ಶಾಸಕನ ವಿರುದ್ಧ 'ಸೆಕ್ಸ್ ದಂಧೆ' ಆರೋಪ: 'ಚುನಾವಣಾ ವೆಚ್ಚಕ್ಕೆ ಹಣ ಸಂಗ್ರಹಕ್ಕೆ ದಂಧೆ', ಪ್ರೇಯಸಿಯಿಂದಲೇ ಪೊಲೀಸ್ ದೂರು

ಭುವನೇಶ್ವರ: ಒಡಿಶಾದ ಬಿಜೆಡಿಯ ತಿರ್ಟೋಲ್ ಶಾಸಕ ಬಿಜಯ ಶಂಕರ್ ದಾಸ್ ಸೆಕ್ಸ್ ದಂಧೆ ನಡೆಸುತ್ತಿದ್ದಾರೆಂದು ಅವರ ಪ್ರೇಯಸಿಯೇ ಜಗತ್‌ಸಿಂಗ್‌ಪುರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ಬಿಜಯ ಶಂಕರ್‌ ಚುನಾವಣಾ ಖರ್ಚು ವೆಚ್ಚಕ್ಕೆ ಹಣ ಸಂಗ್ರಹ ಮಾಡಲು ಸೆಕ್ಸ್ ರ್ಯಾಕೆಟ್ ನಡೆಸುತ್ತಿದ್ದಾರೆಂದು ಅವರ ಪ್ರೇಯಸಿ ಸೋಮಲಿಕಾ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಅಲ್ಲದೆ ಬಿಜಯ ಶಂಕರ್ ತನ್ನನ್ನು ವಿವಾಹವಾಗುವುದಾಗಿ ಭರವಸೆ ನೀಡಿ, ನಿಗದಿತ ದಿನಾಂಕದಂದು ಅವರು ಜಗತ್‌ಸಿಂಗ್‌ಪುರದ ಮದುವೆ ರಿಜಿಸ್ಟ್ರಾರ್ ಕಚೇರಿಗೆ ಹಾಜರಾಗಲಿಲ್ಲ. ಅವರು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿರುವ ಕಾರಣ ಅವರ ವಿರುದ್ಧ ದೂರು ದಾಖಲಿಸುತ್ತಿದ್ದೇನೆ. ನನಗೆ ನ್ಯಾಯಾಂಗದ ಮೇಲೆ ಸಂಪೂರ್ಣ ನಂಬಿಕೆಯಿದೆ. ನನಗೆ ನ್ಯಾಯ ಸಿಗುತ್ತದೆ ಎಂಬ ಭರವಸೆ ಇದೆ ಎಂದು ಸೋಮಲಿಕಾ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜಯ್ ಶಂಕರ್ ದಾಸ್ ವಿರುದ್ಧ ಕಟಕ್ ಮತ್ತು ಭುವನೇಶ್ವರದಲ್ಲಿ ಹಲವು ಪ್ರಕರಣಗಳು ಬಾಕಿ ಇವೆ.

ಬಿಜಯ್ ಶಂಕರ್ ದಾಸ್ ಹಾಗೂ ಸೋಮಲಿಕಾ ಬಹಳ ಸಮಯಗಳಿಂದ ಪ್ರೀತಿಸುತ್ತಿದ್ದರು. ಕಳೆದ ಪಂಚಾಯತ್ ಚುನಾವಣೆ ವೇಳೆ ಕೆಲ ಕಾರಣಗಳಿಂದ ಅವರಿಬ್ಬರ ಸಂಬಂಧ ಹಳಸಿತ್ತು. ಆಗ ಅವರು ತಮ್ಮ ಆತ್ಮೀಯ ಕ್ಷಣಗಳ ಕೆಲವು ಫೋಟೋಗಳನ್ನು ವೈರಲ್ ಮಾಡಿದ್ದರು. ಕಳೆದ ತಿಂಗಳು ಆಕೆ ಈ ವಿಚಾರವನ್ನು ಪೊಲೀಸ್ ವರಿಷ್ಠಾಧಿಕಾರಿ ಬಳಿಗೂ ಕೊಂಡೊಯ್ದಿದ್ದರು.

ಈತನ್ಮಧ್ಯೆ, ಇಬ್ಬರೂ ವಿವಾಹ ನೋಂದಣಿಗಾಗಿ ಮೇ 17 ರಂದು ಜಗತ್‌ಸಿಂಗ್‌ಪುರದ ವಿವಾಹ ನೋಂದಣಿ ಕಚೇರಿಗೆ ಅರ್ಜಿ ಹಾಕಿದ್ದರು. ನಿಯಮದ ಪ್ರಕಾರ ಎರಡೂ ಕಡೆಯಿಂದ ಯಾವುದೇ ದೂರು ಸ್ವೀಕರಿಸದಿದ್ದರೆ, ಮದುವೆಯ ಅರ್ಜಿಯು ಮಾನ್ಯವಾಗುತ್ತದೆ. ಹಾಗಾಗಿ, ಮದುವೆಗೆ ಅರ್ಜಿ ಸಲ್ಲಿಸಿ ಒಂದು ತಿಂಗಳು ಪೂರ್ಣಗೊಂಡ ಬಳಿಕ ಜೂನ್ 17 ರಂದು ಸೋಮಲಿಕಾ ವಿವಾಹ ನೋಂದಣಿ ಕಚೇರಿಗೆ ಬಂದಿದ್ದರು.

ಮದುವೆಯನ್ನು ನಿಗದಿಪಡಿಸಿದ ದಿನ ಜಗತ್‌ಸಿಂಗ್‌ಪುರದ ಮದುವೆಯ ರಿಜಿಸ್ಟ್ರಾರ್ ಕಚೇರಿಯಲ್ಲಿ ಬಿಜಯ್ ಶಂಕರ್ ಗೆ ಸೋಮಲಿಕಾ ಕಾಯುತ್ತಿದ್ದರೂ ಬಿಜಯ್ ಶಂಕರ್ ಬರಲೇ ಇಲ್ಲ. ಆದ್ದರಿಂದ ನಾವು ಪೊಲೀಸ್ ದೂರು ದಾಖಲಿಸಬೇಕಾಯಿತು ಎಂದು ಸೋಮಲಿಕಾ ಅವರ ತಂದೆ ಸಂಗ್ರಾಮ್ ಕಿಶೋರ್ ದಾಸ್ ತಿಳಿಸಿದ್ದಾರೆ.

ಬಿಜಯ ಶಂಕರ್ ಅವರನ್ನು ಸಂಪರ್ಕಿಸಿದಾಗ, ಆರೋಪಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಮದುವೆ ವಿಚಾರದಲ್ಲಿ ಯಾರೂ ಮಾತನಾಡಿಲ್ಲ ಎಂದು ಶುಕ್ರವಾರ ಹೇಳಿದ್ದರು. ಬಿಜಯ ಶಂಕರ್ ದಾಸ್ ಅವರ ತಂದೆ ದಿವಂಗತ ಬಿಷ್ಣು ಚರಣ್ ದಾಸ್ ಅವರು ಶಿಕ್ಷಣ ಸಚಿವರಾಗಿದ್ದರು.
BREAKING NEWS
Loading latest news...
Join our WhatsApp Channel Powered By : Online Pudu