ಗೆ 9ಗಂಟೆ ಸುಮಾರಿಗೆ ಗುಡ್ಡ ಕುಸಿತವಾಗಿದೆ. ಇದರಿಂದ ಈ ಭಾಗದ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ. 

ರೈಲು ನಂ.06488 ಸುಬ್ರಹ್ಮಣ್ಯ ರಸ್ತೆ - ಮಂಗಳೂರು ಸೆಂಟ್ರಲ್ ಹಾಗೂ ರೈಲು ಸಂಖ್ಯೆ.06489 ಮಂಗಳೂರು ಸೆಂಟ್ರಲ್-ಸುಬ್ರಹ್ಮಣ್ಯ ಅನ್ ರಿಸರ್ವ್ಡ್ ಎಕ್ಸ್‌ಪ್ರೆಸ್ ವಿಶೇಷ ಸಂಚಾರವನ್ನು ಇಂದು ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ರೈಲು ಹಳಿಯ ಮೇಲೆ ಅಲ್ಪ ಪ್ರಮಾಣದ ಮಣ್ಣು ಬಿದ್ದಿರುವ ಹಿನ್ನೆಲೆಯಲ್ಲಿ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ. ತಕ್ಷಣದಿಂದಲೇ ಮಣ್ಣು ತೆರವು ಕಾರ್ಯ ನಡೆಯುತ್ತಿದೆ‌. ದುರಸ್ತಿ ಕಾಮಗಾರಿ ಮುಗಿದ ತಕ್ಷಣ ಮತ್ತೆ ರೈಲು ಸಂಚಾರ ಸೇವೆ ಎಂದಿನಂತೆ ನಡೆಯಲಿದೆ.